ರೈತ ಬೆವರು ಹರಿಸಿ ದುಡಿಯದಿದ್ದರೆ ಅನ್ನಕ್ಕೆ ಸಂಕಷ್ಟ ಎದುರಾಗುತ್ತದೆ. ಆದ್ದರಿಂದಲೇ ರೈತ ಅನ್ನದಾತ ಮತ್ತು ಭಾರತ ಭಾಗ್ಯ ವಿಧಾತ..
ಇದೇ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಚಿತ್ರದಲ್ಲಿ ರೈತನ ಮಹತ್ವವೇ ಮುಖ್ಯ ಸಾರ..
ಅದೇ ಶ್ರೀಮಂತ..!
ರಮೇಶ್ ಹಾಸನ್ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ ‘ಶ್ರೀಮಂತ’ ಬಿಡುಗಡೆ ನಾಳೆ (ಮೇ 19) ಬಿಡುಗಡೆ ಕಾಣುತ್ತಿದೆ. ಆ ಮೂಲಕ ರೈತ ಮತ್ತು ದುಡಿಮೆಯ ಸಮುದಾಯ ಸಂಭ್ರಮದಲ್ಲಿ ಮೀಯಲು ಕ್ಷಣಗಣನೆ ಆರಂಭವಾಗಿದೆ.
ಬಾಲಿವುಡ್ ನಟ ಸೋನುಸೂದ್ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ ವಿಶೇಷತೆಗಳಿಗೆ ಕೊರತೆಯೇ ಇಲ್ಲ; ಮುಖ್ಯವಾಗಿ ಹಂಸಲೇಖ ಸಂಗೀತ. ಅದರಲ್ಲಿ ಮೂಡಿ ಬಂದಿರುವ ರೈತ ಮಹಾ ಸಂತ ಎಂದು ಬಿಂಬಿಸಿರುವ ರೈತ ಗೀತೆಯೇ ಚಿತ್ರದ ಹೈಲೈಟ್.
ಈ ಹಾಡು ಮೇರು ಗಾಯಕ ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರ ಕೊನೆಯ ಹಾಡು. ಈ ಹಾಡನ್ನು ಥೀಮ್ ಸಾಂಗ್ ಆಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಚಿತ್ರತಂಡ ವಿವರ ನೀಡಿದೆ.
ಚಿತ್ರದಲ್ಲಿ ಕನ್ನಡದ ಮುಂಚೂಣಿಯ ನಾಯಕ ನಟ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಕ್ರಾಂತಿ ಎಂಬ ಯುವನಟ ಮತ್ತು ಸಾಕಷ್ಟು ಕಲಾವಿದರ ಸಂಗಮ ಚಿತ್ರದಲ್ಲಿದೆ.
ಬಹುಕೋಟಿ ವೆಚ್ಚದ ಈ ಚಿತ್ರವನ್ನು ರಮೇಶ್ ಹಾಸನ್ ಅವರ ಜೊತೆ ನಾರಾಯಣಪ್ಪ ಹಾಗೂ ಸಂಜಯ್ ಬಾಬು ನಿರ್ಮಿಸಿದ್ದಾರೆ.
ಬಹಳವೇ ಶ್ರೀಮಂತಿಕೆಯ ವಿಷಯಗಳನ್ನು ಒಳಗೊಂಡಿರುವ ‘ಶ್ರೀಮಂತ’ ಚಿತ್ರದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ನಾಡಿನ ಅಗ್ರಮಾನ್ಯ ಗಣ್ಯರು ಪ್ರಶಂಸಿದ್ದಾರೆ ಎಂಬುದು ಹೆಗ್ಗಳಿಕೆ.
ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ಸಿಕ್ಕಿರುವುದು ಮಾತ್ರವಲ್ಲ; ಸೆನ್ಸಾರ್ ಅಧಿಕಾರಿಗಳು ಚಿತ್ರದ ಆಶಯಗಳನ್ನು ಕೊಂಡಾಡಿದ್ದಾರೆ. ಗ್ರಾಮೀಣ ರಂಗಭೂಮಿಯ ಸೊಗಡು ಚಿತ್ರದ ಮುಖ್ಯಾಂಶವಾಗಿದೆ.
‘ಒಲವೇ ಮಂದಾರ’ ಹಾಗೂ ಇತರೇ ಕ್ಲಾಸಿಕ್ ಚಿತ್ರಗಳ ಮೂಲಕ ಹೆಸರಾಗಿರುವ ರವಿ ಕುಮಾರ್ ಸನಾ ಈ ಚಿತ್ರದ ಛಾಯಾಗ್ರಹಕ ಎಂಬುದು ಕೂಡ ವಿಶೇಷವೇ.