ನಾಡಿನ ಹೆಮ್ಮೆಯ ಧ್ಯೋತಕವಾಗಿ ನಾಡಗೀತೆ ಹಾಡಿಸುವುದು ಸಂಪ್ರದಾಯ. ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಕನ್ನಡಿಗರ ಮೈಮನಗಳಲ್ಲಿ ರೋಮಾಂಚನ ತುಂಬುವ ಭಾವನಾತ್ಮಕ ವಿಷಯವೂ ಹೌದು..
ಆದರೆ ನಾಡಗೀತೆಯನ್ನು ಸಭೆ ಸಮಾರಂಭಗಳಲ್ಲಿ ಹಾಡುವಾಗ ಅದರ ಅವಧಿ ಹೆಚ್ಚಾಯಿತು ಎಂಬ ಮಾತುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಸುಮಾರು ಆರೂವರೆಯಿಂದ ಏಳು ನಿಮಿಷವಿದ್ದ ನಾಡಗೀತೆ ಸಂಯೋಜನೆಯನ್ನು ಎರಡು ನಿಮಿಷ ಮೂವತ್ತು ಸೆಕೆಂಡುಗಳಿಗೆ ಇಳಿಸಲಾಗಿತ್ತು. ಈಗ ಕಾರ್ಯಕ್ರಗಳಲ್ಲಿ ಅದೂ ದೀರ್ಘ ವಾಗಬಹುದು. ಅದಕ್ಕಿಂತ ಅವಧಿ ಕಡಿಮೆ ಮಾಡಬಹುದೇ ಎಂಬ ಪ್ರಶ್ನೆಗಳು ಅಲ್ಲಲ್ಲಿ ವ್ಯಕ್ತಗೊಂಡವು.
ಇದರ ಹಿನ್ನೆಲೆಯಲ್ಲಿ ಕನ್ನಡದ ಮೇರು ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ನಾಡಗೀತೆ ಸಮಯಾವಕಾಶದ ವಿಷಯದಲ್ಲಿ ಮೂರು ರೀತಿಯ ಪ್ರಯೋಗವನ್ನು ಹಮ್ಮಿಕೊಂಡಿದ್ದಾರೆ.
ಅದರಂತೆ ಮೊದಲನೇ ಪ್ರಯೋಗವನ್ನು ಗಾಂಧಿಜಯಂತಿ ದಿನವಾದ ಅಕ್ಟೋಬರ್ ಎರಡರಂದು ಹೊರಬಿಡಲಾಗಿದೆ. ಐದನಿ ಎಂಟಟೈನ್ ಮೆಂಟ್ ಮೂಲಕ ಹೊರಬಂದಿರುವ ನಾಡಗೀತೆಯ ಪ್ರಾಯೋಗಿಕ ತುಣುಕು ಒಂದು ನಿಮಿಷ ನಲವತ್ತು ಸೆಕೆಂಡುಗಳಿವೆ.
ಗೀತೆಯ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಕೆಲವು ಬದಲಾವಣೆ ಮಾಡಲಾಗಿದೆ ಎಂಬುದನ್ನು ವಿಡಿಯೋದಲ್ಲೇ ಹೇಳಲಾಗಿದೆ. ಒಂದು ನಿಮಿಷ ನಲವತ್ತು ಸೆಕೆಂಡುಗಳ ಗೀತೆಗೆ ಮೃತ್ಯುಂಜಯ ದೊಡ್ಡವಾಡ ಅವರ ಧ್ವನಿ ಇದೆ.
ವೇದಿಕೆಯ ಗಾಯನಕ್ಕಾಗಿ ‘ ಹಂಸ’ರಾಗದಲ್ಲಿ ವ್ಯಕ್ತಗೊಂಡಿರುವ ಪರಿಷ್ಕೃತ ನಾಡಗೀತೆ ಚೆನ್ನಾಗಿದೆ; ಮತ್ತಷ್ಟೇ ಬಿಡುಬೀಸಾದ ಗಾಯನವೂ. ಅಭಿನಂದನೆಗಳು