ಯಾವುದೇ ಭಾಷೆಯ ಸಿನಿಮಾ ಇರಲಿ ಗೆಲುವಿನ ಸೂತ್ರ ಯಾರಿಗೂ ತಿಳಿದಿರುವುದಿಲ್ಲ. ಹಾಗಾಗಿ ಸಿನಿಮಾ ನಿರ್ಮಾಣ ಎಂದರೆ ಅದು ಕಣ್ಣ ಮುಚ್ಚಾಲೆ ಆಟದಂತೆ ಅಥವಾ ಜೂಜಿನಂತೆ..!
ಒಂದು ಸಿನಿಮಾ ಗೆಲುವು ಪಕ್ಕಾ ಅಲ್ಲ; ಪ್ರೇಕ್ಷಕರ ಮನಸ್ಥಿತಿ ಅರಿಯುವುದು ಕಷ್ಟ. ಇಂತಹ ಸಂದರ್ಭದಲ್ಲಿ ಹಣ ಹೂಡಿಕೆ ಮಾಡಿದ ನಿರ್ಮಾಪಕನಿಗೆ ಲಾಭ ಮಾಡಿಕೊಡುವ ವ್ಯವಸ್ಥೆಯೇ ಮೇಲಿಂದ ಬರುವ ಪರ್ಯಾಯ ಮಾರ್ಗ ಓಟಿಟಿ..
ಆದರೆ ಕನ್ನಡ ಚಿತ್ರಗಳಿಗೆ ಇದು ಕಬ್ಬಿಣದ ಕಡಲೆ ಹೇಗೆ.. ಎಂಬುದು ಯಕ್ಷ ಪ್ರಶ್ನೆ ಏನೂ ಅಲ್ಲ; ಕನ್ನಡದಲ್ಲಿ ಓಟಿಟಿ ಗೆ ಬೇಕಾದ ಚಂದಾದಾರರು ಇಲ್ಲ..
ಹಾಗೆನ್ನುತ್ತದೆ ವ್ಯವಸ್ಥೆ..!
ಕನ್ನಡದ ಸ್ಟಾರ್ ಚಿತ್ರಗಳು ಓಟಿಟಿಯಲ್ಲಿ ಪರಿಯಣಿಸಲ್ಪಡುತ್ತವೆ.. ಇದು ಹೇಗೆ.. ಎಂಬ ಪ್ರಶ್ನೆಯೂ ಮೇಲೆಳುತ್ತದೆ. ಸ್ಟಾರ್ ಚಿತ್ರಗಳನ್ನು ಯಾವ ಭಾಷೆಯ ಜನರೂ ನೋಡಬಲ್ಲರು. ಹಾಗಾಗಿ ಅದಕ್ಕೆ ಒಂದು ಮೌಲ್ಯವಿರುತ್ತದೆ ಎಂಬುದು ಸಮರ್ಥನೆ..
ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಗುಣಮಟ್ಟದ ಚಿತ್ರಗಳು ಬರುತ್ತಿಲ್ಲವೇ.. ಈ ಪ್ರಶ್ನೆ ಬಹು ಕಾಲದ್ದು ನಿಜ; ಕನ್ನಡದಲ್ಲಿ ಅಕಸ್ಮಾತ್ ಗುಣಮಟ್ಟದ ಚಿತ್ರಗಳು ಬಂದರೂ ಅವು ಹೊಸಬರ ಸಿನಿಮಾಗಳು ಹಾಗಾಗಿ ಪರಿಗಣಿಸಲ್ಪಡುವುದಿಲ್ಲ ಎಂಬುದು ಉದ್ಯಮದವರ ಮಾತು.
ಆದರೆ ಸಿನಿಮಾ ನಿರ್ಮಾಣ ಭ್ರಮೆಯ ಸುತ್ತಲೂ ನಿಂತಿರುತ್ತದೆ. ಕೆಲವರಿಗೆ ‘ಹೆತ್ತವರಿಗೆ ಹೆಗ್ಗಣ ಮುದ್ದು..’ ಎನ್ನುವಂತೆ.. ಆದರೆ ಬೇರೆಯವರು ಅದನ್ನು ಬೇರೆ ರೀತಿ ನೋಡಿರುತ್ತಾನೆ ಪ್ರೇಕ್ಷಕ ಕಣ್ಣೆತ್ತಿಯೂ ನೋಡಿರುವುದಿಲ್ಲ ಹೀಗೇಕೆ..
ಅದು ಅದೇ ಚಿತ್ರದ ಗುಣಮಟ್ಟ..! ಗುಣಮಟ್ಟವೆಂದರೆ ಕಥೆ, ಚಿತ್ರಕಥೆ, ನಿರೂಪಣೆ, ಸಂಗೀತ ಮತ್ತು ಎಷ್ಟು ಬಂಡವಾಳ ಎಲ್ಲವನ್ನು ಅವಲಂಭಿಸಿರುತ್ತದೆ. ಕಡಿಮೆ ಬಂಡವಾಳ ಹಾಕಿ ಹೆಚ್ಚಿದನ್ನು ನಿರೀಕ್ಷೆ ಮಾಡಿರುವವರ ಪಟ್ಟಿ ದೊಡ್ಡದಿದೆ.
ಹಾಗಾಗಿ ಅಂತಹ ಚಿತ್ರಗಳು ಸಾರಾಸಗಟಾಗಿ ತಿರಸ್ಕರಿಸಲ್ಪಡುತ್ತವೆ ಎನ್ನುತ್ತಾರೆ ಕೆಲವು ಚಿತ್ರೋದ್ಯಮದ ಮಂದಿ.
ಈಚೆಗೆ ಕನ್ನಡದ ಗಂಡುಗಲಿ ನಿರ್ಮಾಪಕ ಎಂದೇ ಕರೆಸಿಕೊಳ್ಳುವ ಕೆ.ಮಂಜು ಅವರು ಹೆಚ್ಚಿನ ನಿರ್ದೇಶಕರು ‘ತಮ್ಮ ಮನೆಯ ಮನಸ್ಸಿನ ಸಂಕಟವನ್ನು ಚಿತ್ರದ ಮೇಲೆ ಹೇರಿ ಬಿಡುತ್ತಾರೆ..’ ಚಿತ್ರ ಓಡು ಅಂದರೆ ಎಲ್ಲಿ ಓಡುತ್ತದೆ ಎಂದು ಆಕ್ರೋಶವನ್ನು ಹೊರಹಾಕಿದ್ದರು. ಈ ಮಾತನ್ನು ಅರ್ಥೈಸಿದರೆ ಸಾಕು ಕನ್ನಡದ ಚಿತ್ರಗಳ ಗುಣಮಟ್ಟದ ಅರಿವಾಗುತ್ತದೆ..
ಆದರೆ ಪ್ರತಿಭೆ ಹಣ ಸಾಮರ್ಥ್ಯ ಎಲ್ಲವನ್ನೂ ಹಾಕಿ ಸಿನಿಮಾ ಮಾಡಿದರೂ ಅವರ ಮೇಲೆ ಬೇರೆ ರೀತಿಯ ಅಪಪ್ರಚಾರವನ್ನು ಮಾಡಲಾಗುತ್ತದೆ..
ಈಚೆಗೆ ‘ಕಬ್ಜ’ ನಿರ್ದೇಶಕ ಆರ್.ಚಂದ್ರು ಈ ರೀತಿಯ ಆಕ್ರೋಶವನ್ನು ಹೊರ ಹಾಕಿದರು. ಒಂದು ಗುಣಮಟ್ಟದ ಚಿತ್ರಕ್ಕೆ ನೀವೇಕೆ ಅಪಪ್ರಚಾರ ಮಾಡುತ್ತೀರಿ ಎಂದರು.
