ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಹೆಸರು ಅಮರಾವತಿ ಪೊಲೀಸ್ ಸ್ಟೇಷನ್. ಚಿತ್ರದ ಟೀಸರ್ ಈಚೆಗೆ ಬಿಡುಗಡೆಗೊಂಡಿತು.
ಕಡಲ ತೀರದ ಕಾಲ್ಪನಿಕ ಊರು ಅಮರಾವತಿ ಎಂಬಲ್ಲಿ ನಡೆಯುವ ವ್ಯಕ್ತಿಗಳ ನಿಗೂಢ ನಾಪತ್ತೆ ಮತ್ತು ಕೊಲೆಯ ಪ್ರಕರಣಗಳನ್ನು ಬೇಧಿಸುವ ಕಥಾ ಹಂದರವನ್ನು ಹೊಂದಿರುವ ಚಿತ್ರವನ್ನು ಪುನೀತ್ ಅರಸೀಕೆರೆ ನಿರ್ದೇಶನ ಮಾಡಿದ್ದಾರೆ.
ಧರ್ಮ ಕೀರ್ತಿರಾಜ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು,
ಚಿತ್ರದ ಟೀಸರ್ ಈಚೆಗೆ ಬಿಡುಗಡೆ ಕಂಡಿತು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಆವರಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಜನಪ್ರಿಯ ಪ್ರಚಾರಕರ್ತ ನಾಗೇಂದ್ರ ಟೀಸರ್ ಬಿಡುಗಡೆಗೊಳಿಸಿದರು.
ಅಮರಾವತಿ ಎಂಬ ಊರಿನಲ್ಲಿ ಊರ ಗೌಡನ ನಿಗೂಢ ನಾಪತ್ತೆ ಸುದ್ದಿಯಾಗುತ್ತದೆ. ಜೊತೆಗೆ ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಬಂದ ಪೊಲೀಸ್ ಕೂಡ ನಾಪತ್ತೆಯಾಗುವ ಘಟನೆ ನಡೆಯುತ್ತದೆ.
ಇಂತಹ ನಿಗೂಢ ಘಟನೆಗಳನ್ನು ಬೇಧಿಸುವ ಕಥೆಯಲ್ಲಿ ಕಾಣುವುದು ಕ್ಷಣ ಕ್ಷಣವೂ ಕುತೂಹಲ. ನಾಗಾ ಸಾಧುಗಳ ಕಥೆ ಕೂಡ ಚಿತ್ರದಲ್ಲಿದೆ ಎಂಬ ವಿವರ ನೀಡಿತು ಚಿತ್ರತಂಡ.
ಯುವನಟ ಧರ್ಮ ಕೀರ್ತಿರಾಜ್ ಈ ಚಿತ್ರದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ನಟಿಸಿದ್ದು, ಗುರುರಾಜ್ ಜಗ್ಗೇಶ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧರ್ಮ ಕೀರ್ತಿರಾಜ್ ಜೋಡಿಯಾಗಿ ವೇದ್ವಿಕ ಕಾಣಿಸಿಕೊಂಡಿದ್ದಾರೆ ಎಂಬ ವಿವರಗಳು ಬಂದವು.
ಮಫ್ತಿಯಲ್ಲಿರುವ ಪೊಲೀಸ್ ಪಾತ್ರ ನನ್ನದು.ಸಿನಿಮಾದಲ್ಲಿ ಸಾಹಸ ದೃಶ್ಯ ಗಳು ಬಹಳ ವಿಶೇಷವಾಗಿದೆ ಎಂದರು ಧರ್ಮ ಕೀರ್ತಿರಾಜ್.
ಚಿತ್ರಕ್ಕೆ ಈಗಾಗಲೇ 36 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಶೇ.60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಕ್ಲೈಮ್ಯಾಕ್ಸ್ ಮತ್ತು ಒಂದು ಹಾಡಿನ ಭಾಗ ಮಾತ್ರವೇ ಬಾಕಿ ಇದೆ ಎಂಬ ವಿವರ ನೀಡಿದವರು ನಿರ್ದೇಶಕ ಪುನೀತ್.
ಅಲ್ಲದೆ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ 17ರಂದು ಚಿತ್ರದ ಪ್ರೇಮ ಗೀತೆ ಬಿಡುಗಡೆ ಮಾಡುವ ಆಶಯವಿದೆ ಎಂದರು.
ಪುನೀತ್ ಅರಸೀಕೆರೆ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ಪಿ. ಪಿ. ಪವರ್ ಪಿಕ್ಚರ್ಸ್ ಲಾಂಛನದಲ್ಲಿ ಕೆ.ಆರ್.ಪ್ರದೀಪ್ ಕಮಲಪುರ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಗೀತಾ ಅಂಜನರೆಡ್ಡಿ ಸಹ ನಿರ್ಮಾಪಕಿಯಾಗಿದ್ದಾರೆ.
ಹಿರಿಯನಟಿ ಭವ್ಯ, ಸಾಧು ಕೋಕಿಲ, ಕಾಕ್ರೋಚ್ ಸುಧಿ, ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಮುಂತಾದವರು ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.
ರೋಣದ ಬಕ್ಕೇಶ್ ಸಂಗೀತ ನಿರ್ದೇಶನ, ಗೌತಮ್ ಮಟ್ಟಿ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಸಾಹಸ, ವೆಂಕಿ ಯುವಿಡಿ ಸಂಕಲನ, ಆರ್ಯ ಶಿವು ಕರಗುಂದ ಸಂಭಾಷಣೆ ಚಿತ್ರಕ್ಕಿದೆ.