ಬಹು ನಿರೀಕ್ಷಿತ ಚಿತ್ರ ‘ತ್ರಿಕೋನ’ ಬಿಡುಗಡೆ ಒಂದು ವಾರ ಮುಂದಕ್ಕೆ ಹೋಗಿದೆ. ಅಂದರೆ ಏಪ್ರಿಲ್ ಒಂದಕ್ಕೆ ಬಿಡುಗಡೆ ಕಾಣಬೇಕಿದ್ದ ಚಿತ್ರವು ಏಪ್ರಿಲ್ 8 ರಂದು ತೆರೆ ಕಾಣುತ್ತಿದೆ..
ರಾಜ್ ಶೇಖರ್ ನಿರ್ಮಾಣದ ಹಾಗೂ ‘143’ ಖ್ಯಾತಿಯ ಚಂದ್ರಕಾಂತ್ ನಿರ್ದೇಶನವಿರುವ ಈ ಚಿತ್ರ ಹಲವು ಕಾರಣಗಳಿಗಾಗಿ ನಿರೀಕ್ಷೆ ಹುಟ್ಟಿಸಿದೆ. ಮುಖ್ಯವಾಗಿ ಇದು ಬದುಕಿನಲ್ಲಿ ದ್ವೇಷ ಅಸೂಯೆಗಳನ್ನು ತೊರೆದು ಶಾಂತಿ ತ್ಯಾಗ ಕಾಪಾಡಿಕೊಳ್ಳಬೇಕೆಂಬ ಸಂದೇಶ ಇರುವ ಚಿತ್ರ. ಸುಚ್ಚೇಂದ್ರ ಪ್ರಸಾದ್ ಈ ಚಿತ್ರದ ಪ್ರಚಾರ ರಾಯಾಭಾರಿ ಆಗಿದ್ದಾರೆ.
ಮಂಗಳವಾರ ಈ ಕುರಿತು ನಿರ್ಮಾಪಕ ರಾಜ್ ಶೇಖರ್, ನಿರ್ದೇಶಕ ಚಂದ್ರಕಾಂತ್ ಹಾಗೂ ಸುಚ್ಚೇಂದ್ರಪ್ರಸಾದ್ ಈ ಕುರಿತು ಮಾಹಿತಿಗಳನ್ನು ನೀಡಿದರು.
ನಾವು ಬಿಡುಗಡೆ ಮುಂದಕ್ಕೆ ಹಾಕುವ ಮೊದಲ ಕಾರಣ ಅಪ್ಪು ಸರ್. ಅವರ ಚಿತ್ರ ‘ಜೇಮ್ಸ್’ ಓಡುವಾಗ ನಾವು ಬರುವುದು ಸೂಕ್ತವೆನಿಸಲಿಲ್ಲ. ಎರಡನೇಯದು ನಾವು ಚಿತ್ರದ ಬಿಡುಗಡೆ ಘೋಷಣೆ ಮಾಡಿದಾಗ ಇಷ್ಟು ಪ್ರಮಾಣದಲ್ಲಿ ಚಿತ್ರಗಳು ಇರಲಿಲ್ಲ.. ಹೇಗೂ ಒಂದು ಒಳ್ಳೆಯ ಕಂಟೆಂಟ್ ಇರುವ ಚಿತ್ರ ಮಾಡುವಾಗ ಬಿಡುಗಡೆ ಸ್ವಲ್ಪ ಮುಂದಕ್ಕೆ ಹಾಕುವುದು ಅನಿವಾರ್ಯವೆನಿಸಿತು ಎಂದರು ನಿರ್ಮಾಪಕ ರಾಜ್ ಶೇಖರ್.
ನಾವು ಬಿಡುಗಡೆ ಮಾಡಿದ ಒಂದು ವಾರಕ್ಕೆ ಕೆಜಿಎಫ್2 ಬಿಡುಗಡೆ ಕಾಣುತ್ತಿದೆ ಎಂಬುದು ನಿಜವೇ.. ಆದರೆ ನಮ್ಮ ಚಿತ್ರ ಪ್ರೇಕ್ಷಕರಿಗೆ ಇಷ್ಟವಾದಲ್ಲಿ ನೋಡುವುದನ್ನು ತಡೆಯುವುದು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಭಯ ಅಳುಕು ನಮಗೆ ಇಲ್ಲ ಎಂದರು ನಿರ್ಮಾಪಕರು.
ಬಹಳ ಸಮಯ ಕಾದು ಒಂದು ಚಿತ್ರ ಬಿಡುಗಡೆ ಕಾಣುತ್ತದೆ ಎಂದಾಗ ಅದರ ನಿರ್ದೇಶಕನಿಗೆ ಆಗುವ ಖುಷಿಯೇ ಬೇರೆ. ನಾನು ಚಿತ್ರದ ಬಿಡುಗಡೆಯನ್ನು ಅತೀವ ಕುತೂಹಲದಿಂದ ಕಾಯುತ್ತಿರುವೆ. ಬಿಡುಗಡೆ ಒಂದು ವಾರ ಮುಂದಕ್ಕೆ ಹೋಗಿರುವುದರಿಂದ ಏನು ತೊಂದರೆಯಾಗದು ಬದಲಿಗೆ ಅನುಕೂಲವಾಗುತ್ತದೆ ಎಂಬ ನಂಬಿಕೆ ನನ್ನದು ಎಂದರು ನಿರ್ದೇಶಕ ಚಂದ್ರಕಾಂತ್.
ಚಿತ್ರದ ಬಿಡುಗಡೆಗೆ ಅದರದೇ ಆದ ಕಾಲ ಕೂಡಿ ಬರಬೇಕಾಗುತ್ತದೆ. ಆಗುವುದೆಲ್ಲಾ ಒಳ್ಳೆಯದಕ್ಕೇ ಆಗಿರುತ್ತದೆ. ಸಿನಿಮಾದ ನಿರ್ದಿಷ್ಟ ಗುರಿ ಅಥವಾ ಅದು ತಲುಪುವ ರೀತಿ ಸರಿಯಾಗಿರುವಂತೆ ನಿರ್ಮಾಪಕರು ನೋಡಿಕೊಂಡಿದ್ದಾರೆ ಎಂದರು ನಟ ಸುಚ್ಚೇಂದ್ರಪ್ರಸಾದ್.