* ಬೆಂಗಳೂರಿನಲ್ಲಿ ವಿಶಾಲ್ ಹೇಳಿದ್ದು *
ಮಾನವೀಯ ಅನುಕಂಪ ಹೊಂದಿರುವ ವಿರಳ ಸ್ಟಾರ್ ಗಳ ಸಾಲಿಗೆ ಸೇರುವ ನಟ ವಿಶಾಲ್ ಅವರ ಆರೋಗ್ಯ ಸ್ಥಿತಿಯನ್ನು ಕಂಡು ಇಡೀ ಭಾರತೀಯ ಚಿತ್ರರಂಗ ಬೆಚ್ಚಿ ಬಿದ್ದಿದೆ.
ವಿಶಾಲ್ ಅವರ ಈ ಸ್ಥಿತಿಗೆ ಅವರ ಸಾಹಸ ಪ್ರವೃತ್ತಿಯೇ ಕಾರಣ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಗೊತ್ತು. ಸಿನಿಮಾ ರಂಗದಲ್ಲಿ ಅವರು ಅಪ್ರತಿಮ ಸಾಹಸಿ ಎಂದೇ ಗುರುತಿಸಿಕೊಂಡಿದ್ದಾರೆ.
ವಿಶಾಲ್ ಅವರ ಸದ್ಯದ ಸ್ಥಿತಿ ಕಂಡು ಬೆಚ್ಚಿ ಬೀಳುವಂತಾಗಿದೆ. ಅಷ್ಟು ಗಟ್ಟಿತನದ ನಟನಿಗೆ ಏನಾಯ್ತು ಎಂಬುದು ಪ್ರಶ್ನೆಯಾಗಿದೆ.
ಆದರೆ ತಮ್ಮ ‘ಲಾಠಿ’ ಚಿತ್ರದ ಪ್ರಚಾರದ ಸಲುವಾಗಿ ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದ ಅವರು, ನನಗೆ ಮೈ ಪೂರಾ ಗಾಯವಾಗಿದೆ. ಚಿಕಿತ್ಸೆ ಪಡೆಯುತ್ತಲೇ ಇದ್ದೇನೆ ಎಂದು ಹೇಳಿದ್ದರು.
ಇಷ್ಟೊಂದು ರಿಸ್ಕ್ ಎದುರು ಹಾಕಿ ಕೊಳ್ಳುವುದು ಸರಿಯೇ ಎಂಬ ಪ್ರಶ್ನೆಗೆ ರಿಸ್ಕ್ ಇಲ್ಲದೆ ಬದುಕಿನಲ್ಲಿ ಏನೂ ಸಾಧ್ಯವಾಗುವುದಿಲ್ಲ; ಆದರೆ ನಾನು ಸ್ವಲ್ಪ ಹೆಚ್ಚಿನ ತೊಂದರೆಗೆ ಒಡ್ಡಿಕೊಂಡಿರುವೆ ಎಂದು ಹೇಳಿದ್ದರು.
‘ಲಾಠಿ ಚಾರ್ಜ್’ ಚಿತ್ರದ ನೈಜ ಸಾಹಸಗಳ ಬಗ್ಗೆ ಮಾತನಾಡುತ್ತಾ ಆಗ ಉಂಟಾದ ಗಾಯಗಳ ಬಗ್ಗೆ ಹೇಳಿದ್ದರು ವಿಶಾಲ್. ಆದರೆ ಅದನ್ನು ಮೀರಿ ‘ಅವನ್ ಇವನ್’ ಚಿತ್ರಕ್ಕಾಗಿ ಕಣ್ಣುಗಳ ಆಪರೇಷನ್ ಮಾಡಿಸಿಕೊಂಡಿದ್ದ ವಿಶಾಲ್ ಈಗ ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂಬುದು ಮೂಲಗಳ ಮಾಹಿತಿ.
ತನ್ನ ದೇಹದ ಮೇಲೆಯೇ ಪ್ರಯೋಗ ಮಾಡುತ್ತಾ ನಟನೆಗೆ ಒಡ್ಡಿಕೊಳ್ಳುವುದು ಸಾಮಾನ್ಯರಿಂದ ಸಾಧ್ಯವೇ ಆಗದು. ವಿಶಾಲ್ ಒಂದು ನೆಲೆಯಲ್ಲಿ ದೈವಿಕ ಅಂಶ ಪಡೆದವರು. ಅವರಿಗೆ ಈ ರೀತಿ ಆಗಿರುವುದು ನೋಡಲಾಗುತ್ತಿಲ್ಲ ಎಂದು ಆಪ್ತರು ಹೇಳುತ್ತಿದ್ದಾರೆ.
ಆದರೆ ವಿಶಾಲ ಹೃದಯವಂತ ವಿಶಾಲ್ ಖಂಡಿತಾ ಬೇಗನೆ ಗುಣಮುಖರಾಗುತ್ತಾರೆ ಮತ್ತು ಮೊದಲಿನಂತೆ ಆಗುತ್ತಾರೆ ಎಂಬುದು ಅವರ ಆಪ್ತರು ಮತ್ತು ಅಭಿಮಾನಿಗಳ ನಂಬಿಕೆ.
ವಿಶಾಲ್ ಅವರ ತಂದೆ ಕನ್ನಡಿಗ, ಅವರಿಗೆ ಕರ್ನಾಟಕದ ಮೇಲೆ ಪ್ರೀತಿ ಹೆಚ್ಚು. ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಐದು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅವಕಾಶ ಪಡೆದಿದ್ದಾರೆ.
ಮೈಸೂರಿನಲ್ಲಿ ಪುನೀತ್ ರಾಜ್ ಕುಮಾರ್ ಪೋಷಣೆಯಲ್ಲಿದ್ದ ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯುವ ಬಗ್ಗೆ ಶಿವರಾಜ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದ ವಿಶಾಲ್, ತಾವೊಬ್ಬ ಅಸಾಮಾನ್ಯ ಮಾನವೀಯ ಅನುಕಂಪದ ವ್ಯಕ್ತಿ ಎಂಬುದನ್ನು ಸಾಬೀತು ಪಡಿಸಿದ್ದು ಇಲ್ಲಿ ಉಲ್ಲೇಖಾರ್ಹ.