ಹೀಗೂ ಒಂದು ಪ್ರಶ್ನೆ ಎದುರಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ.. ಆದರೆ ಇರುವ ಕೆಲಸವೂ ಹೋಗಿ ಬರಿಗೈ ಆಗುತ್ತೇನೆ ಎಂಬುದನ್ನು ಸದಾ ಬೆನ್ನಿಗೆ ಕಟ್ಟಿಕೊಂಡಿರುತ್ತಿದ್ದೆ.
ಈ ಪತ್ರಿಕೋದ್ಯಮ ನಂಬಿಕೊಂಡ ಹೆಚ್ಚಿನ ಜನರಿಗೆ ಇದೇ ಆಗುತ್ತದೆ. ಅದರಲ್ಲೂ ಆದರ್ಶವೆಂಬ ಭ್ರಮೆಯನ್ನು ನಂಬಿಕೊಂಡರೆ ಮುಗಿದೇ ಹೋಯಿತು..ಎಷ್ಟೇ ಸಮರ್ಥನಿದ್ದರೂ ಎಲ್ಲಿಯೂ ಸಲ್ಲದೆ ಹೋಗುತ್ತಾನೆ. ಏಕೆಂದರೆ ಒಂದಷ್ಟು ಅಹಂ ಮೈಗೂಡಿರುತ್ತದೆ.. ಜೊತೆ ಪತ್ರಕರ್ತ ಎಂಬ ಕಿರೀಟ ಬೇರೆ ತಲೆಯ ಮೇಲೆಯೇ ಗಾಂಚಲಿ ಮಾಡಿಕೊಂಡಿರುತ್ತದೆ.
ಇದರ ಅರಿವು ಆಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ.. ಒಂದಕ್ಕೆ ಅಂಟಿಕೊಳ್ಳುವಷ್ಟರಲ್ಲಿ ಇನ್ನೊಂದು ಕಳೆದು ಹೋಗಿರುತ್ತದೆ.. ಆದ್ದರಿಂದಲೇ ನಾನು ಸದಾ ಕಾಲವೂ ಎಲ್ಲದರಿಂದ ವಂಚಿತ ಎಂದೇ ಭಾವಿಸುತ್ತಿದ್ದೆ. This too will pass ಎಂದು ಸ್ಟೇಟಸ್ ನಲ್ಲಿ ಬರೆದುಕೊಳ್ಳುತ್ತಿದೆ. ಯಾವುದೇ ಇರಲಿ ಅರಿವಿಗೆ ಬರುವಷ್ಟರಲ್ಲಿ ಕಳೆದು ಹೋಗುತ್ತದೆ ಎಂದಾಗ ಬದುಕು ಏನಾಗುತ್ತದೆ.. ಅದು ಈ ಬೆಂಗಳೂರೆಂಬ ಬೆಂಗಳೂರಿನಲ್ಲಿ.. ದುಡಿಯುವ ಅರ್ಧಕ್ಕಿಂತಲೂ ಹೆಚ್ಚು ಬಾಡಿಗೆ ಮನೆಗೆ ಇಡಬೇಕು.. ಜೀವನ ವೆಚ್ಚವೂ ಅಧಿಕ.. ಎಷ್ಟೇ ಸರಳತೆಯ ವೇಷ ಹಾಕಿದರೂ ಬದುಕು ಕಟ್ಟಿಕೊಳ್ಳುವಲ್ಲಿ ಹಣದ ಮಹತ್ವ ಇದ್ದೇ ಇರುತ್ತದೆ.. ಸರಿ ಸಾಲ EMI ಎಲ್ಲವೂ ಇದ್ದೇ ಇರುತ್ತದೆ. ಅದೂ ಸುಮ್ಮನೆ ಬದುಕುವುದಕ್ಕಾಗಿ ಅವುಗಳ ಜೊತೆಗೆ ಹೊಡೆದಾಡುತ್ತಲೇ ಕಾಲ ಕಳೆಯುವಾಗ ಧುತ್ತನೆ ಮತ್ತೊಂದು ಆಘಾತದಂತೆ ಕೆಲಸ ಹೋಗಿರುತ್ತದೆ.. ಆಗ ಆಕಾಶವೇನು ಕಳಚಿ ಬೀಳುವುದಿಲ್ಲ.. ಮತ್ತೆ ಕೆಲಸಕ್ಕಾಗಿ ಹುಡುಕಾಟ ನಡೆಯುತ್ತದೆ.. ಆ ದಾರಿಯಲ್ಲಿ ಮತ್ತೊಂದಷ್ಟು ಸಾಲ ಅದೂ ಇದು.. ಇಂತಹ ಬದುಕು ಬಾಡಿಗೆ ಮನೆಯನ್ನೇ ಗಟ್ಟಿ ಮಾಡಿರುತ್ತದೆ. ಸ್ವಂತ ಮನೆ ಇರಲಿ ಒಂದು ಲೀಸ್ ಮನೆ ಕನಸು ಕಾಣುವುದಕ್ಕೂ ಅಸಾಧ್ಯ. ಇದು ಬೆಂಗಳೂರು.. ಹಾಗಾಗಿ ಬರೀ ಕನಸೆಂಬ ಕುದುರೆ ಏರಿ ಹೋರಾಡುವ ಜೀವನ.. ಇನ್ನು ದುಡಿದಿದ್ದು ಎಲ್ಲಿರುತ್ತದೆ.
ಈಚೆಗೆ ನಾನು ಕೆಲಸ ಕಳೆದುಕೊಂಡೆ ಎಂಬ ವಿಷಯ ತಿಳಿದಾಗ ಸಂಬಂಧಿಕರೊಬ್ಬರು ಕೇಳಿದರು.. ಇಲ್ಲಿಯವರೆಗೆ ದುಡಿದಿದ್ದನ್ನು ಏನ್ ಮಾಡ್ದಪ್ಪ.
ಅದು ಅವರ ತಪ್ಪಲ್ಲ ಮುಗ್ಧತೆ.. ನನ್ನದು ಅಸಹಾಯಕತೆ.. ಸಮಗ್ರವಾಗಿ ಬದುಕುವುದು ನಾಲ್ಕು ಹೆಸರು ಮಾಡುವುದು ಎಂಬುದೆಲ್ಲಾ ಭ್ರಮೆ ಎಂದು ಇನ್ನೂ ಅರ್ಥವಾಗಿಲ್ಲ ಎಂದರೆ ನಾವೆಷ್ಟು ಬುದ್ಧಿವಂತರು ಎಂಬುದನ್ನು ಯಾರಾದರೂ ಊಹಿಸಬಹುದು…
-ಸ್ನೇಹಪ್ರಿಯ