ರೇಟಿಂಗ್ 4.5/5
ನಿರ್ಮಾಣ : ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್
ಅಮರಾಪುರ ಅರಕೇಶ್ವರ ಭಯಂಕರ
ಸ್ವಾತಂತ್ರ್ಯ ಪೂರ್ವದಿಂದ ಆರಂಭಿಸಿ 70ರ ದಶಕದವರೆಗೆ ಬಂದು ನಿಲ್ಲುವ ಕಥೆಯಲ್ಲಿ ಭೂಗತ ಜಗತ್ತಿನ ವಿಸ್ಮಯ ಹಾಗೂ ಅಳಿದು ಹೋದ ರೋಮಾಂಚಕ ಕಾಲಘಟ್ಟ ಎದುರು ನಿಲ್ಲುತ್ತದೆ. ಜೊತೆಗೆ ತನ್ನ ಕೌತುಕ ನಡೆಯಿಂದ ಬೆಚ್ಚಿ ಬೀಳಿಸುತ್ತದೆ..
ಅದೇ ಕಬ್ಜ..!
ಸಾವಿನ ಭಯವಿಲ್ಲದವನು ಕದ ತಟ್ಟಿ ಎಂಟ್ರಿ ಪಡೆಯುವುದು ಭೂಗತ ಜಗತ್ತಿಗೆ.. ಸಾವಿನಿಂದಲೇ ಕಿಚ್ಚು ಹತ್ತಿಸಿಕೊಂಡವನು ಭೂಗತ ಜಗತ್ತಿಗೇ ಹತ್ತಿರವಾಗುವವನು..
ಸಂಗ್ರಾಮನಗರದಿಂದ ಆರಂಭವಾಗಿ
ಅಮರಾಪುರಕ್ಕೆ ಬಂದು ಬಳಿಕ ದೇಶವ್ಯಾಪಿ ಸಂಚರಿಸಿವ ಕಾಲ್ಪನಿಕ
ಕಥೆಯಲ್ಲಿ ವಿಜೃಂಭಿಸುವುದು ಅರಕೇಶ್ವರ ಎಂಬ ನೈಜ ಪಾತ್ರ..
ಭೂಗತ ಜಗತ್ತು ರಕ್ತ ಮಾಂಸಗಳಿಂದಲೇ ತುಂಬಿ ಹೋಗಿರುತ್ತದೆ. ಕೊಚ್ಚುವ ಕೈ ಬಲವಾಗಿದ್ದರೆ, ರುಂಡಗಳು ಚೆಂಡಾಗುತ್ತವೆ, ರಕ್ತ ಕಾರಂಜಿಯಾಗುತ್ತದೆ. ಹೃದಯಗಳು ಆರ್ದ್ರ ಗೊಳ್ಳುತ್ತವೆ. ಥೇಟ್ ಕಾಲ್ತುಳಿತಕ್ಕೆ ಸಿಕ್ಕಿ ಚಿಮ್ಮುವ ಒಣ ಮಣ್ಣಿನಂತೆ..
ಅರಕೇಶ್ವರ ಆರ್ಭಟಕ್ಕೆ ಸಿಲುಕುವ ದೇಹಗಳು ಛಿದ್ರವಾಗುತ್ತವೆ. ರಕ್ತದೋಕುಳಿ ರಸ್ತೆಗಳ ತುಂಬೆಲ್ಲಾ ಹರಿದಾಡುತ್ತದೆ. ಬುಲೆಟ್ ಗಳು ಮಳೆಹನಿಯ ಸ್ವರೂಪದಂತೆ ಕಾಣುತ್ತದೆ.
ನಿರ್ದೇಶಕ ಆರ್.ಚಂದ್ರು ವಿಸ್ಮಯವಾಗುವುದು ಇಲ್ಲಿಯೇ.. ರೌಡಿ ಸಾಮ್ರಾಜ್ಯವನ್ನು ಉಗ್ರ ಸ್ವರೂಪವಲ್ಲದೇ ಕ್ಲಾಸಿಕ್ ರೂಪದಲ್ಲಿ ಕಟ್ಟಿಕೊಟ್ಟಿರುವ ಕೌತುಕ ಮತ್ತು ಅಸಾಧಾರಣ ಮೇಕಿಂಗ್ ನಲ್ಲಿ ಕಣ್ಮನ ತಣಿಸುವ ಚಿತ್ರಣದ ಹೆಗ್ಗಳಿಕೆ.
ಏಕೆಂದರೆ ಅರಕೇಶ್ವರ ವಿದ್ಯಾವಂತ, ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದವನು. ಬುದ್ಧಿವಂತ ಸ್ವರೂಪಗಳಲ್ಲಿ ಆತ ವಿಜೃಭಿಸಬೇಕು. ಹಾಗೆಯೇ ಕೌಟುಂಬಿಕ ಪ್ರೇಮಿ ಮನೆತನವನ್ನು ಕಾಪಾಡುವವನು..
ಹಾಗಾಗಿ ಪ್ರತಿ ಸಾಮ್ರಾಜ್ಯ ವಿಸ್ತರಣೆಯಲ್ಲಿ ಬುದ್ಧಿಮತ್ತೆ ಪ್ರದರ್ಶನ ಮಾಡುವ ಅರಕೇಶ್ವರ ಯಾವುದೇ ಪ್ರತೀಕಾರದ ಗುಣಗಳನ್ನು ಹೊಂದಿರುವುದಿಲ್ಲ. ಬದಲಿಗೆ ಅನಂತ ಸಾಧ್ಯತೆಗಳ ಬಗ್ಗೆ ಅಸಾಧಾರಣ ಕುತೂಹಲ ಮತ್ತು ಬದ್ಧತೆ ಹೊಂದಿರುವ ಮಾನವಂತ.
ಪತ್ನಿ ಮಧುಮತಿ ಮತ್ತು ಇಬ್ಬರು ಮಕ್ಕಳ ಸಂಸಾರವಿದ್ದರೂ ಎದುರಾಳಿ ಪಡೆಗೆ ಎದೆ ಕೊಡುವ ಶೌರ್ಯವಂತ. ಆದರೆ ವೀರ್ ಬಹದ್ದೂರ್ ಎಂಬ ಮಾವನೂ ಮತ್ತು ಮೀರ್ ಸಾಧಕ ಆಡುವ ಆಟದಲ್ಲಿ ಆತ ಬಲಿಪಶು ಅಥವಾ ಅದನ್ನು ಮೆಟ್ಟಿನಿಲ್ಲುವ ಧೀರಾ ಶೂರನೇ ಎಂಬುದು ಮುಂದಿನ ಭಾಗದ ಕುತೂಹಲ.
ಇಡೀ ಚಿತ್ರವನ್ನು ಆವರಿಸಿರುವ ಉಪೇಂದ್ರ ಸಂಯಮ ಕಾಯ್ದುಕೊಂಡು ನಟಿಸಿ ವಿಸ್ಮಯ ಮೂಡಿಸಿದ್ದಾರೆ. ಸುದೀಪ್ ಕಥೆ ಹೇಳುವುದಕ್ಕೆ ಸೀಮಿತ. ಪ್ರೇಮಿಯಾಗಿ ಶ್ರೀಯ ಶರಣ್ ಅವರದು ಇಷ್ಟವಾಗುವ ನಟನೆ.
ಇನ್ನುಳಿದಂತೆ ಡಾನ್ ಸಾಮ್ರಾಜ್ಯದ ವೀರ ಪರಂಪರೆಯಲ್ಲಿ ಎದುರಾಗುವ ಪಾತ್ರಗಳಿಗೆ ಲೆಕ್ಕವೇ ಇಲ್ಲ. ರಕ್ತ ಸಿಕ್ತ ಅಧ್ಯಾಯದ ಕಥೆ ಹೇಳುವಾಗ ರಕ್ತದಲ್ಲಿ ಸ್ನಾನ ಮಾಡಿಸಿದ ಅನುಭವ ನೀಡುವುದು ವಿಶೇಷ.
ಮೇಕಿಂಗ್ ನಲ್ಲಿ ಕಿಂಗ್ ಆಗುವತ್ತ ಹೆಜ್ಜೆ ಇಟ್ಟಿರುವ ನಿರ್ದೇಶಕ ಆರ್.ಚಂದ್ರು, ವಿಸ್ಮಯ ಹಾಗೂ ವಿಸ್ತಾರದ ರೂಪವನ್ನು ಮೊಗೆದುಕೊಟ್ಟಿದ್ದಾರೆ. ಹಾಗಾಗಿ ಇದು ಕನ್ನಡದ ಅದ್ಭುತ ಸಿನಿಮಾಗಳ ಸಾಲಿನಲ್ಲಿ ನಿಲ್ಲಬಲ್ಲದು ಎಂಬುದು ಸಿನಿಮಾ ನೋಡಿ ಮುಗಿಸಿದಾಗ ಅನಿಸುತ್ತದೆ. ಏಕೆಂದರೆ ಇದು ಮೇಕಿಂಗ್ ಮತ್ತು ಕಟೆಂಟ್ ಎರಡೂ ಇರುವ ಚಿತ್ರ.
ಕೊನೆಯಲ್ಲಿ ಉಪ್ಪಿ ಜೊತೆಗೆ ಕಿಚ್ಚ ಮತ್ತು ಶಿವಣ್ಣ ಎಂಟ್ರಿ ಹೊಸ ಅಧ್ಯಾಯ ಬರೆಯ ಬಲ್ಲದೇ ಎಂಬುದನ್ನು ಕಾದು ನೋಡಬೇಕಾಗಿದೆ.
ತುಂಬ ಸರಳ ಸುಂದರ ವಿಮರ್ಶೆ ಅಭಿನಂದನೆಗಳು ಸರ್