* ಡಾ.ರಾಜ್ ಕುಮಾರ್ ಸ್ಫೂರ್ತಿಯ ಚಿತ್ರ *
* ಕರ್ನಾಟಕದಲ್ಲಿ ಮೊದಲ ಪ್ರಚಾರ *
* ರಾಕ್ ಲೈನ್ ವಿತರಣೆ *
* ಮೋಹನ್ ಬಾಬು ನಿರ್ಮಾಪಕ *
ಇವನು ಭಕ್ತಿ ಭಾವದ ಮುಗ್ಧ ಕಣ್ಣಪ್ಪನಲ್ಲ! ಆದರೆ ಕಣ್ಣಪ್ಪ ಮೊದಲಿಗೆ ಏನು ಎಂಬುದನ್ನು ಸಾರುವ ಬಹುಕೋಟಿ ವೆಚ್ಚದ ಅದ್ದೂರಿ ಚಿತ್ರ.
ಹೌದು ತೆಲುಗಿನ ಸ್ಟಾರ್ ನಟ ಮೋಹನ್ ಬಾಬು ನಿರ್ಮಾಣದ ಹಾಗೂ ಅವರ ಪುತ್ರ ವಿಷ್ಣು ಮಂಚ್ ಮುಖ್ಯ ಪಾತ್ರದಲ್ಲಿರುವ ‘ಕಣ್ಣಪ್ಪ’ ಬಿಡುಗಡೆಗೆ ಸಜ್ಜಾಗಿದ್ದು, ಅದರ ಪ್ರಚಾರ ಕಾರ್ಯ ಕರ್ನಾಟಕದಿಂದಲೇ ಆರಂಭವಾಗಿದೆ.
ಧೀರ ರಾಕ್ ಲೈನ್ ವೆಂಕಟೇಶ್ ಅವರು ಚಿತ್ರವನ್ನು ವಿತರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಕರ್ನಾಟಕದಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದು, ಈಚೆಗೆ ಸ್ಟಾರ್ ಹೊಟೇಲ್ ನಲ್ಲಿ ವಿಷ್ಣು ಮಂಚ್ ಸೇರಿದಂತೆ ಗಣ್ಯರು ಈ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.
ಚಿತ್ರದಲ್ಲಿ ನೃತ್ಯ ನಿರ್ದೇಶನ ಮಾಡಿರುವ ಪ್ರಭುದೇವ, ನಟಿಸಿರುವ ಶರತ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್ ಚಿತ್ರದ ಬಗ್ಗೆ ಮಾಹಿತಿಗಳನ್ನು ನೀಡಿದರು.
ಈ ಕಣ್ಣಪ್ಪ ಸಾಮಾನ್ಯನಲ್ಲ; ಅಪ್ರತಿಮ ಹೋರಾಟಗಾರ ಮತ್ತು ಅದಮ್ಯ ಭಕ್ತಿ ಸಿಂಚನ ತುಂಬಿಕೊಂಡವನು. ಹಾಗಾಗಿ ಚಿತ್ರದ ಮಾದರಿಯೇ ಬೇರೆಯಾಗಿದೆ. ಒಂದು ಕಮರ್ಷಿಯಲ್ ಚಿತ್ರದ ಎಲ್ಲಾ ಗುಣಗಳಿವೆ ಎಂದರು ವಿಷ್ಣು ಮಂಚ್.
ನನಗೆ ವರನಟ ಡಾ.ರಾಜ್ ಕುಮಾರ್ ಅವರ ಮೊದಲ ಚಿತ್ರ ‘ಬೇಡರ ಕಣ್ಣಪ್ಪ ‘ ಸ್ಫೂರ್ತಿ. ಆನಂತರ ಶಿವರಾಜ್ ಕುಮಾರ್ ‘ಶಿವ ಮೆಚ್ಚಿದ ಕಣ್ಣಪ್ಪ’ ಮಾಡಿದ್ದರು. ಅದರಲ್ಲಿ ರಾಜ್ ಕುಮಾರ್ ಸರ್ ಶಿವನ ಪಾತ್ರದಲ್ಲಿ ನಟಿಸಿದ್ದರು. ಇವೆರಡೂ ಚಿತ್ರಗಳು ನಮಗೆ ಅನುಕರಣೆಯಾಗಿವೆ ಎಂದರು.
