Snehapriya.com

June 8, 2025

ಪ್ರತಿಷ್ಠೆಯ ಬದುಕು ಮನೆಗಳು ಖಾಲಿ ಖಾಲಿ

Social Share :

ಉದ್ಯಾನನಗರಿ, ಹವಾ ನಿಯಂತ್ರಿತ ನಗರ ಎಂದೆಲ್ಲಾ ಕರೆಸಿಕೊಂಡು ಪ್ರಶಾಂತವಾಗಿದ್ದ ಬೆಂಗಳೂರು ಮಧ್ಯಮ ವರ್ಗ ಮತ್ತು ಬಡವರಿಗೆ ಶಾಪವಾಗಿದ್ದು 2003ರ ಆಚೆಗೆ.. ಆಗ ಮುಖ್ಯಮಂತ್ರಿ ಯಾಗಿದ್ದ ಎಸ್. ಎಂ.ಕೃಷ್ಣ ಅವರು ಐಟಿ ಬಿಟಿಗೆ ಕೊಟ್ಟ ಉತ್ತೇಜನ ಮತ್ತು ಅದರ ಉದ್ಯೋಗಿಗಳಿಗೆ ದೊರೆಯುತ್ತಿದ್ದ ಯರ್ರಬಿರ್ರಿ ಸಂಬಳ ಬೆಂಗಳೂರು ದುಬಾರಿ ನಗರವಾಗಿ ರೂಪುಗೊಳ್ಳಲು ಕಾರಣವಾಯ್ತು.. ಪರಭಾಷಿಕರು ಮನೆ ಮಾಲೀಕರು ಕೇಳಿದಷ್ಟು ಹಣ ನೀಡುತ್ತಾ ಒಂದೊಂದು ಏರಿಯಾಗೆ ಈ ಮಟ್ಟದ ಬಾಡಿಗೆ ಎಂದು ನಿಗದಿಯಾಗಿ ಮಾಲೀಕರು ಸಮೃದ್ಧಿ ಪಡೆಯತೊಡಗಿದರು. ಅವರಿಗೆ ಹಣ ಕೈ ಸೇರತೊಡಗಿದಂತೆ ಮಕ್ಕಳಿಗೆ ದುಬಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸುವುದು.. ಮದುವೆ ಮುಂಜಿ ಅದ್ದೂರಿಯಾಗಿ ನಡೆಸುವುದು ಹೆಚ್ಚಾಯಿತು.. ಇತ್ತ ರಿಯಲ್ ಎಸ್ಟೇಟ್ ಚಿಗುರಿಕೊಂಡಿತು.. 9ಲಕ್ಷ ಇದ್ದ ನಿವೇಶನದ ಮೌಲ್ಯ 90 ಲಕ್ಷಕ್ಕೆ ಏರಿತು. ಐಟಿ ಬಿಟಿ ಹೇರಳ ಸಂಬಳದಿಂದ ಐಷಾರಾಮಿ ಬದುಕು ಫ್ಯಾಷನ್ ಆಯಿತು. ಎಲ್ಲರೂ ಎರಡೆರಡು ಕಾರುಗಳನ್ನು ಕೊಳ್ಳುವಷ್ಟು ಸಮರ್ಥರಾದರು. ಆಗ ಶುರುವಾಯಿತು ನಗರದಲ್ಲಿ ಟ್ರಾಫಿಕ್ ಸಮಸ್ಯೆ.

