Snehapriya.com

June 5, 2025

ಅನುಪಮ ಗಾಯಕಿ ವಾಣಿ ಜಯರಾಂ ಇನ್ನು ನೆನಪು ಮಾತ್ರ

Social Share :

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿದ ಗಾಯಕಿಗೆ ಗೌರವದ ನಮನ.

ತೆರೆದ ಮನೆಯ ಅತಿಥಿಯನ್ನು ಕರೆದು ಅಲ್ಲೇ ಇರಲು ಹೊರಟ ನಿಮಗೆ ನಮನ.

ವಾಣಿ ಅಮ್ಮ 🙏🙏🙏🙏🙏🙏🙏🙏🙏😥😥😥😥😥😥🙏
ವಾಣಿ ಜಯರಾಂ ಕೇವಲ ಹೆಸರಲ್ಲ, ಶಾರದೆಯ ಇನಿದನಿಯ ಸ್ವತ್ತನ್ನು ತನ್ನ ಕೊರಳಲ್ಲಿ ಸ್ವಾಯತ್ತವಾಗಿರಿಸಿ ಕೊಂಡಿದ್ದ ಶ್ರೀಮಂತ ಕೋಗಿಲೆ.

‘ಯಾವುದಾದರೂ ಕಷ್ಟಕರವಾದ ಹಾಡುಗಳಿದ್ದರೆ ನನ್ನನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ನನಗೆ ಆ ಚಾಲೆಂಜಸ್ ಬಹಳ ಇಷ್ಟ ಆಗ್ತಿತ್ತು..’ -ವಾಣಿ ಜಯರಾಂ.

ಕೆಸರಿನ ಕಮಲ ಚಿತ್ರದ ಮೂಲಕ ವಾಣಿ ಜಯರಾಂ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರಾದರೂ ‘ನಗು ನೀ ನಗು ಕಿರುನಗೆ ನಗು… ‘ ಹಾಡಿಗಿಂತ ಉಪಾಸನೆ ಚಿತ್ರದಲ್ಲಿ ವಿಜಯಭಾಸ್ಕರ್ ಸಂಗೀತ ನಿರ್ದೇಶನದಲ್ಲೇ ಹಾಡಿರುವ ಹಿಂದೋಳ ರಾಗಾಧಾರಿತ ಗೀತೆ ‘ಭಾವವೆಂಬ ಹೂವು ಅರಳಿ..’
ಅವರಷ್ಟು ಸುಲಲಿತವಾಗಿ ಹಾಡುವವರನ್ನು ಕಾಣಲು ಮತ್ತೆ
ಯಾರಿಂದಲೂ ಸಾಧ್ಯವಿಲ್ಲ. ಮಂಜುಳ ಅಭಿನಯದ ‘ನಿನಗಾಗಿ ನಾನು’ ಚಿತ್ರದ ಬಂಗಾರದೀ ಕರವು ಸೋಕಿದಾಗಲೆ,
‘ಶುಭಮಂಗಳ’ ಚಿತ್ರದ ಈ ಶತಮಾನದ ಮಾದರಿ ಹೆಣ್ಣು
ಅಷ್ಟು ಸುಲಭದಲ್ಲಿ ಹಾಡಲಾಗದ್ದನ್ನು ಸರಾಗವಾಗಿ ಹಾಡಿರುವ ವಾಣಿ ಅಮ್ಮ ‘ಬಂಗಾರದ ಜಿಂಕೆ’ ಚಿತ್ರದಲ್ಲಿ ಹಾಡಿರುವ ಸಂಗಾತಿಯು ಬಳಿ ಬಾರದೆ, ‘ಎರಡು ಕನಸು’ ಚಿತ್ರದ ಎಂದೆಂದೂ ನಿನ್ನನು ಮರೆತು, ‘ಬಿಳಿ ಹೆಂಡ್ತಿ’ ಚಿತ್ರದ ಹ್ಯಾಪಿಯೆಸ್ಟ್ ಮೂಮೆಂಟ್ ಈಗಲೂ ಹೃದಯಾನಂದ ನೀಡುವಂಥವು.

‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಉಯ್ಯಾಲೆ ಆಡೋಣ ಮತ್ತು ‘ಮಸಣದ ಹೂವು’ ಚಿತ್ರದ ಕನ್ನಡ ನಾಡಿನ ಕರಾವಳಿ ಹಾಡುಗಳ ವೈಖರಿ ಅನ್ಯಾದೃಶ.

ಆದರೆ ನನಗೆ ಅವರ ಧ್ವನಿ ಇಷ್ಟವಾಗುವುದು ಮಧುಮಾಸ ಚಂದ್ರಮ, ನಿಂತಲ್ಲೂ ಅವನೇ ಕಾಣ್ತಾನಲ್ಲೇ.. ಹಾಡುಗಳು. ಜೊತೆಗೆ ಕನಸಲೂ ನೀನೆ, ವಸಂತ ಬರೆದನು ಒಲವಿನ ಓಲೆ, ದೇವರ ಗುಡಿ ಚಿತ್ರದ ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ ನನ್ನ ಆಲ್ ಟೈಮ್ ಫೇವರೇಟ್.

ಹೋದೆಯ ದೂರ ಓ ಜೊತೆಗಾರ ಎಂದು ಹಂಸಾನಂದಿ ಯಲ್ಲಿ ಉಲಿದು ಸವಿನೆನಪುಗಳು ಬೇಕು ಸವಿಯಲು ಬದುಕು ಎಂದು ಆರ್ದ್ರವಾಗುತ್ತಲೇ ಹಾಲು ಜೇನು ಸೇರಿದಹಂಗೆ ಪ್ರೀತಿ ಸಂಸಾರ, ಸಂಸಾರ ಸಾಗರ ಆನಂದದಾಗರ ಎಂದು ಹಾಡಿ ದೇವಮಂದಿರದಲ್ಲಿ ದೇವರು ಕಾಣಲೇ ಇಲ್ಲ…. ಎಂದ ವಾಣಿ ಜಯರಾಂ ಅವರಿಗೆ ಸರಿಸಾಟಿ ವಾಣಿ ಜಯರಾಂ ಮಾತ್ರ.

ಅಮ್ಮ
ನಿಮ್ಮ ಹಾಡು ನಿನ್ನ ಕೊಂಕು ನೋಟವ ಎಂದೂ ರೇಗಿಸಿತು,
ಚಿಕ್ಕವನೇನೆ ಇವನು ಎಂದೂ ತುಂಟಾಟ ಆಡಿ ಬೆಳ್ಳಿಮೋಡವೆ ಎಲ್ಲಿ ಓಡುವೆ ಎಂದವರು ನೀವೇ ಈಗ ಬೆಳ್ಳಿ ಮೋಡದತ್ತ ಹೊರಟಿರಿ ಓ ಪ್ರಿಯತಮ ಎಂದಿರಿ ಜೊತೆಗೆ
ನಾ ಯಾರೋ ಅರಿವಾಗದೆ ಅಂದಿರಿ.

ಹಾಡು ಹಳೆಯದಾದರೇನು ಭಾವ ನವನವೀನ.

