ಜೈ ಭೀಮ್ ಸ್ಫೂರ್ತಿ ಪಡೆದ ಅದೇ ಮಾದರಿಯ ಹೋರಾಟದ ಕಥೆಗಳು ಈಗ ಕನ್ನಡದಲ್ಲಿಯೂ ತಯಾರಾಗುತ್ತಿದ್ದು, ಪಾಲಾರ್ ಚಿತ್ರದ ಬಳಿಕ ಅಡವಿ ಎಂಬ ಚಿತ್ರ ಈಗ ಬಿಡುಗಡೆಗೆ ಸಜ್ಜುಗೊಂಡಿದೆ.
ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ನ ಅಡಿಯಲ್ಲಿ ಉತ್ಸಾಹಿ ತರುಣ ಟೈಗರ್ ನಾಗ್ ಕಥೆ ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿರುವ ‘ಅಡವಿ’ ಇದೇ 19 ರಂದು ತೆರೆ ಕಾಣುತ್ತಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗೆ ಮನಸೋತಿರುವ ಟೈಗರ್ ನಾಗ್ ಅಡವಿಯಲ್ಲಿ ವಾಸ ಮಾಡುವ ಆದಿವಾಸಿ ಜನರ ಬದುಕು ಭವಣೆ ಸಂಘರ್ಷ ಹೋರಾಟದ ಅಂಶಗಳನ್ನು ಚಿತ್ರವಾಗಿಸಿದ್ದಾರೆ.
ಈಚೆಗೆ ಚಿತ್ರದ ಪ್ರಗತಿಪರ ಸಂಘಟನೆಗಳು ಹಾಗೂ ಆತ್ಮೀಯರಿಗಾಗಿ ಚಿತ್ರದ ಪ್ರಿಮಿಯರ್ ಶೋ ಏರ್ಪಡಿಸಿ ಬಳಿಕ ಮಾಧ್ಯಮಗಳ ಜೊತೆ ಮಾತಿಗೆ ಕುಳಿತಿತ್ತು ಚಿತ್ರತಂಡ.
ಅಂಬೇಡ್ಕರ್ ಅವರ ಆಶಯಗಳ ಜೊತೆ ಹೋರಾಟ ಮಾಡಬೇಕು ಎಂಬುದು ನನ್ನ ಕನಸು. ಅದು ಈ ಚಿತ್ರದ ಮೂಲಕ ವ್ಯಕ್ತವಾಗಲಿದೆ ಎಂದರು ಟೈಗರ್ ನಾಗ್.
ಸೆನ್ಸಾರ್ ಅಧಿಕಾರಿ ಅಂಬೇಡ್ಕರ್ ಅವರ ವೈಭವೀಕರಣ ಎಂದು ಕೇವಲವಾಗಿ ಮಾತನಾಡಿದರು ಮಾತ್ರವಲ್ಲ; ಆ ದೃಶ್ಯದ ಅನುಮತಿಗೆ ಲಂಚ ಕೇಳಿದರು. ನಾವು ಸಂವಿಧಾನದ ಶಕ್ತಿಯನ್ನೇ ಬಳಸಿ ಸಿಬಿಐಗೆ ದೂರು ನೀಡಿದಾಗ ಅವರು ಸಿಕ್ಕಿಹಾಕಿಕೊಂಡು ಜೈಲಿಗೆ ಹೋದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು ನಿರ್ದೇಶಕರು.
ಅಡವಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಆದಿವಾಸಿ ಜೀವನವನ್ನು ಅಭಿವ್ಯಕ್ತಿಸಲಾಗಿದೆ. ಅಮಾಯಕ ಹುಡುಗನೊಬ್ಬ ಹಕ್ಕುಗಳಿಗೆ ಹೋರಾಡುವ ಕಥೆ ಇದೆ
ಮೋಹನ್ ಕುಮಾರ್ ಆ ಪಾತ್ರವನ್ನು ನಿಭಾಯಿಸಿರುವುದಾಗಿ ವಿವರ ನೀಡಿದರು.