ಇದೇ ಕಾರಣದಿಂದಲೇ ನಾವು ನಮ್ಮ ಈ ಚಿತ್ರದ ಪ್ರಚಾರ ಕಾರ್ಯವನ್ನು ಇಲ್ಲಿಂದಲೇ (ಕರ್ನಾಟಕ) ಆರಂಭಿಸಿದ್ದೇವೆ. ಇದಕ್ಕೆ ರಾಕ್ ಲೈನ್ ವೆಂಕಟೇಶ್ ಅವರ ಸಹಕಾರ ದೊಡ್ಡದು ಎಂದರು ವಿಷ್ಷು ಮಂಚ್.
ಸಾಕಷ್ಟು ಅಧ್ಯಯನದ ಬಳಿಕ ಈ ಕಥೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಭಕ್ತಿ ಭಾವದಲ್ಲಿ ಮತ್ತು ಚಾರಿತ್ರಿಕ ಸಂಗತಿಗಳನ್ನು ಹುಡುಕುವುದರಲ್ಲಿ ಮೊದಲಿನಿಂದಲೂ ನನಗೆ ಹೆಚ್ಚು ಆಸಕ್ತಿ. ಆ ಶ್ರಮ ಇಲ್ಲಿ ಹಾಕಿದ್ದೇನೆ ಎಂದು ಹೇಳುತ್ತಾ ಹೋದರು.
ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಮಲಯಾಳಂ ನ ಮೋಹನ್ ಲಾಲ್ ಹಾಗೂ ಪ್ರಭಾಸ್ ಅವರಂತಹ ದೊಡ್ಡ ಸ್ಟಾರ್ ಗಳಿದ್ದು, ಅವರ ಪಾತ್ರಗಳ ಬಗ್ಗೆ ಹೇಳಲು ಮುಂದಿನ ದಿನಗಳನ್ನು ಕಾದು ನೋಡಿ ಎಂದರು.
ಕನ್ನಡದವರೇ ಆದ ದೇವರಾಜ್, ಸಾಧು ಕೋಕಿಲ ಹಾಗೂ ಇತರರು ಕೂಡ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಡೇಟ್ ಸಿಗಲಿಲ್ಲ. ಅವರಿಗಾಗಿ ನಾವು ಪ್ರಯತ್ನ ಮಾಡಿದ್ದೆವು ಎಂದೂ ಹೇಳಿದರು.
ಅಂಬರೀಷ್ ಅಂಕಲ್ ನಮ್ಮ ಫ್ಯಾಮಿಲಿ ಸದಸ್ಯರಂತೆ ಅವರ ಮೇಲಿನ ಗೌರವ ನಮ್ಮ ಸಂಬಂಧವನ್ನು ಇಲ್ಲಿ ಗಟ್ಟಿ ಮಾಡಿದೆ. ಅಪ್ಪನ ಮೇಲಿನ ಪ್ರೀತಿಯಿಂದ ದೊಡ್ಡ ದೊಡ್ಡ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಹೇಳುತ್ತಲೇ ಹೋದರು ವಿಷ್ಣುಮಂಚ್.
ಮೋಹನ್ ಬಾಬು ಅವರು ಕರೆದು ಈ ಚಿತ್ರವನ್ನು ಡಬ್ಬಿಂಗ್ ಗೆ ಮುಂಚೆಯೇ ತೋರಿಸಿದರು. ನಿಜಕ್ಕೂ ಅದ್ಭುತ ಅನಿಸಿತು. ಹಾಗಾಗಿ ಕರ್ನಾಟಕದಲ್ಲಿ ವಿತರಣೆ ಮಾಡಲು ಮನಸ್ಸು ಮಾಡಿರುವುದಾಗಿ ವಿವರಿಸಿದರು ರಾಕ್ ಲೈನ್ ವೆಂಕಟೇಶ್.