ಆ ಮೇರು ಈ ಮೇರು ಆಸೆಯ ಹೂ ತೇರು
ಎಲೆಎಲೆಯೂ ಬಸವಣ್ಣ
ತುಂಬೈತೆ ಕಣ್ಣ ಎಂದು ಕಣ್ತುಂಬಿಕೊಂಡ ನೀವು ಮಾನಸ ಸಂಚರರೆ ಎಂದು ನಮ್ಮೆಲ್ಲರ ಮನಸ್ಸಲ್ಲಿ ಸಂಚರಿಸಿದಿರಿ.
ಯೇ ತೀಗ ಪುವ್ವುನು…ಎಂದು ಸನಿಹವಾಗಿ ಈಗಲೂ ಮಲ್ಲಿಗೈ ಎನ್ ಮನ್ನನ್ ಮಯಂಗು ಎಂಬ ಹಾಡಿನ ಕಲೈವಾಣಿಯಾಗೇ ಕಾಡುವ ನಿಮ್ಮ ಹಾಡುಗಳಿಗೆ ಕಂಠಕ್ಕೆ ಸಾವು ಸುಳ್ಳಿನ ಮಾತು.
ಹೃದಯ ತುಂಬಿ ಹಾಡುವೆ ಹೊಸದು ಗೀತೆ ಮಾಲಿಕೆ
ಇದುವೆ ನನ್ನ ಪೂಜೆಯು ಕನ್ನಡಾಂಬೆ ಪಾದಕೆ ಎಂದು ನೂರಾರು ಕನ್ನಡ ಹಾಡುಗಳಿಗೆ ಇನಿತನಿಯ ಸ್ವರವಾಗಿ
ಕಣ್ಣಾರೆ ಕಂಡೆ ಕಾಮಾಕ್ಷಿಯ ಎಂದು( ಹಿಂದೋಳ) ಈಗ ಕಾಣದ ಕಾಮಾಕ್ಷಿಯ ಪಾದ ಸೇರಿದ್ದೀರಿ. ಆ ದೇವರೇ ನುಡಿದ ಮೊದಲ ನುಡಿ ಪ್ರೇಮವನ್ನು ಹಾಡಿ ಹಾಡು ಯಾವ ಹಾಡು ಎಂದು ಕೇಳಿ ನಿನ್ನ ಕಂಗಳ ಜ್ಯೋತಿಯಾಗುವೆ ನಾನು ಎಂದ ವಾಣಿ ಜಯರಾಂ ಓ ತಂಗಾಳಿಯೇ …ಎಂದು ತೇಲಿ ತೇಲಿ ಎಲೆಯ ಮೇಲೆ ಹನಿಯ ಸಾಲಿನ ದನಿ ಮೂಡಿಸಿ ಅಮರರಾಗಿಯೇ ಇರುತ್ತಾರೆ.

ನೀವೇ ಹಾಡಿದಂತೆ( ಜಾನಕಿಯಮ್ಮನ ಜೊತೆಗೆ) ನಿಮ್ಮ ಹಾಡುಗಳು ನಿಂತಲ್ಲೂ ಕಾಡುತ್ತವೆ.
ಇನ್ನೆಲ್ಲಿಯ ಬೋಲ್ ರೇ ಪಪಿ ಗಾನದೊಡತಿ.
ರಾಗದ ಜೊತೆಗೆ ತಾಳದ ಬೆಸುಗೆ
ರಾಗ ತಾಳಕೆ ಭಾವದ ಬೆಸುಗೆ ಇನ್ನೆಲ್ಲಿ.
ದಾರಿ ಕಾಣದಾಗಿದೆ ಎಂದ ಕಂಠ ಈಗ ಅಸ್ತಂಗತ.

ಸಮಯ ಒಲಿದಿದೆ ನಲಿದಿದೆ ನಗುತಿದೆ
ಸನಿಹಕೆ ಕರೆದಿದೆ ಕರೆದಿದೆ ಕರೆದಿದೆ

(ಮಿಯಾ ಕಿ ಮಲಹಾರ್)

ಕೋಗಿಲೆಯು ಹಾಡುತಿದೆ ಹೊಸ ರಾಗ
ಕೋಗಿಲೆ ಹಾಡಿದೆ ಕೇಳಿದೆಯ
ಎಂದು ಕೇಳಲಾಗದಂತೆ ಕೋಗಿಲೆಯೇ ಉಸಿರು ನಿಲ್ಲಿಸಿದೆ.

ವಾಣಿ ಅಮ್ಮ ನಿಮಗೆ ಇದೋ ಸಾಷ್ಟಾಂಗ ಪ್ರಣಾಮಗಳು.

-ಡಾ.ಡಿ.ಎಸ್.ಶ್ರೀನಿವಾಸ ಪ್ರಸಾದ್

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *