ಕೊಂಚ ತಡವಾದರೂ ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂಬ ಭರವಸೆಯ ಜೊತೆಗೆ ತೇಲಾಡಿತು ಚಿತ್ರತಂಡ..
ಅದು ಗೌಳಿ..!
ಶ್ರೀನಗರ ಕಿಟ್ಟಿ ಮುಖ್ಯ ಪಾತ್ರದಲ್ಲಿರುವ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಇಡೀ ಚಿತ್ರತಂಡ ಖುಷಿ ಹಂಚಿಕೊಂಡಿತು.
ಅಲ್ಲಿ ಕೇಂದ್ರ ಬಿಂದುವಾಗಿದ್ದು ಶ್ರೀನಗರ ಕಿಟ್ಟಿ ಮತ್ತು ಗೆಳೆಯ ಶರಣ್. ಚಿತ್ರತಂಡಕ್ಕೆ ಶುಭ ಹಾರೈಸಲು ಬಂದು ಚಿತ್ರತಂಡದ ಜೊತೆ ಜೊತೆಗೆ ನಿಂತರು ಶರಣ್. ಅದಕ್ಕೂ ಮುಂಚೆ ಶಾಸಕ ರವಿಸುಬ್ರಮಣ್ಯ ಟ್ರೈಲರ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದರು.
ಗೌಳಿ ಚಿತ್ರವನ್ನು ರಘು ಸಿಗಂ ನಿರ್ಮಾಣ ಮಾಡಿದ್ದು, ಇದು ಅವರ
ಮೊದಲ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಚಿತ್ರಗಳನ್ನು ಮಾಡುವ ಆಶಯದಲ್ಲಿರುವ ರಘು ಸಿಗಂ ಈ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹವೂ ದೊಡ್ಡದು ಎಂದು ಹೇಳಿಕೊಂಡಿತು ತಂಡ.
ಸೂರ ಇದರ ನಿರ್ದೇಶಕ. ಅವರಿಗೆ ಇದು ಮೊದಲ ಚಿತ್ರವಾದರೂ ಅವರು ಹೊಸಬರಂತೆ ಕಾಣಲೇ ಇಲ್ಲ. ಗಾಯಕ ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿರುವುದು ವಿಶೇಷ.
ಕಿಟ್ಟಿ ಎದುರು ಪಾವನ ಗೌಡ ನಟಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಅಪರೂಪಕ್ಕೆ ಸಿಕ್ಕಿದ ಪಾತ್ರ ಇದು ಎಂದು ಹೇಳುವಾಗ ಪಾವನ ಭಾವುಕರಾಗಿದ್ದರು.
ಶರಣ್ ಅವರಂತೂ ಕಿಟ್ಟಿ ಜೊತೆಗೆ ಇಡೀ ತಂಡವನ್ನು ಹಾಡಿ ಹೊಗಳಿದರು. ಈ ಟ್ರೈಲರ್ ನಮ್ಮನ್ನು ನಿದ್ದೆ ಮಾಡಲು ಬಿಡದಷ್ಟು ಉತ್ತಮ ಎಂದರು.
ಈ ಚಿತ್ರ ಒಂದು ರೀತಿಯಲ್ಲಿ ದೊಡ್ಡ ಮಟ್ಟದ ಭರವಸೆ ಮೂಡಿಸುವ ಜೊತೆ ಚಿತ್ರೀಕರಣ ಸಂದರ್ಭದಲ್ಲಿ ಆದ ಕಷ್ಟಗಳನ್ನು ಮರೆಸಿದೆ ಎಂದರು ಶ್ರೀನಗರ ಕಿಟ್ಟಿ.
ಖಳ ನಟರಾಗಿರುವ ಕಾಕ್ರೋಚ್ ಸುಧೀ ಹಾಗೂ ಯಶ್ ಶೆಟ್ಟಿ ಚಿತ್ರೀಕರಣದ ಸಂದರ್ಭದ ಅನುಭವಗಳನ್ನು ಹೇಳಿಕೊಂಡರು.
ಸಂಕಲಕಾರ ಆರ್.ಬಿ.ಉಮೇಶ್, ಬಾಲನಟಿ ನಮನ ಹಾಗೂ ಇತರ ಚಿತ್ರತಂಡದ ಸದಸ್ಯರು ಹಾಜರಿದ್ದರು. ಆನಂದ್ ಆಡಿಯೋ ಯೂಟ್ಯೂಬ್ ನ ಮೂಲಕ ಟ್ರೈಲರ್ ಬಿಡುಗಡೆಗೊಂಡಿದೆ.