ಕನ್ನಡದ ಹೆಸರಾಂತ ನಟಿ ಸುಧಾರಾಣಿ ಭಯಾನಕ ಎನಿಸುವ ಕಥಾಹಂದರ ಹೊಂದಿರುವ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಜಗತ್ತಿನಲ್ಲಿ ಒಳ್ಳೆಯವರು ಇದ್ದಾರೆ; ಅದೇ ರೀತಿ ಕೆಟ್ಟವರೂ ಇದ್ದಾರೆ. ದೇವರು ಇದ್ದಾನೆ; ದೆವ್ವವೂ ಇದೆ ಎಂದು ಸಾರುವ ಈ ಕಿರು ಚಿತ್ರದ ಹೆಸರು ಘೋಸ್ಟ್..!
ಈಚೆಗೆ ಕಿರುಚಿತ್ರದ ಪ್ರದರ್ಶನ ಮಾಡಿ ಮಾಧ್ಯಮಗಳ ಜೊತೆ ಆಪ್ತವಾಗಿ ಮಾತನಾಡಿದರು ಸುಧಾರಾಣಿ. ಇದರ ಕಥೆ ಕೇಳಿದಾಗ ನಿರ್ಮಾಣ ಮಾಡಬೇಕು ಎಂಬುದು ಪ್ರೇರಣೆಯಾಯಿತು. ಹಾಗಾಗಿ ಕಿರು ಚಿತ್ರದ ಮೂಲಕ ನಿರ್ಮಾಣದ ಜಗತ್ತಿಗೆ ಕಾಲಿಟ್ಟಿರುವೆ ಎಂದು ಆತ್ಮೀಯವಾಗಿ ನಕ್ಕರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಮೊದಲ ಚಿತ್ರ ಆನಂದ್ ಹಾಗೂ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದ ಸುಧಾರಾಣಿ, ಆನಂತರದಲ್ಲಿ ಎಲ್ಲಾ ಸ್ಟಾರ್ ನಟರ ಫೇವರಿಟ್ ಹಿರೋಯಿನ್ ಎನಿಸಿಕೊಂಡರು. ವರನಟ ಡಾ.ರಾಜ್ ಕುಮಾರ್ ಅವರಿಗೆ ಮಗಳಾಗಿ ‘ದೇವತಾ ಮನುಷ್ಯ’ ಚಿತ್ರದಲ್ಲಿ ಅಭಿನಯಿಸಿ; ಅವರೊಂದಿಗೆ ನೃತ್ಯ ಮಾಡಿ ಸೈ ಎನಿಸಿಕೊಂಡರು.
ಈಚೆಗೆ ಪೋಷಕ ನಟಿ ಪಾತ್ರಗಳ ಜೊತೆಗೆ ಕಿರುತೆರೆಯಲ್ಲಿಯೂ ಸೈ ಎನಿಸಿಕೊಂಡ ಸುಧಾರಾಣಿ ಅವರಿಗೆ ‘ಶ್ರೀರಸ್ತು ಸುಭಮಸ್ತು’ ಧಾರಾವಾಹಿ ಸಹ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಟ್ಟಿತು. ಇದೀಗ ಆ ಧಾರಾವಾಹಿಯ ನಿರ್ದೇಶಕರು ಹೇಳಿದ ಕಥಾ ಪರಿಕಲ್ಪನೆ ಇಷ್ಟವಾಗಿ ಈ ಕಿರುಚಿತ್ರ ನಿರ್ಮಿಸಿದ್ದಾಗಿ ಹೇಳಿದರು.
ಸಸ್ಪೆನ್ಸ್ ಥ್ರಿಲ್ಲರ್ ನ ಈ ಕಿರುಚಿತ್ರವನ್ನು ಸುದೇಶ್ ಕೆ.ರಾವ್ ನಿರ್ದೇಶನ ಮಾಡಿದ್ದು, ಸುಧಾರಾಣಿ ನಟಿಸಿದ್ದಾರೆ. ಕೇವಲ ಎರಡೇ ಪಾತ್ರಗಳು ಇಲ್ಲಿ ಗಮನ ಸೆಳೆಯುತ್ತವೆ.
ಕಿರು ಚಿತ್ರದಲ್ಲಿ ಸುಧಾರಾಣಿ ಯವರ ಜೊತೆಗೆ ನಟಿಸುವುದರ ಜೊತೆಗೆ ನಿರ್ದೇಶಕ ಸುದೇಶ್ ಕೆ ರಾವ್ ನಟಿಸಿದ್ದಾರೆ.