ರಾಜ್ಯ ಸಚಿವರ ಸ್ಥಾನಮಾನ
ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಇನ್ನು ಮುಂದೆ ಪರಿಸರದ ರಾಯಭಾರಿ..
ಸಾಲು ಮರದ ತಿಮ್ಮಕ್ಕ ಅವರಿಗೆ ಪರಿಸರದ ರಾಯಭಾರಿ ಎಂಬ ವಿಶೇಷ ಬಿರುದು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಈ ವಿಷಯ ಪ್ರಕಟಿಸಿದ್ದಾರೆ. ಸಾಲು ಮರದ ತಿಮ್ಮಕ್ಕ ಅವರಿಗೆ ರಾಜ್ಯ ಸಚಿವರ ಸ್ಥಾನ ನೀಡಿ , ವಾಹನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ತುಮಕೂರಿನ ಶ್ರೀ ಸಿದ್ಧಾರ್ಥ ಶೈಕ್ಷಣಿಕ ಸಂಸ್ಥೆ ಹಾಗೂ ಸಾಲುಮರದ ತಿಮ್ಮಕ್ಕ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ವಸಂತ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವೃಕ್ಷ ಮಾತೆ, ಪದ್ಮಶ್ರೀ ನಾಡೋಜ, ಡಾ. ಸಾಲು ಮರದ ತಿಮ್ಮಕ್ಕ ಅವರ 111ರ ಜನ್ಮ ಸಂಭ್ರಮ ಹಾಗೂ ನ್ಯಾಷನಲ್ ಗ್ರೀನರಿ ಅವಾರ್ಡ್-2020ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ಪ್ರಕಟಿಸಿದ್ದಾರೆ.
ಸಾಲು ಮರದ ತಿಮ್ಮಕ್ಕ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋದರೆ ಅದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅವರನ್ನು ಕುರಿತ ವೆಬ್ ಸೈಟ್ ಅಭಿವೃದ್ಧಿ ಪಡಿಸಿ ದೇಶದ ತುಂಬೆಲ್ಲಾ ಪ್ರಚಾರವಾಗುವಂತೆ ನೋಡಿಕೊಳ್ಳಲು ವಾರ್ತಾ ಇಲಾಖೆಗೆ ಸೂಚಿಸಲಾಗುವುದು; ಸಾಲುಮರದ ತಿಮ್ಮಕ್ಕ ಅವರಲ್ಲದೇ ಈ ರೀತಿಯ ಸೇವೆಗಳನ್ನು ಮಾಡಿರುವವರ ವೆಬ್ ಸೀರೀಸ್ ನ್ನು ಕೂಡ ವಾರ್ತಾ ಇಲಾಖೆ ನಿರ್ಮಿಸಲಿದೆ ಎಂದರು.
ತಿಮ್ಮಕ್ಕನ ಊರಿನ ಬಳಿ 10 ಎಕರೆ ಸ್ಥಳ ನಿಗದಿ ಮಾಡಿ ಆದೇಶವನ್ನು ಶೀಘ್ರವಾಗಿ ಹೊರಡಿಸಲಾಗುವುದು. ತಿಮ್ಮಕ್ಕ ಅವರಿಗೆ ಈಗಾಗಲೇ ಬಿಡಿಎ ನಿವೇಶನ ನೀಡಿ ನೋಂದಾಣಿಯನ್ನು ಮಾಡಿಕೊಡಲಾಗಿದೆ. ನಿವೇಶನವನ್ನು ಭದ್ರಪಡಿಸಲು ತಂತಿಬೇಲಿ ಹಾಕಬೇಕು. ಶೀಘ್ರವಾಗಿ ಮನೆಯನ್ನು ಕಟ್ಟಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಸಾಧನೆ ಮಾಡಲು ಪದವಿ, ನೆರವು ಅವಕಾಶಗಳು ಅಗತ್ಯ ವಿಲ್ಲ. ಒಂದು ಧ್ಯೇಯ ಇದ್ದಲ್ಲಿ ಕಾಯಕನಿಷ್ಠೆಯಿಂದ ಸರ್ವರಿಗೂ ಒಳ್ಳೆಯದಾಗುವ ಕೆಲಸ ಮಾಡಿದರೆ ಇಡೀ ಜಗತ್ತಿಗೆ ಬದಲಾವಣೆ ತರುವ ಪ್ರಭಾವಿ ಶಕ್ತಿಯಾಗಬಹುದು ಎನ್ನುವ ಉದಾಹರಣೆ ನಮ್ಮವರೇ ಆದ ಸಾಲು ಮರದ ತಿಮ್ಮಕ್ಕ ಅವರದು ಎಂದರು.
ತಿಮ್ಮಕ್ಕ ಬಹು ದೊಡ್ಡ ಪ್ರೇರಣಾ ಶಕ್ತಿ
ಸಾಲು ಮರದ ತಿಮ್ಮಕ್ಕನ ಮುಖದಲ್ಲಿ ಮುಗ್ಧತೆ ಇದೆ. ಅವರ ಪ್ರಾಂಜಲ ಮನಸ್ಸು ಮತ್ತು ಶುದ್ಧ ಅಂತ:ಕರಣದಿಂದ ಮಾಡಿದ ಕಾಯಕ ಯೋಗದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಸಾಧನೆ ಕಡಿಮೆ ಸಾಧನೆಯಲ್ಲ; ಪ್ರಶಸ್ತಿ ಗಳು ತಿಮ್ಮಕ್ಕ ರನ್ನು ಹುಡುಕಿಕೊಂಡು ಬಂದಿವೆ. ಆಕೆಯ ಕತೃತ್ವ ಶಕ್ತಿ ಅಷ್ಟಿದೆ. ತಮ್ಮ ಊರಿನ ನಾಲ್ಕು ಕಿಮೀ ಉದ್ದಕ್ಕೂ ಸಸಿಗಳನ್ನು ನೆಟ್ಟು ಬೆಳೆಸಿರುವುದು ಅಸಾಮಾನ್ಯ. ಸಾಲು ಮರದ ತಿಮ್ಮಕ್ಕ ಪ್ರಸಿದ್ದರಾದ ನಂತರ ಬಹಳ ಜನರಿಗೆ ಪ್ರೇರಣೆಯಾಗಿದ್ದಾರೆ. ಪ್ರತಿ ಶಾಲೆ ಹಾಗೂ ಊರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಅದ್ಭುತವಾಗಿದೆ. ಆಕೆ ಅಷ್ಟು ದೊಡ್ಡ ಪ್ರೇರಣಾ ಶಕ್ತಿ ಎಂದರು.
ತಿಮ್ಮಕ್ಕ ಅವರ ಬಗ್ಗೆ ಪ್ರಚಾರ ಎಂದರೆ ಹಸಿರು, ಪರಿಸರ, ಶುದ್ಧೀಕರಣದ ಪ್ರಚಾರ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.