ಅಕ್ಷಿತ್ ಶಶಿಕುಮಾರ್ ಮುಖ್ಯ ಪಾತ್ರದಲ್ಲಿರುವ ‘ಓ ಮೈ ಲವ್’ ಬಿಡುಗಡೆಗೆ ಸಜ್ಜುಗೊಂಡಿದ್ದು, ಮುಂದಿನ ವಾರ ಅಂದರೆ ಜುಲೈ 15 ರಂದು ಚಿತ್ರಮಂದಿರಗಳಲ್ಲಿ ಸಿನಿ ರಸಿಕರನ್ನು ರಂಜಿಸಲಿದೆ.
ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಗೆ ಇದು ಎರಡನೇ ಚಿತ್ರ ವಾದರೂ ಅದ್ದೂರಿಯ ನಿರ್ಮಾಣ ಮತ್ತು ಪ್ರಚಾರದ ಜೊತೆಗೆ ಬರುತ್ತಿರುವ ಚಿತ್ರ ಇದೇ ಆಗಿದೆ. ಹಾಗಾಗಿ ಇದು ನನ್ನ ಮೊದಲ ಚಿತ್ರ ಎಂದು ಹೇಳಿಕೊಂಡರು ಅಕ್ಷಿತ್.
ಇದು ಮೊದಲ ಚಿತ್ರ. ಈ ಚಿತ್ರದಲ್ಲಿಯೇ ತಂದೆ ನೆರಳಿನಿಂದ ಹೊರ ಬಂದೆ. ಇಲ್ಲಿ ಶಶಿಕುಮಾರ್ ಪುತ್ರ ಎಂಬುದಕ್ಕಿಂತ ಅಕ್ಷಿತ್ ಒಳ್ಳೆ ಕಲಾವಿದ ಎಂದು ಹೇಳುತ್ತಿದ್ದಾರೆ. ಇದು ನಿಜಕ್ಕೂ ಖುಷಿ ಕೊಟ್ಟಿದೆ. ಹಿರಿಯ ನಟ ಎಸ್.ನಾರಾಯಣ್ ಅವರಿಂದ ಬಹಳವಾಗಿ ಕಲಿತ ಹೆಮ್ಮೆ ನನ್ನದು ಎಂದರು ಅಕ್ಷಿತ್.
ನನ್ನ ತಂದೆ ಹಾಡುಗಳನ್ನು ಮತ್ತು ಟ್ರೈಲರ್ ನೋಡಿ ಗುಡ್ ಲಕ್ ಎಂದರು.. ಅದೇ ನನಗೆ ಆಶೀರ್ವಾದ. ಈ ಚಿತ್ರದ ಕುಂಬಳಕಾಯಿ ಒಡೆದಾಗ ನಿರ್ಮಾಪಕ ರಾಮಾಂಜಿನಿ, ನಿರ್ದೇಶಕ ಸ್ಮೈಲ್ ಶ್ರೀನು ಎಲ್ಲರೂ ಭಾವುಕರಾಗಿರುವುದನ್ನು ನೋಡಿದೆ. ಇಂತಹ ತಂಡದ ಜೊತೆಗೆ ಕೆಲಸ ಮಾಡಿದ್ದೇ ಒಂದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳುತ್ತಾ ಹೋದರು.
ನಾನು ಕಷ್ಟದಿಂದ ಮೇಲೆ ಬಂದವನು; ನಮ್ಮ ಬಳ್ಳಾರಿ ಜಿಲ್ಲೆಯ ಜನರಿಗೆ ಇದು ಗೊತ್ತು. ಈ ಚಿತ್ರ ಗೆಲ್ಲುವ ಭರವಸೆ ಕೊಟ್ಟಿದೆ. ಏಕೆಂದರೆ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಜನಮನ ಗೆದ್ದಿವೆ ಎಂದರು ನಿರ್ಮಾಪಕ ಜಿ.ರಾಮಾಂಜಿನಿ.
ನನ್ನ ಎಲ್ಲಾ ಪ್ರಯತ್ನ ಗಳಿಗೂ ನಿರ್ಮಾಪಕರು ಸ್ಪಂದಿಸಿದ್ದರಿಂದ ಒಂದು ಒಳ್ಳೆ ಸಿನಿಮಾ ಮಾಡುವುದು ಸಾಧವಾಯಿತು. ಇದು ಜನರಲ್ಲಿ ಕುತೂಹಲ ತುಂಬಿದೆ ಎಂಬುದರಲ್ಲೇ ನಮ್ಮ ಗೆಲುವಿದೆ ಎಂದರು ನಿರ್ದೇಶಕ ಸ್ಮೈಲ್ ಶ್ರೀನು.
ಹಿರಿಯ ನಿರ್ದೇಶಕ ಎಸ್.ನಾರಾಯಣ್ ತಂದೆ ಪಾತ್ರದಲ್ಲಿ ಮಿಂಚಿದ್ದಾರೆ. ಅವರು ತಮ್ಮ ವಿಸ್ತಾರ ಅನುಭವಗಳನ್ನು ಹೇಳಿಕೊಂಡರು. ಈ ಚಿತ್ರದ ಪ್ರಯತ್ನ ಮತ್ತು ಆಶಯಗಳು ಅತ್ಯುತ್ತಮವಾಗಿವೆ ಎಂದರು.
ತಾಯಿ ಪಾತ್ರ ನಿರ್ವಹಿಸಿರುವ ಸಂಗೀತ ಅನಿಲ್ ಕೂಡ ಚಿತ್ರತಂಡವನ್ನು ಹೊಗಳಿದರು. ನನ್ನನ್ನು ಚಿತ್ರರಂಗಕ್ಕೆ ಕರೆ ತಂದವರು ಎಸ್.ನಾರಾಯಣ್. ಇಲ್ಲಿ ಅವರ ಜೊತೆಗೆ ನಟಿಸಿರುವುದು ಖುಷಿ ಕೊಟ್ಟಿದೆ ಎಂದರು.
ನಟಿ ಕೀರ್ತಿ ಕಲ್ಕೆರೆ, ನಟ ಪೃಥ್ವಿ ಹಾಗೂ ಇತರರು ಚಿತ್ರತಂಡದ ಜೊತೆಗಿನ ಅನುಭವಗಳನ್ನು ಹೇಳಿಕೊಂಡರು.