ಸರಿ ಸುಮಾರು 90ರ ದಶಕದ ಅಂತ್ಯದವರೆಗೂ ಗಾಯನ ಪ್ರಪಂಚದ ಏಕಚಕ್ರಾಧಿಪತ್ಯವನ್ನು ಮೆರೆದ ಮಧುರ ಗಾಯನದ ರಾಣಿ, ಗಾನ ಕೋಗಿಲೆ, ಭಾರತೀಯ ಗಾಯನ ಪ್ರಪಂಚದ ಮೇರು ಪರ್ವತ, ಭಾರತ ರತ್ನ ಲತಾ ಮಂಗೇಶ್ಕರ್ ಇನ್ನು ನೆನಪು ಮಾತ್ರ..
ಸುಮಾರು ಏಳು ದಶಕಗಳ ಕಾಲ ಸುಮಧುರ, ಸುಶ್ರಾವ್ಯ ಕಂಠದ ಮೂಲಕ ಭಾರತೀಯರ ಹೃನ್ಮನಗಳಲ್ಲಿ ನೆಲೆಸಿದ ಭಾರತೀಯ ಕೋಗಿಲೆ (Nightingale of India) (ಫೆ.7-2022) ಗಾಯನ ನಿಲ್ಲಿಸಿತು. ಆ ಮೂಲಕ ಅಸಂಖ್ಯಾತ ಸಂಗೀತ ಪ್ರೇಮಿಗಳನ್ನು ದುಃಖದ ಕಡಲಲ್ಲಿ ಮುಳುಗಿಸಿತು..
ಚಿಕ್ಕ ವಯಸ್ಸಿನಲ್ಲೇ ಸಂಗೀತ ಮತ್ತು ಗಾಯನ ಪ್ರಪಂಚಕ್ಕೆ ಪ್ರವೇಶ. ಬಳಿಕ ಉಳಿದಿದ್ದು ಕಲ್ಪನೆಗೆ ನಿಲುಕದ್ದು.. ಏಕೆಂದರೆ ಅಸಂಖ್ಯಾತ ಹಾಡುಗಳು, ಅಸಂಖ್ಯಾತ ಅತ್ಯುನ್ನತ ಪ್ರಶಸ್ತಿಗಳು, ಇಡೀ ವಿಶ್ವದಲ್ಲಿಯೇ ಅಸಂಖ್ಯಾತ ಅಭಿಮಾನಿಗಳು, ಸಂಗೀತ ಪ್ರೇಮಿಗಳ ನರನಾಡಿಗಳಲ್ಲಿ ನೆಲೆಸಿದ ಗಾನ ದೇವತೆ ಮತ್ತು ಸಂಗೀತ ಪ್ರಪಂಚದ ಮರೆಯಲಾಗದ ದಂತಕಥೆ.
ಪ್ರಮುಖವಾಗಿ ಹಿಂದಿ ಮತ್ತು ಮರಾಠಿ ಸೇರಿದಂತೆ ಲತಾ ಮಂಗೇಶ್ಕರ್ ಹಾಡಿದ್ದು 36 ಭಾಷೆಗಳಲ್ಲಿ ಇದರಲ್ಲಿ ವಿದೇಶಿ ಭಾಷೆಗಳು ಸೇರಿವೆ. ಕನ್ನಡವೂ ಸೇರಿದೆ. ಹಳೆಯ ‘ಸಂಗೊಳ್ಳಿ ರಾಯಣ್ಣ’ ಚಿತ್ರಕ್ಕಾಗಿ 1967ರಲ್ಲಿ ‘ಬೆಳ್ಳನೆ.. ಬೆಳಕಾಯಿತು..’ ಎಂಬ ಗೀತೆ ಹಾಡಿದ್ದು ಇತಿಹಾಸ ಮತ್ತು ಕನ್ನಡಿಗರಿಗದು ಪುಳಕ.
