ನಿರ್ಮಾಪಕರು : ತಿಲಕ್ ಬಲ್ಲಾಳ್
ನಿರ್ದೇಶನ : ಜಯತೀರ್ಥ
ಕಾಲ ಯಾತ್ರಿಕನ ವೇಗ ಆವೇಗ..!
ಕಾಲ ಯಾತ್ರಿಕ (ಟೈಮ್ ಟ್ರಾವೆಲರ್)
ಅಂದರೆ ಅರಿವಿಲ್ಲದೆ ವರ್ತಮಾನದ ಜೊತೆಗೆ ಭೂತ ಭವಿಷ್ಯತ್ ಜೊತೆಗೆ ಸಂಚರಿಸುವವನು..
1895ರಲ್ಲಿ ಬಂದ ಎಚ್.ಜಿ.ವೇಲ್ಸ್ ಅವರ ಕಾದಂಬರಿ ‘ಟೈಮ್ ಮಿಷನ್’ ಆಧರಿಸಿ ‘ಬ್ಯಾಕ್ ಟು ಫ್ಯೂಚರ್’ ನಿಂದ ಹಿಡಿದು ಭಾರತೀಯ ಭಾಷೆಯಲ್ಲಿಯೂ ಸಾಕಷ್ಟು ಸಿನಿಮಾಗಳು ಬಂದಿವೆ. ನಂದಮುರಿ ಬಾಲಕೃಷ್ಣ ಅಭಿನಯದ ‘ಆದಿತ್ಯ 369′, ಸೂರ್ಯ ಅಭಿನಯದ ’24’, ಸಂತಾನಂ ಅಭಿನಯದ ಹಾಸ್ಯ ಚಿತ್ರ ‘ಡಿಕ್ಕಿಲೋನ’ ಹೀಗೆ ಹಲವು..
ಆದರೆ ‘ಬನಾರಸ್’ನ ವರಸೆ ಮತ್ತು ಆಶಯಗಳೇ ಬೇರೆ.. ಇಲ್ಲಿ ಆಧುನಿಕ ಸಂವೇದನೆ ಮತ್ತು ಅದಮ್ಯ ಪ್ರೇಮ ಬೆರೆತಿವೆ. ಮುಖ್ಯವಾಗಿ ವೈರಾಗ್ಯ ಭರಿಸುವ ಸ್ಥಳದಲ್ಲಿ ಪ್ರೇಮದ ಮಜಲುಗಳ ಹುಡುಕಾಟ ನಡೆಯುತ್ತದೆ..
ಜೊತೆಗೆ ಪ್ರೇಮೋನ್ಮಾದದಲ್ಲಿ ಸಂಚರಿಸುವ ಯುವಕ ಕಾಲದ ಹಿಂದೆ ಮುಂದೆ ಓಡುತ್ತಾ ಬನಾರಸ್ ನ ಗಲ್ಲಿ ಗಲ್ಲಿಗಳನ್ನು ಕಾಶಿಯ ಆಚರಣೆಗಳನ್ನು ಪರಿಚಯಿಸಿಬಿಡುತ್ತಾನೆ..
ಏಕೆಂದರೆ ಆತ ಕಾಲ ಯಾತ್ರಿಕ..!
ಕಾಲ ಯಂತ್ರ (ಟೈಮ್ ಲೂಪ್)ದ ಮೂಲಕ ಆತನ ಮೇಲೊಂದು ಪ್ರಯೋಗ ನಡೆದಿರುತ್ತದೆ. ಆದರೆ ಅದರ ಅರಿವು ಅವನಿಗೂ ಇಲ್ಲ; ನೋಡುವ ಪ್ರೇಕ್ಷಕನಿಗೂ ಇರುವುದಿಲ್ಲ.. ಆ ಮಟ್ಟಿಗೆ ನಿರ್ದೇಶಕ ಜಯತೀರ್ಥ ಸಸ್ಪೆನ್ಸ್ ಕಾಯ್ದು ಕೊಂಡಿದ್ದಾರೆ.
ವರ್ತಮಾನದಲ್ಲಿ ಜೀವಿಸಿ ಭೂತ ಮತ್ತು ಭವಿಷ್ಯ ಕಾಲಗಳೆಡೆ ಸಂಚರಿಸುವ ಸಿದ್ದಾರ್ಥನ ವೇಗ ಮನಸ್ಸಿನ ಆವೇಗವಾಗಿ ಪ್ರೇಕ್ಷಕ ಉಸಿರು ಬಿಗಿ ಹಿಡಿಯುತ್ತಾನೆ. ಈ ಕಾಲ ಚಕ್ರದ ಉರುಳಾಟದಲ್ಲಿ ದೃಶ್ಯಗಳು ಪಾತ್ರಗಳೂ ಚಕಚಕನೆ ಸರಿದಾಡುತ್ತವೆ.
