ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಈ ಚಿತ್ರ ಬಹಳವೇ ವಿಶೇಷ. ಏಕೆಂದರೆ ಇದು ಟೈಮ್ ಲೂಪ್ ಕಥಾವಸ್ತು ಹೊಂದಿದೆ. ಸಮಯದ ಜೊತೆ ಹೋರಾಡುವ ಯುವಕನ ಕಥೆ ಇದೆ..
ಅದೇ ಗಣ..!
ಅಂದ ಹಾಗೆ ಮಂಗಳವಾರ (ಜುಲೈ 4) ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಗಣ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಅವರಿಗೆ ಶುಭ ಕೋರಿತು.
ಇದು ಮಗನ ಹುಟ್ಟುಹಬ್ಬದ ಕಾರ್ಯಕ್ರಮವಾದ್ದರಿಂದ ತಂದೆ ಡೈನಾಮಿಕ್ ಸ್ಟಾರ್ ದೇವರಾಜ್, ತಾಯಿ ಚಂದ್ರಲೇಖ, ಪ್ರಜ್ವಲ್ ಪತ್ನಿ ರಾಗಿಣಿ, ಸಹೋದರ ಪ್ರಣಮ್ ಹೀಗೆ ಇಡೀ ಕುಟುಂಬದ ಸದಸ್ಯರು ಹಾಜರಿದ್ದರು.
ನಿರ್ದೇಶಕ ಹರಿಪ್ರಸಾದ್ ಜಕ್ಕ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ನಿರ್ಮಾಪಕ ಪಾರ್ಥು ಅವರು ಚಿತ್ರದ ವಿವರಗಳನ್ನು ನೀಡಿದರು. ಇದು ವಿಶೇಷ ಕಥಾವಸ್ತು ಹೊಂದಿರುವ ಚಿತ್ರ. ಸುಮಾರು 80 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕನ್ನಡದಲ್ಲಿ ನಿರ್ಮಾಣದ ಮೊದಲ ಪ್ರಯತ್ನ ಇದು ಎಂದು ಹೇಳುತ್ತಾ ಹೋದರು.
ಚಿತ್ರದಲ್ಲಿ ಪ್ರಜ್ವಲ್, ವೇದಿಕಾ, ಕೃಷಿ ತಾಪಂಡ, ವಿಶಾಲ್ ಹೆಗಡೆ ಹೀಗೆ ಉತ್ತಮ ಕಲಾವಿದರ ಬಳಗವಿದೆ. ತಂತ್ರಜ್ಞರ ಬಳಗವೂ ಅತ್ಯುತ್ತಮವಾಗಿದೆ ಎಂದರು.
ಇದು ಬೇರೆ ರೀತಿಯ ಕಥಾವಸ್ತು ಇರುವ ಚಿತ್ರವಾಗಿದ್ದು, ಇಲ್ಲಿ ನಿರ್ಮಾಪಕರು, ನಿರ್ದೇಶಕರು ಮತ್ತು ಚಿತ್ರತಂಡ ಅಪ್ಯಾಯಮಾನವಾಗಿ ನಡೆದುಕೊಂಡಿದೆ ಎಂದರು ಪ್ರಜ್ವಲ್ ದೇವರಾಜ್.
ಹುಟ್ಟುಹಬ್ಬದ ಒಂದು ದಿನ ಮೊದಲೇ ಮಾಡಿರುವ ಈ ಏರ್ಪಾಡು ಅತ್ಯಂತ ಖುಷಿ ತಂದಿದೆ ಎಂದರು.
ವೇದಿಕಾ, ವಿಶಾಲ್ ಹೆಗಡೆ, ಶಿವರಾಜ್ ಕೆ.ಆರ್.ಪೇಟೆ, ಕೃಷಿ ತಾಪಂಡ, ಸಂಕಲನಕಾರ ಹರೀಶ್ ಕೊಮ್ಮೆ, ಕಲಾ ನಿರ್ದೇಶಕ ಸತೀಶ್ ಮತ್ತು ಸಹ ನಿರ್ದೇಶಕ ರಾಜ್ ಗೋಪಿ ಶೂಟಿಂಗ್ ಸಂದರ್ಭದ ಕ್ಷಣಗಳನ್ನು ವರ್ಣಿಸಿದರು.
ಅದರಲ್ಲಿ ವೇದಿಕಾ ಹಾಗೂ ವಿಶಾಲ್ ಹೆಗಡೆ ಇದು ಪ್ರಜ್ವಲ್ ಅವರ ಜೊತೆಗೆ ನಾವು ನಟಿಸುತ್ತಿರುವ ಪ್ರಥಮ ಚಿತ್ರವಾಗಿದ್ದು, ನಮ್ಮ ಪಾತ್ರವೂ ಖುಷಿ ತಂದು ಕೊಟ್ಟಿದೆ ಎಂದರು.
ಸಂಗೀತ ನಿರ್ದೇಶಕ ಅನೂಪ್ ಶೀಳಿನ್ ಹಾಗೂ ಪ್ರಜ್ವಲ್ ಅವರ ಬಾಲ್ಯದ ಪಾತ್ರ ಮಾಡಿರುವ ಮಾಸ್ಟರ್ ರಘುನಂದನ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜ್ವಲ್ ಅವರ ತಾಯಿ ಚಂದ್ರಲೇಖ ಟೀಸರ್ ಬಿಡುಗಡೆ ಮಾಡಿ ಇದು ಮಗನ ಹುಟ್ಟುಹಬ್ಬಕ್ಕೆ ಸಿಕ್ಕ ಅಪೂರ್ವ ಅವಕಾಶ ಎಂದು ವರ್ಣಿಸಿದರು. ದೇವರಾಜ್ ಹಳೆಯ ದಿನಗಳನ್ನು ಮೆಲುಕು ಹಾಕಿದರು.