ರೇಟಿಂಗ್ : 3/5
ನಿರ್ಮಾಣ : ಸಿ.ನಾರಾಯಣ್
ನಿರ್ದೇಶನ : ಕೂಡ್ಲು ರಾಮಕೃಷ್ಣ
ಆದರ್ಶ ನಾರಿಯ ದಿಟ್ಟತನದ ವರ್ತನೆಗಳು..
ಅದು ಸ್ವಾತಂತ್ರ್ಯ ಪೂರ್ವದ ಕಾಲಘಟ್ಟ. ಸಂಪ್ರದಾಯಸ್ಥ ಮನೆತನದ ಹೆಣ್ಣು ಮಗಳೊಬ್ಬಳು ಬದುಕಿನ ಸವಾಲುಗಳು ಹಾಗೂ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಪರಾಕ್ರಮಿಯಂತೆ ಹೇಗೆ ಎದುರಿಸಿದಳು ಎಂಬುದು ಕಥಾ ವಸ್ತು.
ಮೈಸೂರು ಸಂಸ್ಥಾನದ ವ್ಯಾಪ್ತಿಗೆ ಬರುವ ಗ್ರಾಮವೊಂದರ ಶ್ಯಾನು ಭೋಗರ ಮಗಳು ಶರಾವತಿ ಅನುಪಮ ಚಲುವೆ ಮತ್ತು ಆದರ್ಶ ನಾರಿ.
ಪತಿಯ ಪ್ರೀತಿಯ ಆರೈಕೆ. ಅತ್ತೆ ಮಾವನ ಸುಂದರ ಪ್ರೀತಿ ಎಲ್ಲವೂ ಇದ್ದರೂ ಶರಾವತಿಗೆ ಜೀವನದ ಸವಾಲುಗಳು ಹೆಚ್ಚಾಗಿ ಕಾಡುತ್ತವೆ. ಏಕೆಂದರೆ ಆಕೆ ಆದರ್ಶ ಸತಿ ಮತ್ತು ಎಂಥಹ ಸನ್ನಿವೇಶವನ್ನೂ ಮೆಟ್ಟಿ ನಿಲ್ಲುವ ಛಲಗಾರ್ತಿ.
ಬ್ರಿಟಿಷರ ಆಳ್ವಿಕೆಯ ಆ ಕಾಲದಲ್ಲಿ ಪ್ರತಿ ಊರಿನ ದೇವಾಲಯಗಳ ಆಸ್ತಿ ದೋಚುವ ಸಂಚು ಅವರಿಂದ ನಡೆಯುತ್ತದೆ. ಅದನ್ನು ವಿಫಲಗೊಳಿಸಲು ರೂಪುಗೊಂಡಿರುವ ಸ್ವಾತಂತ್ರ್ಯ ಹೋರಾಟದ ಕೆಚ್ಚಿನ ಯುವಕರ ಗುಂಪಿನಲ್ಲಿ ಶರಾವತಿಯ ಸಹೋದರ ಹಾಗೂ ಮೈದುನ ಸೇರಿಕೊಂಡಿರುತ್ತಾರೆ.
ಇದರಿಂದ ಶರಾವತಿಯ ತವರು ಮತ್ತು ಮಾವನ ಮನೆಯ ಎರಡೂ ಕುಟುಂಬಗಳನ್ನು ಅನೇಕ ರೀತಿಯ ಪರೀಕ್ಷೆಗೆ ಒಳಪಡಿಸುತ್ತವೆ ಬ್ರಿಟಿಷ್ ವ್ಯವಸ್ಥೆ. ಆಗ ಗಟ್ಟಿಗ ಹೆಣ್ಣು ಮಗಳಾಗಿ ಶರಾವತಿ ಹೋರಾಟದ ಕಿಚ್ಚಿಗೆ ಬೆಂಬಲ ನೀಡುತ್ತಾಳೆ.
ಇದರ ಫಲವಾಗಿ ತುಂಬು ಗರ್ಭಿಣಿ ಅವಸ್ಥೆಯಲ್ಲಿ ಅನುಭವಿಸಬಾರದ ಕಷ್ಟವನ್ನು ಅನುಭವಿಸಿ ಕೊನೆಗೆ ಮನೆಗೆ ದೀಪವಾಗುತ್ತಾಳೆ.
ಪತ್ರಕರ್ತೆ ಭಾಗ್ಯ ಕೃಷ್ಣಮೂರ್ತಿ ಅವರ ಕಲ್ಪನೆಯ ಕಾದಂಬರಿ ಆಧರಿಸಿ ಮೂಡಿ ಬಂದಿರುವ ಚಿತ್ರವನ್ನು ಅತ್ಯುತ್ತಮ ರೀತಿಯಲ್ಲಿ ಜೈ ಆನಂದ್ ಸೆರೆ ಹಿಡಿದಿದ್ದಾರೆ.
ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡುವಲ್ಲಿ ಹೆಸರಾಗಿರುವ ಕೂಡ್ಲು ರಾಮಕೃಷ್ಣ ಅಚ್ಚುಕಟ್ಟಾದ ನಿರೂಪಣೆ ಮಾಡಿದರೂ ಪಾತ್ರ ಪೋಷಣೆಯಲ್ಲಿ ಮತ್ತಷ್ಟು ಸೊಗಸುಗಾರಿಕೆ ತರುವುದರಿಂದ ದೂರ ಸರಿದಂತೆ ಅನಿಸುತ್ತದೆ.
ಶರಾವತಿ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಸೈ ಎನಿಸಿಕೊಳ್ಳುತ್ತಾರೆ. ಇನ್ನುಳಿದಂತೆ ಸುಲ್ತಾನ್ ಪಾತ್ರದಲ್ಲಿ ಕಿಶೋರ್, ಮಾವನಾಗಿ ರಮೇಶ್ ಭಟ್, ಪತಿಯಾಗಿ ನಿರಂಜನ್ ಶೆಟ್ಟಿ, ದೀವಾನರ ಪಾತ್ರದಲ್ಲಿ ಸುಧಾಕರ್ ಬನ್ನಂಜೆ ಮೊದಲಾದ ಪಾತ್ರಗಳು ಗಮನ ಸೆಳೆಯುತ್ತವೆ.