ಎರಡನೇ ಬಾರಿಗೆ ದೊಡ್ಡ ಮಟ್ಟದಲ್ಲಿ ‘ಮಹಾ ಭಾರತ’ ಧಾರಾವಾಹಿ ನಿರ್ದೇಶನ ಮಾಡಿದ್ದ ಮುಕೇಶ್ ಕುಮಾರ್ ಸಿಂಗ್ ‘ಕಣ್ಣಪ್ಪ’ ನಿರ್ದೇಶನ ಮಾಡಿದ್ದಾರೆ.
ಆಂಜನೇಯ, ಶ್ರೀ ಕೃಷ್ಣದೇವರಾಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಡಾ. ರಾಜ್ ಕುಮಾರ್ ಹುಟ್ಟಿದ ನಾಡಿಗೆ ಪ್ರಣಾಮಗಳು ಎಂದು ಮಾತಿಗಾರಂಭಿಸಿದರು ಚಿತ್ರದ ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್.
ಡಾ. ರಾಜಕುಮಾರ್ ಅವರು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ನಟಿಸಿದ್ದರು. ‘ಕಣ್ಣಪ್ಪ’ ಚಿತ್ರ ಮಾಡಲು ಅದು ದೊಡ್ಡ ಸ್ಫೂರ್ತಿ. ನಾನು ಆ ಚಿತ್ರವನ್ನು ನೋಡಿದ್ದೇನೆ. ಆ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಅವರ ಅಭಿನಯ ಎಂತಹ ಕಲಾವಿದರಿಗೂ ದೊಡ್ಡ ಸವಾಲು. ಅದನ್ನು ಮರುಸೃಷ್ಟಿಸುವುದು ಸಹ ಸವಾಲು. ದೊಡ್ಡ ಕಲಾವಿದರ ಮತ್ತು ತಂತ್ರಜ್ಞರ ಬಳಗದ ಸಹಾಯದಿಂದ ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಸಾಧ್ಯವಾಗಿದೆ ಎಂದರು.
ಶಿವ ಭಕ್ತನ ಕುರಿತಾದ ಒಂದು ಚಿತ್ರ ಮಾಡುವುದರ ಜೊತೆಗೆ ಪೌರಾಣಿಕ ಚಿತ್ರ ಮಾಡುವುದು ಸುಲಭದ ಮಾತಲ್ಲ. ಅದನ್ನು ಸಾಧ್ಯವಾಗಿಸಿದವರು ವಿಷ್ಣು ಮಂಚು ಮತ್ತು ಡಾ. ಮೋಹನ್ ಬಾಬು ಎಂದು ವಿವರಿಸಿದರು.
ನೃತ್ಯ ನಿರ್ದೇಶನ ಮಾಡಿರುವ ಪ್ರಭುದೇವ ಹಾಗೂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶರತ್ ಕುಮಾರ್ ಕನ್ನಡದಲ್ಲಿಯೇ ಮಾತನಾಡಿದ್ದು ವಿಶೇಷವಾಗಿತ್ತು. ಇದು ಭಾರತೀಯರು ಹೆಮ್ಮೆ ಪಡುವ ಅವಿಸ್ಮರಣೀಯ ಚಿತ್ರವಾಗಲಿದೆ ಎಂದರು ಶರತ್ ಕುಮಾರ್.
ಅಂದ ಹಾಗೆ ಚಿತ್ರವು ಏಪ್ರಿಲ್ 25ರಂದು ವಿಶ್ವವ್ಯಾಪಿ ಬಿಡುಗಡೆ ಕಾಣಲಿದೆ. ಏಪ್ರಿಲ್ 24 ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಆಶೀರ್ವಾದ ಕೂಡ ಇದೆ ಎಂಬುದು ವಿಷ್ಣುಮಂಚ್ ಅಭಿಪ್ರಾಯ.