ರೇಟಿಂಗ್ : 3.5/5
ನಿರ್ಮಾಣ : ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ
ನಿರ್ದೇಶನ : ವಿಕ್ಕಿ ವರುಣ್
ಗಮನ ಸೆಳೆವ ಕ್ಲಾಸಿಕ್ ಮಾದರಿ..
ದೇಶ ಕಾಯುವ ಸೈನಿಕನಿಗೆ ಜನಪ್ರಿಯತೆಯ ವ್ಯಸನ ಅಂಟಿದರೆ ಏನಾಗಬಹುದು ಎಂಬುದರ ಗಾಢ ಸೂಕ್ಷ್ಮತೆಯ ನೆಲೆಯಲ್ಲಿ ಹೆಣೆಯಲಾಗಿರುವ ಕಥೆಯಲ್ಲಿ ವ್ಯವಸ್ಥೆಯ ಲೋಪಗಳು ಮತ್ತು ಮಣ್ಣಿನ ಮೂಲಭೂತ ಸೆಲೆ ಎದ್ದು ಕಾಣುತ್ತದೆ.
ಮೂಡ್ಲಪುರ ಗ್ರಾಮದ ಶಂಕರ ಸೈನ್ಯದಲ್ಲಿ ಸೈನಿಕ. ಸೇನಾಪಡೆಯಲ್ಲಿ ಆತನಿಗೆ ಅಡುಗೆ ಕೆಲಸ ನಿಯೋಜಿಸಲ್ಪಟ್ಟಿರುತ್ತದೆ. ಆದರೆ ಆಯುಧ ಹಿಡಿದು ಹೋರಾಡುವ ಕನಸು ಸದಾ ಆತನನ್ನು ಹಿಂಬಾಲಿಸುತ್ತದೆ.
ಒಮ್ಮೆ ಶತ್ರುಗಳು ದಾಳಿ ಮಾಡಿದಾಗ ಅವರನ್ನು ಚಚ್ಚಿ ಪುಡಿ ಮಾಡುವ ಅಪೂರ್ವ ಅವಕಾಶವನ್ನು ಆತ ಸದ್ದುಪಯೋಗ ಪಡಿಸಿಕೊಳ್ಳುತ್ತಾನೆ. ಶತ್ರುಗಳ ಹೊಡೆದುರುಳಿಸಿದ ಬಳಿಕ ಕೇಳಬೇಕೇ ಮಾಧ್ಯಮಗಳ ಕಾರಣ ಆತ ಹೀರೋ ಆಗುತ್ತಾನೆ.
ಮುಂದೆ ಆತನ ಊರಿನಲ್ಲಿ ಕಪ್ಪು ಶಿಲೆಯಿಂದ ನಿರ್ಮಾಣವಾಗುವ ಆತನದೇ ತದ್ರೂಪ್ ಮೂರ್ತಿ ಕಾಲಾಪತ್ಥರ್ ನ ಕಥೆಯ ಮೂಲ ವಸ್ತು.
ರಜೆಯ ಮೇಲೆ ಊರಿಗೆ ಬರುವ ಶಂಕರನಿಗೆ ಅಲ್ಲಿ ಸಿಗುವ ರಾಜಾತಿಥ್ಯ, ಗೌರವ, ಪ್ರಾಮುಖ್ಯತೆ ಎಲ್ಲವೂ ಉಬ್ಬಿ ಹೋಗುವಂತೆ ಮಾಡುತ್ತದೆ. ನಿಧಾನವಾಗಿ ಆತನಲ್ಲಿ ಅಹಂ ಮತ್ತು ಭ್ರಮೆ ಎರಡೂ ಬೆಳೆಯುತ್ತದೆ. ಇದರ ಪರಿಣಾಮ ಏನೆಂಬುದಕ್ಕೆ ಸಿನಿಮಾವನ್ನೇ ನೋಡಬೇಕು.
