ರೇಟಿಂಗ್ 3.5/5
ಕ್ರೀಡಾ ಸ್ಫೂರ್ತಿಯ ಕೊರತೆ..
ಮನುಷ್ಯನ ಜಂಭದ ಮನೋಭಾವ ಅಥವಾ ಒಳಗಿನ ಅಹಂ ನಿಧಾನವಾಗಿ ಅವಸಾನದತ್ತ ಕೊಂಡೊಯ್ಯುತ್ತದೆ. ಇದು ಆಗಿಯೇ ತೀರಬೇಕು ಎಂಬ ಮನಸ್ಥಿತಿ ಸರ್ವನಾಶಕ್ಕೆ ಕಾರಣ ಆಗಲೂ ಬಹುದು..
ಕೋರಾಫಿಟ್ ರಂಗಪ್ಪನ ‘ನಾನು ಕೋರಾಫಿಟ್..’ ಎಂಬ ಮದವೇರಿದ ಮನವು ಮದಗಜ ಶಿಷ್ಯನನ್ನು ತಯಾರು ಮಾಡಲು ಹಂಬಲಿಸುತ್ತದೆ. ಇದರಿಂದ ಕೈಯಲ್ಲಿರುವ ಚಿನ್ನದಂಥ ಹುಡುಗ ಕಾಣುವುದಿಲ್ಲ..
ಅದೇ ರೀತಿ ಅಪ್ಪ ಕ್ರಿಮಿನಲ್ ಎಂಬ ಭಾವದಲ್ಲಿ ಮಕ್ಕಳನ್ನು ಹಳದಿ ಕಣ್ಣಿನಿಂದ ನೋಡುವುದು ಕೆಟ್ಟ ಹುಳಗಳ ರೀತಿಯ ಜನರನ್ನು ಬೆಳೆಸಲು ಕಾರಣವಾಗುತ್ತದೆ.
‘ಏನೇ ಬರಲಿ ರಟ್ಟೆ ತಟ್ಟು.. ‘ ಎಂಬ ಗರಡಿ ಮನೆಯ ಧೇಯ ವಾಕ್ಯ ವಿಸ್ತರಿಸಿ ನಿಲ್ಲುವುದು ಏಕಲವ್ಯನ ರೀತಿ ಗರಡಿ ಪಟ್ಟುಗಳನ್ನು ಕಲಿಯುವ ಸೂರಿಯ ಕಾರಣದಿಂದ.
ಸೂರಿ ಸದಾ ಕಾಲವೂ ಗರಡಿ ಮನೆಯ ಮಾನ ಕಾಪಾಡುವ ಬಾಹುಬಲಿ. ಆದರೆ ಆತನನ್ನು ಗರಡಿ ಮನೆ ಕೆಲಸಕ್ಕೆ ಇಟ್ಟುಕೊಂಡಿರುವ ರಂಗಪ್ಪನ ಕಣ್ಣಿಗೆ ದೊಡ್ಡ ಪೊರೆ ಆವರಿಸಿ ಅದು ಕಾಣುವುದಿಲ್ಲ..
ಇದೇ ವೇಳೆ ಊರ ಹಬ್ಬದ ಪಂದ್ಯಾವಳಿಯಲ್ಲಿ ಜಯಿಸಲು ಸೂರಿ ಸಮರ್ಥನಾದರೂ ರಂಗಪ್ಪನ ಆಸೆಯೇ ಬೇರೆ ಇರುತ್ತದೆ. ಅದು ಶಿಷ್ಯನಾಗಿ ಪಡೆದಿರುವ ಚಿಕ್ಕರಾಣೆಯನ್ನು ಗೆಲ್ಲಿಸಿ ಅದರ ಜಯವನ್ನೂ ಮುಡಿಗೇರಿಸಿಕೊಳ್ಳುವ ತವಕ.
ಆದರೆ ರಂಗಪ್ಪನ ಹುಂಬತನದಿಂದ ನಡೆಯಬಾರದ್ದೆಲ್ಲವೂ ನಡೆದು ಹೋಗುತ್ತದೆ. ಎರಡು ಕೊಲೆ ಮತ್ತು ಅದರಿಂದ ಉಂಟಾದ ಅರಾಜಕತೆ ನಿಯಂತ್ರಿಸಲು ಬಲ ಭೀಮ (ದರ್ಶನ್) ಬರಲೇ ಬೇಕಾಗುತ್ತದೆ. ಆಮೇಲೆ ನಡೆಯುವುದೆಲ್ಲವೂ ಮಾರಿಹಬ್ಬ.