ಇತ್ತ ಬಡವರು ಮತ್ತು ಕೆಳಮಧ್ಯಮ ವರ್ಗದವರ ಬದುಕು ಚಿಂದಿ ಚಿತ್ರಾನ್ನವಾಯಿತು. ದುಡಿದ ಅರ್ಧಕ್ಕಿಂತಲೂ ಹೆಚ್ಚಿನ ಹಣವನ್ನು ಮನೆ ಬಾಡಿಗೆಗೆಂದೇ ಮೀಸಲಿಡಬೇಕಾಯಿತು. ಇತ್ತ ಮಕ್ಕಳನ್ನು ಒಳ್ಳೆ ಕಾನ್ವೆಂಟ್ ನಲ್ಲಿ ಓದಿಸಬೇಕು ಎಂಬ ಹಠ ಬೆಳೆಸಿಕೊಂಡರು. ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುವುದು ಮಾಮೂಲಿಯಾಯಿತು. ಇದರಿಂದ ಕೌಟುಂಬಿಕ ಘರ್ಷಣೆ ಕ್ರೈಮ್ ಹೆಚ್ಚಾದವು.

ಇಂತಹ ಕಾಲಘಟ್ಟದಲ್ಲಿ ಮನರಂಜನಾ ಕ್ಷೇತ್ರ ದುಬಾರಿ ಯಾಯಿತು. ಮಲ್ಟಿಪ್ಲೆಕ್ಸ್ ವ್ಯವಸ್ಥೆ ಯಲ್ಲಿ ಐಟಿಬಿಟಿಗಳು ಮನಬಂದಂತೆ ಹಣ ಚೆಲ್ಲತೊಡಗಿದರು. ಇದರಿಂದ ಸಿನಿಮಾ ರಂಗದ ಮಾರುಕಟ್ಟೆ ವಿಸ್ತಾರವಾಯಿತು. ಸ್ಟಾರ್ ನಟರು ಕೋಟಿ ಕೋಟಿ ಸಂಭಾವನೆ ಪಡೆಯತೊಗಿದರು. ಆಗಲೇ ಚಿತ್ರರಂಗದ ಒಳ್ಳೆಯ ಭಾವನೆಗಳು ನಾಶವಾದವು.

ವರನಟ ಡಾ.ರಾಜ್ ಕುಮಾರ್ ಸೇರಿದಂತೆ ಉದಾತ ವ್ಯಕ್ತಿತ್ವದ ಮಹನೀಯರು ಹಾಕಿಕೊಟ್ಟ ಆದರ್ಶದ ಬುನಾದಿ ಕಳಚತೊಡಗಿದವು. ವ್ಯಕ್ತಿಪೂಜೆ ಆರಾಧನೆ ಹೆಚ್ಚಾದವು. ಜೊತೆಗೆ ಸಾಮಾಜಿಕ ನೆಮ್ಮದಿ ತರುವ ಚಿತ್ರಗಳು ಇಲ್ಲವಾದವು.. ಬಿಲ್ಡಪ್ ಗಳೇ ಚಿತ್ರದ ಮುಖ್ಯವೆನಿಸುವ ಹಂತದಲ್ಲಿ ಟಿವಿಗಳು ಚಿಗುರಿಕೊಂಡವು. ಕೆಟ್ಟ ಕೆಟ್ಟ ರಿಯಾಲಿಟಿ ಶೋಗಳು ಜನರ ಮನಸ್ಸನ್ನು ಆವರಿಸಿತೊಡಗಿದವು. ಅತಿ ಸಿಲ್ಲಿ ಎನಿಸುವ ಧಾರಾವಾಹಿಗಳು ಜನರ ಚಿಂತನೆ ಹತ್ತಿಕ್ಕುವ ಹಂತ ತಲುಪಿದವು.
ಇಂತಹ ಸಂದರ್ಭದಲ್ಲಿ ಮೂರು ಘಟನೆಗಳು ಮಧ್ಯಮ ವರ್ಗದ ಬದುಕಿಗೆ ಕೊಳ್ಳಿ ಇಟ್ಟವು. ಅದರಲ್ಲಿ ಮೊದಲನೇಯದು ನೋಟ್ ಬ್ಯಾನ್ ಎರಡನೇಯದು ಜಿಎಸ್ ಟಿ ಈಗ ಮತ್ತೊಂದು ಕೊರೊನಾ ಎಂಬ ಮಹಾಮಾರಿ.

ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಕಾರ್ಯ ಸಂಬಳವಿಲ್ಲದೆ ಯಾರೋ ಕೊಡುವ ಆಹಾರದ ಕಿಟ್ ಪಡೆದು ಹೇಗೋ ಬದುಕು ತಳ್ಳಿದವರು.. ಕೊನೆಗೆ ವೈರಾಣು ಉಪಟಳ ಹೆಚ್ಚಾಗಿ ಬದುಕು ದುರ್ಬರವಾದಾಗ ತಮ್ಮ ತಮ್ಮ ಊರುಗಳಿಗೆ ಗುಳೆ ಹೊರಟಿದ್ದಾರೆ. ಆ ರೀತಿ ಹೋಗುವವರು. ನಮ್ಮಿಂದ ಮನೆ ಬಾಡಿಗೆ ಕಟ್ಟುವುದು ಸಾಧ್ಯವಿಲ್ಲ ಎಂಬುದನ್ನು ಹೆಚ್ಚಿನವರು ಹೇಳುತ್ತಿದ್ದಾರೆ.

ಎಷ್ಟೋ ಸರ್ಕಾರಗಳು ಬಂದವು ಹೋದವು. ಬಡ ಮಧ್ಯಮ ವರ್ಗದ ವಸತಿಗೆಂದು ಯಾರು ತಲೆ ಕೆಡಿಸಿಕೊಳ್ಳಲಿಲ್ಲ.. ವಸತಿ ಖಾತೆಯೂ ಇದೆ ಸಚಿವರೂ ಇರುತ್ತಾರೆ.. ಆದರೂ ಮನೆ ಎಂಬುದು ಗಗನ ಕುಸುಮ. ಎಲ್ಲರಿಗೂ ಅವರವರ ಮಟ್ಟಕ್ಕೆ ಒಂದು ನೆಲೆ ಮಾಡಿಕೊಡುವ ಬಗ್ಗೆ ಯಾರೂ ಚಿಂತಿಸಲಿಲ್ಲ.

ಹೇಗೋ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರಿಂದ ಎಷ್ಟೋ ಬಡವರ ಹಸಿವು ನೀಗುತ್ತಿದೆ. ಅದರಾಚೆ ಏನೂ ಆಗಿಲ್ಲ.

‘ಮನೆ ಖಾಲಿ’ ಇದೆ ಎಂಬ ಬೋರ್ಡ್ ಗಳು ಎಲ್ಲಿ ನೋಡಿದರೂ ಕಾಣುತ್ತವೆ ಈಗ. ಆದರೆ ಬಾಡಿಗೆ ಕಡಿಮೆ ಮಾಡುವುದಿಲ್ಲ. ಈ ವಿಷಯದಲ್ಲಿ ರಾಜಿ ಆಗುವುದಿಲ್ಲ ಎನ್ನುತ್ತಿದ್ದಾರೆ ಮಾಲೀಕರು. ಕನಿಷ್ಟ ಒಂದು ವರ್ಷ ಅಂತಹ ಮನೆಗಳು ಖಾಲಿ ಬಿದ್ದರೆ ಮಾತ್ರ ಬಾಡಿಗೆ ಕಡಿಮೆ ಮಾಡುವ ಮನಸ್ಸು ಬರಬಹುದು.. ಅಂತಹ ಕಾಲವೇ ಬರಲಿ.

-ಸ್ನೇಹಪ್ರಿಯ

ಸಿನಿಮಾ-ಗಾಸಿಪ್
Social Share :

1 thought on “ಪ್ರತಿಷ್ಠೆಯ ಬದುಕು ಮನೆಗಳು ಖಾಲಿ ಖಾಲಿ”

Leave a Reply to Gaali Nagaraj Cancel Reply

Your email address will not be published. Required fields are marked *