Snehapriya.com

June 8, 2025

ಡಿ ಡಿ ಪಿಕ್ಚರ್ಸ್ ಕೃಷ್ಣಪ್ಪ ಕನಸಿನ ಪಾನ್ ಇಂಡಿಯಾ ಸಿನಿಮಾಗಳು..

Social Share :

ಸಿನಿಮಾ ಒಂದು ಕನಸು.. ಎಂಬುದು ನಿಜವಾದ ನಂಬಿಕೆ.. ಸಿನಿಮಾ ನಿರ್ಮಾಣ ಕ್ರಿಯಾಶೀಲತೆಗೆ ಮೆರಗು ನೀಡುವ ಹಾದಿ.. ಕೆಲವೊಮ್ಮೆ ಅದು ಫ್ಯಾಷನ್ ಮತ್ತು ಕೆಲವೊಮ್ಮೆ ಅದು ಉಸಿರು.

ಆದರೆ ಸಿನಿಮಾ ನಿರ್ಮಾಣ ಎಂಬುದು ಹೂವಿನ ಹಾಸಿಗೆ ಅಲ್ಲವೇ ಅಲ್ಲ.. ಅದಕ್ಕೆ ಗುಂಡಿಗೆ; ಅನೇಕ ಬಾರಿ ಡಬ್ಬಲ್ ಗುಂಡಿಗೆ ಬೇಕಾಗುತ್ತದೆ.. ಆ ರೀತಿಯಲ್ಲಿ ಎದೆಗಾರಿಕೆ ಮೆರೆಸಲು ಸ್ಯಾಂಡಲ್ ವುಡ್ ಗೆ ಗಂಡುಗಲಿಯಂತೆ ಬಂದವರು ಶಿವಮೊಗ್ಗ ಜಿಲ್ಲೆ ಸೊರಬ ಮೂಲದ ಎಂ.ವಿ.ಕೃಷ್ಣಪ್ಪ ಅವರು. ಈಗಾಗಲೇ ಒಂದು ಚಿತ್ರ ಮಾಡಿ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದುಕೊಂಡು ಈ ಕೊರೊನಾ ಹೆಮ್ಮಾರಿಯಿಂದ ಪಾರಾಗುವ ದಿನಗಳಿಗಾಗಿ ಕಾಯುತ್ತಿದ್ದಾರೆ.

ನಿಜ ಜೀವನದಲ್ಲಿ ಉದ್ಯಮಿಯಾಗಿರುವ ಕೃಷ್ಣಪ್ಪ ಅವರಿಗೆ ಸಿನಿಮಾ ಎಂಬುದು ಫ್ಯಾಷನ್. ಹಾಗಾಗಿ ಅದು ಹೆಚ್ಚು ಹೆಚ್ಚು ರೋಚಕವಾಗಿರಬೇಕು ಎಂಬುದು ಆಕಾಂಕ್ಷೆ. ಈ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳನ್ನು ಹಾಕಿಕೊಂಡು ಪಾನ್ ಇಂಡಿಯಾ ಸಿನಿಮಾ ಮಾಡುವ ಮಹದಾಸೆ. ಜೊತೆಗೆ ಆ ಚಿತ್ರಗಳು ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರಬೇಕು ಎಂಬುದು ಬಯಕೆ. ಕ್ವಾಲಿಟಿ ಸಿನಿಮಾ ಮಾಡುವ ಆಸಕ್ತಿಯಲ್ಲಿ ಈಗಾಗಲೇ ಹಲವು ಸ್ಟಾರ್ ನಟರ ಕಾಲ್ ಶೀಟ್ ಪಡೆದು ಚಿತ್ರ ನಿರ್ಮಿಸುವ ದಿನಗಳಿಗಾಗಿ ಕಾಯುತ್ತಿದ್ದಾರೆ ಕೃಷ್ಣಪ್ಪ.
ಡಾ.ರಾಜ್ ಕುಮಾರ್, ಬಂಗಾರಪ್ಪ ಹಾಗೂ ಇತರ ದಿಗ್ಗಜರನ್ನು ಆದರ್ಶವಾಗಿ ಇರಿಸಿಕೊಂಡಿರುವ ಅವರು ಕನ್ನಡದ ಚಿತ್ರಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು. ಅದಕ್ಕೆ ನನ್ನ ದೊಂದು ಅಳಿಲು ಸೇವೆ ಇರಬೇಕು ಎಂಬ ಹೆಬ್ಬಯಕೆಯನ್ನು ಹೊಂದಿದವರು.

