ಹೆಸರೇ ಗಮನ ಸೆಳೆಯುವಂತಿದೆ.. ಚಿತ್ರವೂ ಹೊಸದಾಗಿದೆ.. ಕನ್ನಡಕ್ಕಂತೂ ಇದು ಹೊಸ ಬಗೆಯ ಸಿನಿಮಾ..
ಇದು ಚಿತ್ರತಂಡದ ಆಶಯ..
ಬಸ್, ಟ್ರೈನ್, ಮನೆ ಎಲ್ಲೇ ಆಗಲಿ.. ಸಂಕಷ್ಟ ಎದುರಾದರೇ.. ಪಾರಾಗಲು ಅಲ್ಲೊಂದು ಅವಸರದ ದಾರಿ ಇರುತ್ತದೆ..
ಅದೇ ತುರ್ತು ನಿರ್ಗಮನ..!
ಈ ಚಿತ್ರದ ಹೆಸರೂ ಕೂಡ ಅದೇ. ಸಾವು ಎಲ್ಲರಿಗೂ ಬರುತ್ತದೆ; ಆದರೆ ಹೇಳಿ ಬರುವುದಿಲ್ಲ; ಸಾವನ್ನು ಒಂದು ಮೂರು ದಿನ ಮುಂದೂಡಿದಾಗ ಅಲ್ಲಿ ನಡೆಯುವುದೇನು.. ಸಾವನ್ನು ಅಲ್ಪ ಗೆದ್ದವನ ಮನಸ್ಥಿತಿ ಏನು..
ಇವೆಲ್ಲಾ ಕಲ್ಪನಾತೀತ ವಿಷಯಗಳು. ಆದರೆ ಸಿನಿಮಾದಲ್ಲಿ ಅದನ್ನು ಥ್ರಿಲ್ಲಿಂಗ್ ಆಗಿ ನಿರೂಪಿಸಲಾಗಿದೆ ಎಂಬುದು ಚಿತ್ರತಂಡದ ವಿವರಣೆ. ಇಲ್ಲಿ ಲಾಜಿಕ್ ಇಲ್ಲದ ಚಿಂತನೆಯ ಜೊತೆಗೆ ಅಚ್ಚರಿ ಬೆರೆತಿರುತ್ತದೆ..
ಇದೂ ವಿಶೇಷವಾದ ಸಿನಿಮಾ ನನ್ನ 36 ವರ್ಷಗಳ ಸಿನಿಮಾ ಪಯಣದಲ್ಲಿ ಈ ವಿಭಿನ್ನವಾದ ನೆಲೆಯಲ್ಲಿ ನೋಡಿದ ಸಿನಿಮಾ ಎಂದು ಮೆಚ್ಚುಗೆಯ ಮಾತುಗಳನ್ನು ಆಡುತ್ತಾ ಹೋದರು ಹಿರಿಯ ನಟಿ ಸುಧಾರಣಿ.
ನರ್ಸ್ ಪಾತ್ರ ನಿರ್ವಹಿಸಿರುವ ಅವರಿಗೆ ಅದೂ ಹೊಸತು. ಪ್ರಯೋಗಶೀಲ ಮನಸ್ಸುಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕಿದೆ ಎಂದರು.
ಇಲ್ಲಿ ಕ್ಯಾಬ್ ಓಡಿಸಲು ಬಾರದ ರಾಜ್ ಬಿ.ಶೆಟ್ಟಿ ಕ್ಯಾಬ್ ಓಡಿಸಿದ್ದಾರೆ. ಸಂಯುಕ್ತ ಹೆಗಡೆ, ಹಿತಾ ಚಂದ್ರಶೇಖರ್, ಅರುಣಾ ಬಾಲಾಜಿ ಮೊದಲಾದವರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
‘ಗೋದಿ ಬಣ್ಣ ಸಾಧಾರಣ ಮೈಕಟ್ಟು’ನಂತಹ ಚಿತ್ರ ನಿರ್ದೇಶನ ಮಾಡಿದ ಹೇಮಂತ್ ಕುಮಾರ್, ಇಲ್ಲಿಯೂ ಅದೇ ಹೊಸತನ ಕಾಯ್ದುಕೊಂಡ ಭರವಸೆಯಲ್ಲಿ ಇದ್ದಾರೆ. ಚಿತ್ರದ ವಿಷಯ, ನಿರೂಪಣೆ, ಸಂಗೀತ, ಛಾಯಾಗ್ರಹಣ ಎಲ್ಲದರಲ್ಲೂ ಹೊಸ ಮಾದರಿಗಳನ್ನೇ ಅನುಸರಿಸಾಗಿದೆ ಎಂಬ ಉತ್ತರ ಬಂತು ಅವರಿಂದ.
ಇನ್ನು ಸುನೀಲ್ ರಾವ್ ಅವರಿಗೆ ಇದು ಖಂಡಿತಾ ಕಮ್ ಬ್ಯಾಕ್ ಸಿನಿಮಾ. ಹೊಸ ಬಗೆಯಲ್ಲಿ ಕಾಣಿಸಿಕೊಂಡಿರುವೆ. ಮಾಧ್ಯಮಗಳ ಮೂಲಕ ನಮ್ಮ ಟೀಸರ್ ಹೆಚ್ಚು ಜನರನ್ನು ತಲುಪಿದೆ. ನಾವು ಹೊಸದನ್ನು ಹೇಳುವ ಪರಿಯಿಂದಲೇ ಜನರನ್ನು ಗೆಲ್ಲಬೇಕಾಗಿದೆ. ಹಾಗಾಗಿ ಕಮ್ ಬ್ಯಾಕ್ ಎಂಬುದಕ್ಕೂ ಒಂದು ಭರವಸೆ ಇದೆ ಎಂದರು.