ಮೋಹನ್ ಕುಮಾರ್ ಜೊತೆ ಶಿಲ್ಪಾ,
ರುಶಿಕಾ ಮೊದಲಾದವರು ನಟಿಸಿದ್ದಾರೆ. ಮಂಜು ಮಾದೇವ್ ಸಂಗೀತವಿದೆ ಅವರ ಜೊತೆ ರೀರೆಕಾರ್ಡಿಂಗ್ ನಲ್ಲಿ ಕೌಶಿಕ್ ಕೆಲಸ ಮಾಡಿದ್ದಾರೆ. ಸಂತೋಷ್ ದೇವ್ ಉತ್ತಮವಾಗಿ ಹಾಡಿದ್ದಾರೆ ಎಂಬ ಮಾಹಿತಿಗಳು ಬಂದವು.
ಹಿರಿಯ ನಿರ್ದೇಶಕ ನಾಗೇಂದ್ರ ಮಾಗಡಿ, ವಿಲನ್ ಪಾತ್ರಧಾರಿ ಅರ್ಜುನ್ ಪಾಳೇಗಾರ್,
ಚಂದ್ರು ಓಬಯ್ಯ, ಪಾಲಾರ್ ನಿರ್ದೇಶಕ ಜೀವ ನವೀನ್ ಮೊದಲಾದವರು ಚಿತ್ರತಂಡವನ್ನು ಹಾರೈಸಲು ಬಂದಿದ್ದರು.
ಇತ್ತೀಚೆಗೆ ವಿ.ಮನೋಹರ್ ಅವರ ಸಾಹಿತ್ಯದ 2500ನೇ ಗೀತೆಯನ್ನು ಇತ್ತೀಚೆಗೆ ಪಾ.ರಂಜಿತ್ ಬಿಡುಗಡೆ ಮಾಡಿದ್ದರು.
ಐತಿಹಾಸಿಕ ಸಿದ್ದರಬೆಟ್ಟ, ಸಂಜೀವಿನಿ ಕ್ಷೇತ್ರ, ಸೂರ್ಯ ಗವಿ, ತಿಮ್ಮಲಾಪುರ ಅಭಯಾರಣ್ಯ, ಚಿಕ್ಕಮಗಳೂರು, ಸಕಲೇಶಪುರ, ತುಮಕೂರು ಮತ್ತು ಕೊರಟಗೆರೆ ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ.
ವಿಪಿನ್ ವಿ ರಾಜ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಕೆ ಮಂಜು ಕೋಟೆಕೆರೆ ಹಾಗೂ ಟೈಗರ್ ನಾಗ್ ಸಂಭಾಷಣೆ, ಕೆ.ಮಂಜು ಕೋಟೆಕೆರೆ, ನಿರ್ಮಾಣ ನಿರ್ವಹಣೆ, ವಿಜಯಕುಮಾರ್ ಎವಿ ಸಹ ನಿರ್ದೇಶನ, ಬಾಬು ಖಾನ್ ಕಲಾ ನಿರ್ದೇಶನ ಚಿತ್ರಕ್ಕಿದೆ.
ರಾಮಾನಾಯಕ್, ಉಗ್ರಂ ದೇವು, ರವಿಕುಮಾರ್ ಸನ, ಅನಂತರಾಜು, ವಕೀಲ ಜಗದೀಶ್ ಮಹಾದೇವ್, ಹ.ರ.ಮಹೇಶ್, ವಾಲೆ ಚಂದ್ರಣ್ಣ, ಮಂಜೀವ, ವೃಶ್ಚಿಕ ಶಿಲ್ಪಾ, ಟೈಗರ್ ನಾಗ್, ಆನಂದ್, ಶಿವಾನಂದ್ , ನವೀನ್, ಅರುಣ್, ಸಿದ್ದರಾಜು, ಕೆ.ಆರ್. ಓಬಳರಾಜು, ಕುಣಿಗಲ್ ರಮೇಶ್, ಮಂಜುಳಾ ರಾಜಕುಮಾರ್, ನಾಗಮಣಿ, ಬೇಬಿ ಸಿಂಚನಾ ತಾರಾಗಣದಲ್ಲಿದ್ದಾರೆ.