ಇಂದೋರ್ ನ ದೀನಾನಾಥ್ ಮಂಗೇಶ್ಕರ್ ಮತ್ತು ಸೇವಂತಿ ಮಂಗೇಶ್ಕರ್ ಅವರ ಸುಪುತ್ರಿಯಾಗಿ 1929 ರ ಸೆಪ್ಟೆಂಬರ್ 28 ರಂದು ಜನಿಸಿದ ಹೇಮಾ ಮಂಗೇಶ್ಕರ್ ಮುಂದೆ ಲತಾ ಮಂಗೇಶ್ಕರ್ ಆಗಿ ಗಾಯನ ಪ್ರಪಂಚವನ್ನು ಆಳಿದರು ಮಾತ್ರವಲ್ಲ ಅವರು ಏರಿದ ಎತ್ತರ ಕಲ್ಪನೆಯನ್ನು ಮೀರಿದ್ದು.. ಪಡೆದ ಪ್ರಶಸ್ತಿಗಳು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದ್ದು ಕೂಡ ಇತಿಹಾಸವೇ.
2001ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ, 2000ನೇ ಇಸವಿಯಲ್ಲಿ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ, 1999ರಲ್ಲಿ ಪದ್ಮ ವಿಭೂಷಣ, 1969ರಲ್ಲಿ ಪದ್ಮಭೂಷಣ ಅಲ್ಲದೆ ಫಿಲಂಫೇರ್ ಅತ್ಯುನ್ನತ ಪ್ರಶಸ್ತಿ, 2007ರಲ್ಲಿ ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿ ಹೀಗೆ ಲೆಕ್ಕವೇ ಇಲ್ಲದ ಪುರಸ್ಕಾರಗಳು..
ಮತ್ತೊಬ್ಬ ಮೇರು ಗಾಯಕಿ ಆಶಾ ಭೌಸ್ಲೆ ಲತಾಜೀ ಅವರ ಸಹೋದರಿ, ಅಲ್ಲದೆ ಹೃದಯಾಂತ್ ಮಂಗೇಶ್ಕರ್, ಮೀನಾ ಖಾದಿಕರ್ ಒಂದೇ ಬಳ್ಳಿಯ ಹೂಗಳು..
1974ರಲ್ಲಿ ಲಂಡನ್ ನ ರಾಯಲ್ ಅಲ್ ಬರ್ಟ್ ಹಾಲ್ ನಲ್ಲಿ ಹಾಡಿದ ಭಾರತೀಯ ಮೊದಲ ಗಾಯಕಿ ಲತಾ ಮಂಗೇಶ್ಕರ್. ಹಾಡು ಮುಟ್ಟದ ಸೊಪ್ಪಿಲ್ಲ; ಲತಾ ಹಾಡದ ಗಾಯನವಿಲ್ಲ. ಶಾಸ್ತ್ರೀಯ, ಘಜಲ್, ಜಾನಪದ, ಭಜನ್ ಹೀಗೆ ಎಲ್ಲಾ ಪ್ರಾಕಾರಗಳಲ್ಲಿಯೂ ಹಾಡಿದರು.
90ರ ದಶಕದಲ್ಲಿ ‘ಹಮ್ ಆಪ್ ಕೀಯೆ ಕೌನ್’, ‘ಡಿಡಿಎಲ್ ಜೆ’ ಹೀಗೆ ಸಾರ್ವಕಾಲಿಕ ಹಿಟ್ ಆಗಿರುವ ಸಂಗೀತದಲ್ಲಿ ಬೆರೆತಿರುವುದು ಲತಾಜಿ ಅವರ ಸುಶ್ರಾವ್ಯ ಕಂಠ. ‘ಹೇ ಮೇರಿ ವತನ್ ಕೀ ಲೋಗ್..’ ಎಂಬ ಮೈ ನವಿರೇಳಿಸಿರುವ ದೇಶಭಕ್ತಿ ಗೀತೆ ರೋಮಾಂಚನ ಹುಟ್ಟಿಸುವುದು ಸಹ ಲತಾಜಿ ಕಂಠ ಸಿರಿ ಯಿಂದ.
ಲತಾ ಮಂಗೇಶ್ಕರ್ ಭಾರತೀಯ ಚಿತ್ರರಂಗದ ದಂತಕಥೆ ಮಾತ್ರವಲ್ಲ ಅನುಪಮ ಸಾಧನೆಯ ಸಂಗೀತದ ದೇವತೆ ಎಂದರೂ ಅತಿಶಯೋಕ್ತಿ ಅಲ್ಲ..
-ಸ್ನೇಹಪ್ರಿಯ ನಾಗರಾಜ್