ನಾನು 20 ಕೋಟಿ ತೆರಿಗೆ ಕಟ್ಟಿರುವೆ. 16 ಜನರಿರುವ ಸಮಿತಿ ಚಿತ್ರವನ್ನು ಓಟಿಟಿಗೆ ಆಯ್ಕೆ ಮಾಡುತ್ತದೆ. ಅದು ಹೇಗೆ ಸಾಧ್ಯವಾಗುತ್ತದೆ. ಅವರೆಲ್ಲಾ ದಡ್ಡರಾ ಎಂದು ಆಕ್ರೋಶದಿಂದಲೇ ಪ್ರಶ್ನಿಸಿದ್ದರು ಚಂದ್ರು..
ಇನ್ನು ಕರಿಯ2, ಗಣಪ ಹಾಗೂ ಈಚೆಗೆ ಪ್ರಣಯಂ ಚಿತ್ರ ಮಾಡಿರುವ ಪರಮೇಶ್ ಕನ್ನಡ ಚಿತ್ರಗಳ ಮಾರುಕಟ್ಟೆ ವಿಷಯವನ್ನು ಪ್ರಸ್ತಾಪಿಸುತ್ತಾ ನಾವು ಅನಾಥರಂತೆ. ಇಲ್ಲಿ ನಿರ್ಮಾಪಕನಿಗೆ ಯಾವುದೇ ಬೆಲೆ ಇಲ್ಲ ಎಂದರು.
ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ.. ಸ್ಯಾಟ್ ಲೈಟ್ ಹೋಗಲ್ಲ; ಓಟಿಟಿಯವರು ತೆಗೆದುಕೊಳ್ಳುವುದಿಲ್ಲ. ಎಲ್ಲೋ ಡಬ್ಬಿಂಗ್ ರೈಟ್ಸ್ ಅಂತಾ ಜೀವನ ಮಾಡಬೇಕು. ಪ್ರೇಕ್ಷಕನಂತೂ ಇಲ್ಲವೇ ಇಲ್ಲ ಎಂದು ಕೋಪದಿಂದಲೇ ಹೇಳಿದ್ದರು ಪರಮೇಶ್.
ಸ್ಟಾರ್ ಚಿತ್ರಗಳಿಗೆ ಸಿಗುವ ಓಟಿಟಿ ವ್ಯವಸ್ಥೆ ಸಾಮಾನ್ಯ ಚಿತ್ರಗಳಿಗೆ ಏಕೆ ಇಲ್ಲ ಎಂಬುದಕ್ಕೆ ಬೇಕಾದಷ್ಟು ವಿವರಗಳು ಚಿತ್ರೋದ್ಯಮದವರ ಮಾತುಗಳಲ್ಲೇ ವ್ಯಕ್ತವಾಗುತ್ತದೆ.
ಓಟಿಟಿ ವ್ಯವಸ್ಥೆ ಚಂದಾದಾರರನ್ನು ಕೇಳುತ್ತದೆ. ‘ಪೇವರ್ ವೀವ್’ ಎಂಬ ತಾಂತ್ರಿಕ ಅಂಶವನ್ನು ಮುಂದಿಡುತ್ತದೆ. ಹಾಗಾಗಿ ಇಲ್ಲಿ ಕನ್ನಡ ಚಿತ್ರಗಳು ಪ್ರಜ್ವಲಿಸಲು ಕನ್ನಡಿಗರು ಹೆಚ್ಚಿನ ಪ್ರಮಾಣದಲ್ಲಿ ಚಂದಾದಾರರಾಗಬೇಕು ಇಲ್ಲವೇ ಲಭ್ಯವಿರುವ ಹೆಚ್ಚು ಹೆಚ್ಚು ಕನ್ನಡ ಚಿತ್ರಗಳನ್ನು ನೋಡಬೇಕು..
ಇದೆಲ್ಲವನ್ನೂ ಮೀರಿದ ವಿಷಯವೆಂದರೆ ಕನ್ನಡದಲ್ಲಿ ಹೆಚ್ಚು ಹೆಚ್ಚು ಸ್ಟಾರ್ ಚಿತ್ರಗಳು ನಿರ್ಮಾಣವಾಗಬೇಕು. ಹಾಗೆಯೇ ಗುಣಮಟ್ಟದ ಚಿತ್ರಗಳು ಶ್ರೀಮಂತಿಕೆ ಎದ್ದು ಕಾಣುವ ಅದ್ದೂರಿ ಚಿತ್ರಗಳು ಬರಬೇಕು ಎಂಬುದು ಚಿತ್ರರಂಗದ ಹಿರಿಯರೊಬ್ಬರ ಮಾತು.