ಕಣ್ತುಂಬುವ ದೃಶ್ಯ ವೈಭವ; ನೋಡಿರದ ಗತಕಾಲದ ಗರಡಿ ಮನೆ; ಉತ್ತರ ಕರ್ನಾಟಕದ ಸೊಗಡು ಊಟ ಬಡಿಸಿದಂತೆ ಇದ್ದರೂ ಎಲ್ಲಿಯೋ ಏನೋ ಕೊರತೆ ಎದುರಾಗುತ್ತದೆ..
ಅದು ಕಥೆಯ ಬಿಗಿ ಹೊಂದಾಣಿಕೆ..!
ಅನಾಥರಾದ ಇಬ್ಬರು ಮಕ್ಕಳನ್ನು ಸೇಡಿನ ದಾರಿಯಲ್ಲಿ ಬೆಳೆಸುವ ಮಾಮೂಲಿ ವರಸೆಯಿಂದ ಮುಕ್ತವಾದರೂ ದುಷ್ಟತನದಿಂದ ಮೆರೆಯುವವರ ಅಟ್ಟಹಾಸ ರಂಗಪ್ಪನ ಕಣ್ಣಿಗೆ ಕಾಣದೇ ಹೋಗುವುದು ಈ ಎಲ್ಲಾ ಅನಾಹುತ ಕ್ಕೆ ಕಾರಣ.
ವೇಗದ ಗತಿಯನ್ನು ಹೊರತುಪಡಿಸಿದ ಕಥೆಯ ನಿರೂಪಣೆಯಲ್ಲಿ ಬಹು ಪ್ರಮುಖವಾಗಿ ಬೇಕಾಗಿರುವ ಕ್ರೀಡಾಸ್ಫೂರ್ತಿ ಕಾಣುವುದೇ ಇಲ್ಲ. ಹಾಗಾಗಿ ಭಟ್ಟರ ವರಸೆ ಹಾದಿ ತಪ್ಪಿದ ಅನುಭವ ನೀಡುತ್ತದೆ.
ಇಷ್ಟಾದರೂ..!
‘ಮದವೇರಿದ ಮನದ ಅವಸಾನಕ್ಕಾಗಿ ಕಾಲವೆಂಬುದು ಕಾದು ಕುಳಿತಿರುತ್ತದೆ..’ ಎಂಬುದನ್ನು ನಿರೂಪಿಸುವ ಚಿತ್ರವಾಗಿ ಗರಡಿ ನಿಲ್ಲುತ್ತದೆ..
ಇಡೀ ಚಿತ್ರವನ್ನು ಆವರಿಸಿರುವುದು ಕೋರಾಫಿಟ್ ರಂಗಪ್ಪ. ಈ ಪಾತ್ರದಲ್ಲಿ ಬಿ.ಸಿ.ಪಾಟೀಲ್ ಮಿಂಚಿದ್ದಾರೆ. ಸೂರಿ ಪಾತ್ರದ ಸೂರ್ಯ, ಚಿಕ್ಕರಾಣೆ ಪಾತ್ರದಲ್ಲಿ ಸುಜಯ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಪಪ್ಪಿ ಸುಕನ್ಯ ಅಲಿಯಾಸ್ ಕಬ್ಬಾಳಿ ಪಾತ್ರದಲ್ಲಿ ಸೊನಾಲ್ ಮಂಥೇರ್ ಸೂಪರ್. ನಯನ ಹಾಗೂ ಧರ್ಮಣ್ಣ ಪಾತ್ರಗಳು ಕೂಡ ಗಮನ ಸೆಳೆಯುತ್ತದೆ.
ಆದರೆ ದರ್ಶನ್ ಫೈಟಿಂಗ್ ನಲ್ಲಿ ಬಂದು ಅಬ್ಬರಿಸಿದರೂ ರವಿಶಂಕರ್ ಅವರ ಶಿವಪ್ಪನ ಪಾತ್ರ ಏನೋ ಕೊರತೆಗಳನ್ನು ಎದುರಿಸುತ್ತವೆ.
ನಿರಂಜನ್ ಬಾಬು ಛಾಯಾಗ್ರಹಣ ಚಿತ್ರಕ್ಕೆ ಪೂರಕ ಎನಿಸಿದರೂ ಹರಿಕೃಷ್ಣ ಸಂಗೀತದ ಅಬ್ಬರ ಕಾಣದೇ ಹೋಗಿರುವುದು ಅಚ್ಚರಿ.