ರಾಜ್ಯದಲ್ಲಿ ಮಾದಕ ವಸ್ತು ಪೂರೈಕೆ ಹಾಗೂ ಮಾರಾಟ ಜಾಲ ನಿಯಂತ್ರಣಕ್ಕೆ ಸರ್ಕಾರ ಕಾರ್ಯಪಡೆ ರಚಿಸಿರುವುದಕ್ಕೆ ‘ಭೀಮ’ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.
ಮಾದಕ ವ್ಯಸನ ಚಟಕ್ಕೆ ಯುವ ಸಮೂಹ ಯಾವ ರೀತಿ ಬಲಿಯಾಗುತ್ತಿದೆ ಮತ್ತು ಅದರ ಜಾಲ ಮತ್ತು ನೆಲೆಯ ಬಗ್ಗೆ ದುನಿಯಾ ವಿಜಯ್ ಅವರು ನಟಿಸಿ, ನಿರ್ದೇಶಿಸಿದ್ದ ಚಿತ್ರ ‘ಭೀಮ’ ಚಿತ್ರ ಬೆಳಕು ಚೆಲ್ಲಿತ್ತು.
ಅಲ್ಲದೆ ವಿಜಯ ಕುಮಾರ್ (ದುನಿಯಾ ವಿಜಯ್) ಅವರು ಡ್ರಗ್ಸ್ ಮಾಫಿಯಾ ಮತ್ತು ಅದರ ವಿಸ್ತಾರ ಜಾಲ ಹಾಗೂ ಜನರು ಬಳಸುವ ಔಷಧಗಳಲ್ಲಿ ಅದರ ಬಳಕೆ ಮುಂತಾದ ವಿಷಯಗಳ ಬಗ್ಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಬೆಳಕು ಚೆಲ್ಲಿದ್ದರು.
ಮಾದಕ ವಸ್ತುಗಳ ಜಾಲದ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಈಗ ಕ್ರಮ ಕೈಗೊಂಡಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಕ ವಸ್ತು, ಅದರ ಜಾಲ ಹಾಗೂ ನಿಯಂತ್ರಣದ ಬಗ್ಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾದಕ ವಸ್ತು ನಿಯಂತ್ರಣದ ಬಗ್ಗೆ ಚರ್ಚೆ ನಡೆದ ಪರಿಣಾಮ ಮಾದಕ ವಸ್ತು ಜಾಲ ನಿಯಂತ್ರಣಕ್ಕೆ ಕಾರ್ಯಪಡೆ ಅಸ್ತಿತ್ವಗೊಂಡಿದೆ.
ಮಾದಕ ವಸ್ತು ಜಾಲ ಮತ್ತು ಬಳಕೆಯ ನಿಯಂತ್ರಣಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ, ಮಧು ಬಂಗಾರಪ್ಪ ಹಾಗೂ ಎಂ.ಸಿ.ಸುಧಾಕರ್ ಕಾರ್ಯಪಡೆಯ ಸದಸ್ಯರನ್ನಾಗಿ ನೇಮಿಸಲಾಗಿದೆ.
ಮಾದಕ ದ್ರವ್ಯ ಹಾವಳಿ ನಿಯಂತ್ರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಖ್ಯಾಂಶಗಳು
* ಸರ್ಕಾರವು ಮಾದಕ ವಸ್ತುಗಳ ಹಾವಳಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇದರ ವಿರುದ್ಧದ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತಂದು ಕಾನೂನು ಬಲ ಪಡಿಸುವ ಕುರಿತು ಪರಿಶೀಲಿಸುವಂತೆ ಸೂಚಿಸಲಾಗಿದೆ.
* ಮಾದಕ ವಸ್ತುಗಳ ಮಾರಾಟ, ಸರಬರಾಜು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ
ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿರುವ ಸೂಕ್ಷ್ಮ ಪೊಲೀಸ್ ಠಾಣಾ ವ್ಯಾಪ್ತಿಗಳನ್ನು ಗುರುತಿಸಿ, ಅಂತಹ ಕಡೆ ಮಾದಕ ವಸ್ತುಗಳ ನಿಯಂಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಆಯಾ ಠಾಣೆಯ ಇನ್ಸ್ಪೆಕ್ಟರ್ಗಳನ್ನೇ ಹೊಣೆಗಾರರನ್ನಾಗಿ ಮಾಡುವ ಎಚ್ಚರಿಕೆ ನೀಡಲಾಗಿದೆ.
* ಔಷಧಿ ಮಳಿಗೆಗಳಲ್ಲಿ ಅನಧಿಕೃತವಾಗಿ ಸಿಂಥೆಟಿಕ್ ಡ್ರಗ್ಸ್, ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲು ಸೂಚಿಸಲಾಗಿದೆ.
ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದವರ ಪರವಾನಗಿಯನ್ನು ರದ್ದುಪಡಿಸಲು ಸಹ ಸೂಚಿಸಲಾಗಿದೆ. ಹಾಗೆಯೇ ಔಷಧಿ ಮಳಿಗೆಗಳ ಮೇಲೆ ನಿರಂತರ ನಿಗಾ ಇರಿಸಿ, ಆಗಿಂದಾಗ್ಗೆ ಪರಿಶೀಲನೆ ನಡೆಸುವಂತೆ ಡ್ರಗ್ಸ್ ಕಂಟ್ರೋಲ್ ಇಲಾಖೆಗೆ ಸೂಚನೆ ನೀಡಲಾಗಿದೆ.
* ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಹಾಗೂ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದೂ ಸೂಚಿಸಲಾಗಿದೆ.