ಹಾಗಾಗಿ ಈ ಕೋವಿಡ್ ಮುಗಿಯುವ ದಿನಗಳಿಗಾಗಿ ಕಾಯುತ್ತಿದ್ದಾರೆ. ಎಲ್ಲಾ ಮುಗಿದು ಕಾಲ ಸರಿ ಹೋದ ಬಳಿಕ ದೊಡ್ಡ ದೊಡ್ಡ ಯೋಜನೆಗಳನ್ನು ಪ್ರಕಟಿಸುವ ಹಂಬಲ ಅವರದು. ಡಿ ಡಿ ಪಿಕ್ಚರ್ಸ್ ಎಂಬ ಸಂಸ್ಥೆಯ ಮೂಲಕ ಗುಣಮಟ್ಟದ ಚಿತ್ರಗಳು ಮೂಡಿ ಬರುತ್ತವೆ. ಅವು ಮುಖ್ಯವಾಗಿ ಪಾನ್ ಇಂಡಿಯಾ ಸಿನಿಮಾ ಆಗಿರುತ್ತವೆ. ಏಕೆಂದರೆ ಆ ಚಿತ್ರಗಳು ಹಲವಾರು ಭಾಷೆಗಳಲ್ಲಿಯೂ ನಿರ್ಮಾಣವಾಗುತ್ತವೆ. ಇಲ್ಲವೆ ಕನ್ನಡದಲ್ಲಿ ನಿರ್ಮಾಣವಾಗಿ ಇತರ ಭಾಷೆಗಳಿಗೆ ಡಬ್ ಆಗುತ್ತವೆ. ಕನ್ನಡ ಉದ್ಯಮಕ್ಕೆ ಪಾನ್ ಇಂಡಿಯಾ ಮೆರುಗು ಕೊಡುವ ಅನೇಕ ಚಿತ್ರಗಳಲ್ಲಿ ತಮ್ಮ ಚಿತ್ರಗಳು ಸೇರಬೇಕು ಎಂಬುದು ಅವರ ನಿಲುವು.

ಕೃಷ್ಣಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮುಟ್ಟುಗುಪ್ಪೆ ಗ್ರಾಮದವರು. ಚಿಕ್ಕ ವಯಸ್ಸಿನಲ್ಲಿಯೇ ನಾಟಕದ ಗೀಳು ಹತ್ತಿಸಿಕೊಂಡವರು. ಹಲವಾರು ನಾಟಕಗಳಲ್ಲಿ ಅಭಿನಯಿಸಿ ಬಣ್ಣದ ಬದುಕಿನ ಒಡನಾಟವಿದ್ದರೂ ವ್ಯಾಪಾರ ಸಂಬಂಧ ವಿದೇಶಗಳಲ್ಲಿ ನೆಲೆಸಬೇಕಾದ ಅನಿವಾರ್ಯತೆಯಲ್ಲಿ ಈಜಿಪ್ಟ್, ದುಬೈ ಹಾಗೂ ಇನ್ನಿತರ ದೇಶಗಳನ್ನು ಸುತ್ತಿಕೊಂಡು ಬಂದವರು. ಆದರೆ ಬಣ್ಣದ ಒಡನಾಟ ಹೋಗಲಿಲ್ಲ.. ಇದೇ ಕಾರಣದಿಂದ ಈಗ ಸಿನಿಮಾ ಬದುಕಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.