ಸದ್ಯದ ಪರಿಸ್ಥಿತಿಯಲ್ಲಿ ಸ್ಟಾರ್ ಗಳ ಕೊರತೆ ಎದ್ದು ಕಾಣುತ್ತಿದೆ. ಇರುವ ಸ್ಟಾರ್ ಗಳಲ್ಲಿ ಶಿವರಾಜ್ ಕುಮಾರ್ ಅವರನ್ನು ಹೊರತುಪಡಿಸಿ ಉಳಿದವರು ಎರಡು ಅಥವಾ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾರೆ ಇದು ಸರಿಯಾದ ಕ್ರಮವಲ್ಲ ಎನ್ನುತ್ತಾರೆ ಉದ್ಯಮದ ಗಣ್ಯರು.
ಕನ್ನಡದ ಸ್ಟಾರ್ ಗಳು ವರ್ಷಕ್ಕೆ ಕನಿಷ್ಟ ಮೂರು ಸಿನಿಮಾ ಮಾಡಿದರೆ ಉದ್ಯಮ ಬದುಕುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಈಚೆಗೆ ಹೇಳಿದ್ದರು.
ಕೆಜಿಎಫ್, ಕಾಂತಾರ, ಕಬ್ಜ, ಹಾಗೂ ಕಾಟೇರ ಓಡಿಲ್ಲವಾ.. ಸ್ಟಾರ್ ಚಿತ್ರಗಳು ಕನ್ನಡಕ್ಕೆ ಅನಿವಾರ್ಯ ಎಂಬುದು ಈ ಮೂಲಕ ಸಾಬೀತಾಗಿಲ್ಲವಾ ಎಂಬುದು ಹಿರಿಯ ನಿರ್ಮಾಪಕರೊಬ್ಬರ ಅನಿಸಿಕೆ.
ಪುನೀತ್ ರಾಜ್ ಕುಮಾರ್ ಅವರಿದ್ದಾಗ ಹೋರಾಟ ಮಾಡಲು ಒಂದು ಧೈರ್ಯವಿತ್ತು. ಈಗ ಕನ್ನಡದ ನಿರ್ಮಾಪಕ ಎಲ್ಲಿಗೆ ಯಾರ ಬಳಿ ಹೋಗಬೇಕು ಎಂಬುದೇ ತಿಳಿಯದಾಗಿ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದಿದ್ದರು ನಿರ್ಮಾಪಕ ಪರಮೇಶ್.
ಸದ್ಯದ ಮಟ್ಟಿಗೆ ಕನ್ನಡದಲ್ಲಿ ಹಣ ಹೂಡಿಕೆ ಮಾಡಿ ಚಿತ್ರ ಮಾಡುವ ಎದೆಗಾರಿಕೆ ವೃತ್ತಿಪರರಿಗೆ ಇಲ್ಲ. ಎಲ್ಲೋ ಹೊಸಬರು ಬಂದು ಚಿತ್ರಗಳನ್ನು ಮಾಡುತ್ತಿದ್ದಾರೆ ಅಥವಾ ಕಡಿಮೆ ಬಜೆಟ್ ನ ಚಿತ್ರಗಳು ತಯಾರಾಗುತ್ತಿವೆ. ನಿಜಕ್ಕೂ ಈಗ ಕನ್ನಡ ಚಿತ್ರರಂಗಕ್ಕೆ ಹೊಸ ಕಾಯಕಲ್ಪ ಬೇಕಾಗಿದೆ ಎಂಬುದು ಚಿತ್ರರಂಗದ ಹಿರಿಯರ ಅನಿಸಿಕೆಯಾಗಿದೆ.