ಸಿದ್ದಾರ್ಥ ನ ಸ್ನೇಹಿತ ಶಂಭು, ಲವ್ ಯು ಹೇಳಲು ಕಾಯುವ ಹುಡುಗಿ ಧನಿ ಮತ್ತು ಆಕೆಯ ಚಿಕ್ಕಪ್ಪ, ಚಿಕ್ಕಮ್ಮ ಒಂದೇ ರೀತಿಯ ಪಯಣದಲ್ಲಿ ವಿಭಿನ್ನ ನೆಲೆಯಲ್ಲಿ ಕಾಣ ಸಿಗುತ್ತಾರೆ. ಕಾಶಿಯ ನಶ್ವರ ಪ್ರಪಂಚದಲ್ಲಿ ಪ್ರೇಮ ನಿವೇದನೆ ಮಾಡುವ ಸಿದ್ದಾರ್ಥ ‘ಸರ್ವ ನಾಶದಲ್ಲಿ ನವ ಸೃಷ್ಟಿ’ ಎಂಬುದಕ್ಕೆ ಸಾಟಿಯಾಗಿರುತ್ತಾನೆ.
ಕಾಶಿಯ ಅಪರೂಪದ ದೃಶ್ಯಾವಳಿಗಳು ಗಂಗಾ ನದಿಯ ಮಾಯೆ ಎಲ್ಲವೂ ವಿನೂತನ ಸೃಷ್ಟಿ ಯಾಗಿಯೇ ಕಾಣುತ್ತವೆ. ‘ಮಾಯ ಗಂಗೆ’ ಹಾಗೂ ‘ಬೆಳಕಿನ ಕವಿತೆ’ ಕಾಶಿ ಸೌಂದರ್ಯವನ್ನು ಬಗೆದು ಕೊಡುತ್ತವೆ.
ಮನಸ್ಸಿನ ವೇಗ ಮತ್ತು ನಿಯಂತ್ರಣದ ಸಾಧನೆಯ ಪ್ರಯೋಗಕ್ಕೆ ಒಡ್ಡಿಕೊಂಡ ನಿಲುವಿನಲ್ಲಿ ‘ಕಾಲ ಯಂತ್ರ’ದ ಸುಳಿಗೆ ಸಿಲುಕಿ ಒದ್ದಾಡಿ ಕೊನೆಗೆ ಕಥೆ ಸುಖಾಂತ ಕಾಣುತ್ತದೆ.
ಸಿದ್ದಾರ್ಥ ಆಗಿರುವ ಝೈಹಿದ್ ಖಾನ್ ಆವೇಗದ ಯುವಕನಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ಎಲ್ಲಾ ವರಸೆಗಳಲ್ಲಿಯೂ ತಾನೊಬ್ಬ ಹೊಸಬ ಎಂಬುದನ್ನು ತೋರಿಸಿಕೊಳ್ಳದಂತೆ ಅದ್ಭುತವಾಗಿ ನಟಿಸಿದ್ದಾರೆ. ಶರಣ್ ಅವರ ಧ್ವನಿ ಅವರಿಗೆ ಹೊಂದಾಣಿಕೆಯಾಗಿದೆ. ಅವರಿಗೆ ತಕ್ಕಂತೆ ಸೋನಾಲ್ ಮಂಥೇರೋ ಸಾಥ್ ನೀಡಿದ್ದಾರೆ. ಶಂಭು ಪಾತ್ರದಲ್ಲಿ ಸುಜಯ್ ಶಾಸ್ತ್ರಿ ಎಲ್ಲರ ಮೆಚ್ಚುಗೆ ಗಳಿಸ ಬಲ್ಲರು.
ಅಪ್ಪನಾಗಿ ದೇವರಾಜ್ ವಿಜ್ಞಾನಿಯಾಗಿ ಅಚ್ಯುತ್ ಕುಮಾರ್, ಚಿಕ್ಕಮ್ಮನಾಗಿ ಸ್ವಪ್ನರಾಜ್, ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಇನ್ನು ಅಜನೀಶ್ ಲೋಕನಾಥ್ ಸಂಗೀತ ಏಕೋ ಚಿತ್ರದ ಪೂರ್ವಾರ್ಧದಲ್ಲಿ ಕಳೆಗಟ್ಟುವುದೇ ಇಲ್ಲ. ಉತ್ತರಾರ್ಧದಲ್ಲಿ ಕೊಂಚ ಪರವಾಗಿಲ್ಲ. ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ ಅಷ್ಟೇ..