ಕಳೆದ ಕೆಲವು ವರ್ಷಗಳಿಂದ ದೊಡ್ಡ ಸ್ಟಾರ್ ನಟರ ಚಿತ್ರ ಮಾಡಬೇಕೆಂಬ ತವಕದಲ್ಲಿ ಕಾಯುತ್ತಿದ್ದರೂ ಡೇಟ್ಸ್ ಹೊಂದಾಣಿಕೆ ಆಗಲಿಲ್ಲ.. ಇದೇ ಪ್ರಯತ್ನದಲ್ಲಿಯೇ ಕೆಲವು ಸ್ಟಾರ್ ಗಳ ಕಾಲ್ ಶೀಟ್ ಪಡೆದೂ ಇನ್ನೇನು ಸಿನಿಮಾ ಆರಂಭಿಸಬೇಕು ಎಂದುಕೊಂಡಾಗ ಕೋವಿಡ್ ನ ಕಾಟ ಎದುರಾಯಿತು. ಇದರ ನಡುವೆಯೇ ಹೊಸಬರನ್ನು ಹಾಕಿಕೊಂಡು ನಿರ್ಮಿಸಿದ ‘ಅಭಿರಾಮಿ’ ಎಂಬ ಚಿತ್ರದಲ್ಲಿ ಕೃಷ್ಣಪ್ಪ ಸ್ವತಃ ಅಭಿನಯಿಸಿದ್ದಾರೆ. ಜೊತೆಗೆ ಇವರ ಇಬ್ಬರು ಗಂಡು ಮಕ್ಕಳು (ದೃಶ್ಯ ಹಾಗೂ ದೃವ) ಈ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನೆಲೆಸುವುದು ಸುಲಭದ ಕೆಲಸವೇನೂ ಅಲ್ಲ. ಆದರೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೃಷ್ಣಪ್ಪ ಮಾಡಿಕೊಂಡಿದ್ದಾರೆ. ಇದು ತಾಯಿ ಭೂಮಿ. ಮೊದಲು ಕನ್ನಡ ಚಿತ್ರಗಳನ್ನು ಮಾಡಿ ಮುಂದೆ ಬಾಲಿವುಡ್ ಪ್ರವೇಶಿಸುವ ಆಸೆ. ಹಾಗಾಗಿ ಪಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂಬುದು ಕನಸ್ಸಲ್ಲ.. ಅದು ಧೃಡ ನಿರ್ಧಾರ. ಚಿತ್ರವೂ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರಬೇಕು ಎಂಬುದು ಚಿತ್ರದ ಮೇಲಿರುವ ಪ್ರೀತಿ ಮತ್ತು ಫ್ಯಾಷನ್ ನ ಕಾರಣದಿಂದಾಗಿ. ಮುಂದೆ ಕನ್ನಡದ ಸ್ಟಾರ್ ಗಳ ಸಹಕಾರದಿಂದ ಖಂಡಿತಾ ನನ್ನ ಚಿತ್ರಗಳು ಯಶಸ್ಸು ಸಾಧಿಸುತ್ತವೆ.. ಅದು ಸಾಧ್ಯವಾದರೆ ನಿರ್ದೇಶನ ಮಾಡುವ ಹಂಬಲವೂ ಇದೆ ಎಂದು ಹೇಳುತ್ತಲೇ ಹೋದರು.. ಮತ್ತು ಅದೇ ಆತ್ಮವಿಶ್ವಾಸದಲ್ಲಿ ಮಾತನಾಡುತ್ತಾ ಹೋದರು ಕೃಷ್ಣಪ್ಪ.

 

ಸಿನಿಮಾ-ಗಾಸಿಪ್
Social Share :

1 thought on “ಡಿ ಡಿ ಪಿಕ್ಚರ್ಸ್ ಕೃಷ್ಣಪ್ಪ ಕನಸಿನ ಪಾನ್ ಇಂಡಿಯಾ ಸಿನಿಮಾಗಳು..”

Leave a Reply to Lokappa P Cancel Reply

Your email address will not be published. Required fields are marked *