ಕಾಲಾಪತ್ಥರ್ ಎಂಬ ಹೆಸರೇ ವಿಶಿಷ್ಟ ಎನ್ನುವುದಾದರೇ.. ಈ ಚಿತ್ರದಲ್ಲಿ ಸಾಕಷ್ಟು ವಿಶೇಷಗಳಿವೆ..
ದೊಡ್ಮನೆ ಹುಡುಗಿ ಡಾ.ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಮುಖ್ಯ ಪಾತ್ರದ ಜೊತೆಗಿದ್ದಾರೆ ಎಂಬುದರಿಂದ ಹಿಡಿದು ಚಿತ್ರದ ಸಂಗೀತದಲ್ಲಿಯೂ ಹೊಸ ಪ್ರಯೋಗ ಮಾಡಲಾಗಿದೆ ಎಂಬುದರವರೆಗೆ..
ಅದರಲ್ಲಿಯೂ ‘ಕೆಂಡ ಸಂಪಿಗೆ’ ‘ಕಾಲೇಜ್ ಕುಮಾರ್’ ಚಿತ್ರಗಳಲ್ಲಿ ನಟನೆಯ ಮೂಲಕ ಗಮನ ಸೆಳೆದಿರುವ ವಿಕ್ಕಿ ವರುಣ್ ಈ ಚಿತ್ರಕ್ಕೆ ನಟ ಕಮ್ ನಿರ್ದೇಶಕ.
ಡಾ.ರಾಜ್ ಕುಮಾರ್ ಅವರ ಪುತ್ರಿ ಪೂರ್ಣಿಮಾ ರಾಮ್ ಕುಮಾರ್ ಚಿತ್ರದ ಆಶಯಗಳನ್ನು ಕೊಂಡಾಡಿದರು. ತಮ್ಮ ಪುತ್ರಿ ಧನ್ಯಾ ಇದರಲ್ಲಿ ಅಭಿನಯಿಸುತ್ತಿರುವುದು ಖುಷಿಯ ಸಂಗತಿ ಎಂದರು.
ಅಲ್ಲದೆ ಚಿತ್ರದ ಒಳಗಿನ ವಿಷಯಗಳು ಅತೀವ ಕುತೂಹಕವನ್ನು ಹುಟ್ಟುಹಾಕಿವೆ. ಹಾಗಾಗಿ ಈ ಚಿತ್ರ ಯಾವಾಗ ಬರುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ ಎಂದರು.
ಇದೇ ವೇಳೆ ಅನೂಪ್ ಸೀಳಿನ್ ಸಂಗೀತದ 2.O ಝಲಕ್ ನ್ನು ಪ್ರದರ್ಶಿಸಲಾಯಿತು. ಅನೂಪ್ ಸೀಳಿನ್ ಅವರೇ ನಟಿಸಿದ್ದ ಕ್ಲಾಸಿಕ್ ಮಾದರಿಯ ದೃಶ್ಯರೂಪವದು..
ಇಲ್ಲಿ ಸಂಗೀತದ ಪ್ರಯೋಗದ ಜೊತೆಗೆ ಪ್ರಚಾರದ ವಿಷಯದಲ್ಲಿಯೂ ಹೊಸತನ ನೀಡುವ ಯತ್ನವೇ ಈ ಹಾಡು ಎಂದರು ಅನೂಪ್ ಸೀಳಿನ್.
ಕಾಲಪತ್ಥರ್ ಎಂದರೆ ರೌಡಿಯ ಹೆಸರಲ್ಲ; ಕರಿ ಕಲ್ಲು ಎಂಬುದಾಗಿರಬಹುದು. ಜೊತೆಗೆ ಕರಿ ಕಲ್ಲಿನ ಬೊಂಬೆಗಳು ಈ ಚಿತ್ರದ ಜೊತೆ ಜೊತೆಗೆ ಇರುತ್ತವೆ ಎಂಬುದನ್ನು ಈ ಪ್ರಮೋಷನಲ್ ಹಾಡಿನಲ್ಲಿ ತೋರಲಾಗಿದೆ ಎಂದರು.
ಈ ಚಿತ್ರದಲ್ಲಿ ನನ್ನದು ಗಂಗಾ ಎಂಬ ಪಾತ್ರ. ಅದು ವಿಶೇಷ ಎಂದು ಹೇಳಲೇಬೇಕಿಲ್ಲ ಎಂದರು ಧನ್ಯಾ ರಾಮ್ ಕುಮಾರ್. ಒಂದು ಹಾಡು ನಮ್ಮ ಮನೆಯಲ್ಲಿ ನಡೆದಿದೆ ಎಂಬುದು ಖುಷಿ. ಮತ್ತು ನಾನು ದೊಡ್ಮನೆ ಹುಡುಗಿ ಎಂಬುದು ಹೆಮ್ಮೆ ಎಂದರು.
ಭುವನ್ ಮೂವೀಸ್ ಹೆಸರಿನಲ್ಲಿ ಸುರೇಶ್ ಹಾಗೂ ನಾಗರಾಜು (ಬಿಲ್ಲಿನಕೋಟೆ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಈ ಚಿತ್ರವನ್ನು ಅರ್ಪಣೆ ಮಾಡುತ್ತಿದ್ದಾರೆ ಎಂಬುದು ಮತ್ತೊಂದು ಹೆಮ್ಮೆಯ ವಿಷಯ ಎಂದು ಹೇಳಿಕೊಂಡಿತು ಚಿತ್ರತಂಡ.
ನಾನು ನಟನಾಗಬೇಕೆಂದು ಚಿತ್ರರಂಗಕ್ಕೆ ಬರಲಿಲ್ಲ ಎಂದರು ನಟ ಕಮ್ ನಿರ್ದೇಶಕ ವಿಕ್ಕಿ ವರುಣ್. ಈ ಚಿತ್ರದಲ್ಲಿ ಶಂಕರ ಎಂಬ ಪಾತ್ರದ ಆಶಯಗಳು ಬಹಳ ದೊಡ್ಡದಾಗಿರುತ್ತವೆ. ಅದು ಚಿತ್ರದಲ್ಲಿ ವ್ಯಕ್ತವಾಗುತ್ತವೆ ಎಂದರು.
ಈ ಚಿತ್ರದ ನಿರ್ಮಾಪಕರು ಮತ್ತು ನಾನು ಎಲ್ಲರೂ ರೈತರ ಕುಟುಂಬದಿಂದಲೇ ಬಂದವರು. ಹಾಗಾಗಿ ರೈತ ವಲಯಕ್ಕೆ ವಿಶೇಷ ಕೊಡುಗೆ ಇರುತ್ತದೆ ಎಂದರು.