ಕದ್ದ ಚಿತ್ರವೇ.. ಇದೇನಿದು ವಿಸ್ಮಯ ಎಂಬ ಪ್ರಶ್ನೆ ಹೆಸರನ್ನು ಕೇಳಿದ ಯಾರನ್ನು ಬೇಕಾದರೂ ಕಾಡಬಹುದು.. ಹೌದು ಇದು ಕದ್ದ ಚಿತ್ರ ಎಂಬ ಉತ್ತರವನ್ನೇ ಕೊಟ್ಟಿತು ಚಿತ್ರತಂಡ.
ಚಿತ್ರದ ಒಳಗೆ ಕದ್ದ ವಿವರಗಳಿವೆ. ಇದು ಕೃತಿ ಚೌರ್ಯ ಕುರಿತಾದ ಕಥೆ ಹಾಗಾಗಿ ಇಂತಹ ಹೆಸರಿಡಲಾಗಿದೆ ಎಂಬ ಉತ್ತರ ಕೊಟ್ಟರು ನಿರ್ದೇಶಕ ಸುಹಾಸ್.
ವಿಜಯ ರಾಘವೇಂದ್ರ ಮುಖ್ಯ ಪಾತ್ರದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬೇರೆ ರೀತಿಯ ನಿರೂಪಣೆ ಅಳವಡಿಸಲು ತಂಡ ಶ್ರಮಿಸಿದೆ. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ವಿಜಯರಾಘವೇಂದ್ರ ಅವರು ಒಬ್ಬ ಬರಹಗಾರರಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳುತ್ತಾ ಹೋದರು ನಿರ್ದೇಶಕರು. ಈ ಹಿಂದೆ ರಂಗ ಪಿ-5 ಎಂಬ ಚಿತ್ರವನ್ನು ನಿರ್ದೇಶನ ಮಾಡಿದ ಅನುಭವ ಬೆನ್ನಿಗಿದೆ. ವೈ ನಾಡುನಲ್ಲಿ ಹೆಚ್ಚು ಅಂದರೆ ಶೇಕಡ 70ರಷ್ಟು ಶೂಟಿಂಗ್ ನಡೆದಿದೆ ಎಂದರು.
ಬಹಳ ವರ್ಷದಿಂದ ಸಿನಿಮಾ ನಂಟಿದೆ ಎಂದು ಹೇಳಿಕೊಂಡರು ನಾಯಕ ನಟಿ ನಮ್ರತಾ. ಸುಹಾಸ್ ಸಹ ಬಹಳ ವರ್ಷಗಳಿಂದ ಪರಿಚಯವಿದ್ದಾರೆ. ಅವರಿಗೆ ಕೆಲಸದಲ್ಲಿ ಹೆಚ್ಚು ಆಸಕ್ತಿ ಇದೆ. ಜೊತೆಗೆ ಶ್ರದ್ಧೆಯೂ ಹೆಚ್ಚಿದೆ. ಹಾಗಾಗಿ ಚಿತ್ರವೂ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದರು.
ಕೃಷ್ಣ ರಾಜ್ ಸಂಗೀತ ನೀಡಿದ್ದಾರೆ. ಬೇಬಿ ಆರಾಧ್ಯ ಮಗಳಾಗಿ ಅಭಿನಯಿಸಿದ್ದಾರೆ. ಕದ್ದಚಿತ್ರ ಎಂದರೆ ಕೃತಿಚೌರ್ಯದ ಕಥೆಯಾಗಿದೆ ಎಂಬ ವಿವರವೂ ಬಂತು.
ಈ ಚಿತ್ರದ ಬಗ್ಗೆ ಮೂರು ವರ್ಷಗಳಿಂದ ಚರ್ಚೆ ನಡೆದಿತ್ತು. ಇದರಲ್ಲಿ ಕುಡಿತ ಮತ್ತು ಸಿಗರೇಟ್ ಮಾಡುವುದಿದೆ. ಇದು ನನ್ನಿಂದ ಸಾಧ್ಯವಿಲ್ಲ ಎಂದು ಸುಮ್ಮನಿದ್ದೆ. ಆಗದಿರುವ ಕೆಲಸವನ್ನು ಎಂದಿಗೂ ಮಾಡಬಾರದು ಎಂಬುದು ನನ್ನ ನಿಲುವಾಗಿತ್ತು ಎಂದರು ನಾಯಕನಟ ವಿಜಯ್ ರಾಘವೇಂದ್ರ. ಆದರೂ ಅಭಿನಯಿಸುವಾಗ ಹಲವು ರೋಚಕ ಸನ್ನಿವೇಶಗಳು ಎದುರಾಗಿದ್ದವು ಎಂಬ ವಿವರಗಳನ್ನು ಮುಂದಿಟ್ಟರು
ಕಟ್ಟಡ ನಿರ್ಮಾಣ ಕಾಯಕದಲ್ಲಿರುವ ಸಂದೀಪ್ ನಿರ್ಮಾಪಕ. ಸಿನಿಮಾ ಆಸಕ್ತಿ ಹೆಚ್ಚು. ಹೊಸಕೋಟೆ ಮೂಲದ ನಾನು ಒಂದಷ್ಟು ವರ್ಷಗಳ ಕಾಲ ಬೆಂಗಳೂರಿನ ಚಿತ್ರಮಂದಿರಗಳಿಗೆ ಲವರ್ ಜೊತೆ ಸುತ್ತುತ್ತಿದ್ದೆ. ಸಿನಿಮಾ ಅಂದರೆ ಅಷ್ಟು ಪ್ರೀತಿ ನನಗೆ. ಹಾಗಾಗಿ ನಿರ್ಮಾಣಕ್ಕಿಳಿದೆ. ಇದಕ್ಕೆ ಆಗ ಲವರ್ ಆಗಿದ್ದ ಮತ್ತು ಈಗ ಪತ್ನಿಯಾಗಿರುವ ನನ್ನಾಕೆಯ ಸಹಕಾರವೂ ಇದೆ ಎಂದು ಹೇಳುತ್ತಾ ಹೋದರು. ಶ್ರೀಕ್ರೇಜಿ ಮೈಂಡ್ ಕ್ಯಾಮೆರಾ ಮತ್ತು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
ಗೌತಮ್ ಮನು ಅದಕ್ಕೆ ಸಾಥ್ ನೀಡಿದ್ದಾರೆ ಎಂಬ ವಿವರಗಳು ಬಂದವು. ಶಿವಮೊಗ್ಗ ರಾಘು ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಪುಟಾಣಿ ಬೇಬಿ ಆರಾಧ್ಯ ಕೂಡ ತನ್ನ ಪಾತ್ರ ಉತ್ತಮವಾಗಿದೆ ಎಂದು ಹೇಳಿಕೊಂಡಳು.
ಸಂಗೀತ ನಿರ್ದೇಶಕ ಕೃಷ್ಣ ರಾಜು ವಯೊಲಿನ್ ವಿಶೇಷತೆಗಳನ್ನು ಹೊಂದಿದ್ದಾರೆ ಎಂಬ ವಿವರಗಳೂ ಬಂದವು.