ಮನುಷ್ಯನೊಳಗಿನ ಅಹಂ ಮತ್ತು ಭ್ರಮೆ ಆತನನ್ನು ಏಕಾಕಿತನಕ್ಕೆ ತಳ್ಳುತ್ತದೆ. ಆತ ಗಟ್ಟಿಗ ಆಗಿರದಿದ್ದರೆ ಅವಸಾನ ಖಂಡಿತಾ. ಇಲ್ಲಿಯ ಶಂಕರ ಮಾನಸಿಕ ತಜ್ಞರ ಬಳಿ ಹೋಗಿ ಬಚಾವಾಗುವುದೇ ವಿಶೇಷ.
ಆರಂಭದಲ್ಲಿ ಉತ್ತರ ಕರ್ನಾಟಕದ ಗ್ರಾಮಗಳನ್ನು ಕ್ಲಾಸಿಕ್ ಆಗಿ ತೋರುವ ಛಾಯಾಗ್ರಹಣ ಮತ್ತು ಅದಕ್ಕೆ ತಕ್ಕಂತೆ ಅನೂಪ್ ಶೀಳಿನ್ ಸಂಗೀತದ ಝಲಕ್ ಮಜಾ ಕೊಡುತ್ತದೆ.
ಆದರೆ ಉತ್ತರಾರ್ಧದಲ್ಲಿ ನೈಜತೆಗೆ ಒತ್ತುಕೊಡುವ ಕಥೆಗೆ ಇನ್ನೊಂದಷ್ಟು ಡ್ರಿಲ್ಲಿಂಗ್ ವಿಷಯಗಳನ್ನು ಬೆಸೆದಿದ್ದರೆ ಅದು ಅತ್ಯುತ್ತಮ ಹಿಡಿತ. ಕೊನೆ ಕೊನೆಯಲ್ಲಿ ಹಿಡಿತ ತಪ್ಪಿದರೂ ಕಥೆಯನ್ನು ಮೇಲೆತ್ತುವುದು ಅಣ್ಣಾವ್ರ (ಡಾ.ರಾಜ್ ಕುಮಾರ್) ಧ್ಯಾನ.
ಎಂಎಲ್ ಎ ಎಂದರೆ ಒಂದು ಗ್ರಾಮಕ್ಕೆ ಸೀಮಿತ ವಾದವರು ಎಂಬ ನಂಬಿಕೆಯಲ್ಲಿ ಕಥೆ ಮಾಡಿದಂತೆ ಮತ್ತು ಕಾಲಾಪತ್ಥರ್ ನ ಮಹಾತ್ಮೆ ಹೇಳಲು ಸಾಧ್ಯವೇ ಆಗಿಲ್ಲದಿರುವುದು ಅಚ್ಚರಿ ಮೂಡಿಸುತ್ತದೆ.
ನಿರ್ದೇಶನದಲ್ಲಿ ಗಮನ ಸೆಳೆಯುವ ವಿಕ್ಕಿ ವರುಣ್ ನಟನೆ ವಿಷಯದಲ್ಲಿ ಬಹಳವೇ ದೂರ ಸಾಗಬೇಕು. ಧನ್ಯಾ ರಾಮ್ ಕುಮಾರ್ ಅವರಿಗೆ ಹೆಚ್ಚಿನ ಅವಕಾಶವೇ ಇಲ್ಲ. ಟಿ.ಎಸ್. ನಾಗಾಭರಣ ಹಾಗೂ ಇತರರ ನಟನೆ ಗಮನಾರ್ಹ.
ಸತ್ಯ ಪ್ರಕಾಶ್ ಕಥೆಯೇ ಚಿತ್ರದ ಮೂಲ ಸೆಲೆ ಎನಿಸುತ್ತದೆ. ಸಂದೀಪ್ ಛಾಯಾಗ್ರಹಣ ಮತ್ತು ಅನೂಪ್ ಶೀಳಿನ್ ಸಂಗೀತ ಕ್ಲಾಸಿಕ್ ನೆಲೆಯಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತದೆ.