ಭಾರತೀಯ ಚಿತ್ರರಂಗದ ಮೇರು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕಲರ್ಸ್ ಕನ್ನಡ ವಾಹಿನಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಕನ್ನಡಿಗರ ಹೃದಯ ಮತ್ತು ಮೈ ಮನವನ್ನು ಇಂದಿಗೂ ಆವರಿಸಿಕೊಂಡಿದೆ.
ಇದು ಹೃದಯ ಸಂವೇದನೆ ಮತ್ತು ಮೈಮನದ ಪುಳಕದ ವಿಷಯ. ಏಕೆಂದರೆ ಎಸ್.ಪಿ.ಬಿ ಮಕ್ಕಳಲ್ಲಿ ಮಕ್ಕಳಾಗಿ, ಹಿರಿಯರಲ್ಲಿ ಹಿರಿಯರಾಗಿ ಪ್ರತಿಭಾ ಸಂಪನ್ನರ ನಡುವೆ ದೈತ್ಯ ಪ್ರತಿಭೆಯಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅದೊಂದು ಆವರ್ಣನೀಯ ಆನಂದದ ಕಾರ್ಯಕ್ರಮವಾಗಿತ್ತು. ಕಲ್ಮಶವಿಲ್ಲದ ನಿರ್ಮಲವಾದ ಆ ಕಾರ್ಯಕ್ರಮ ಇಂದಿಗೂ ಕೋಟ್ಯಾಂತರ ಮಂದಿಯ ಎದೆಯೊಳಗೆ ಲಾಸ್ಯವಾಡುತ್ತಿದೆ. ಅಂತಹ ಕಾರ್ಯಕ್ರಮವನ್ನು ಪುನರ್ ಸ್ಥಾಪಿಸಬೇಕು ಎಂಬುದು ನಮ್ಮ ಆಶಯ ಎಂದರು ಕಲರ್ಸ್ ಕನ್ನಡ ವಾಹಿನಿಯ ಮನರಂಜನಾ ವಿಭಾಗದ ಮುಖ್ಯಸ್ಥ ಪರಮೇಶ್ವರ ಗುಂತ್ಕಲ್.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಎಸ್.ಪಿ.ಬಿ ಅವರ ಪುತ್ರ ಎಸ್.ಪಿ.ಚರಣ್ ಅವರು ತೀರ್ಪುಗಾರರಾಗಿ ಭಾಗವಹಿಸುತ್ತಾರೆ. ಕನ್ನಡದ ಮುಂಚೂಣಿಯ ಸಂಗೀತ ನಿರ್ದೇಶಕ ಹರಿಕೃಷ್ಣ, ಪ್ರಸಿದ್ಧ ಗಾಯಕ
ರಾಜೇಶ್ ಕೃಷ್ಣನ್, ಮತ್ತೊಬ್ಬ ಹೆಸರಾಂತ ಸಂಗೀತ ನಿರ್ದೇಶಕ ರಘುದೀಕ್ಷಿತ್ ತೀರ್ಪುಗಾರರಾಗಿ ಇರುವರು ಎಂಬ ವಿವರಗಳು ಬಂದವು. ಇದು ವಿಶೇಷ ಮತ್ತು ಸವಾಲಿನ ಕೆಲಸ ಏಕೆಂದರೆ ಎದೆ ತುಂಬಿ ಹಾಡುವೆನುಗೆ ಎಸ್.ಪಿ.ಬಿ ಸರ್ ಎಲ್ಲವೂ ಆಗಿದ್ದರು ಎಂದರು ರಾಜೇಶ್ ಕೃಷ್ಣನ್. ವಿ.ಟಿ ನೋಡಿದಾಗ ನಿಜಕ್ಕೂ ಹೆದರಿಕೆಯಾಯ್ತು; ನಾನು ಕೈಲಾದಷ್ಟು ಸರಿಗಿರೊಕೆ ಪ್ರಯತ್ನ ಪಡ್ತಿನಿ ಎಂದವರು ಸಂಗೀತ ನಿರ್ದೇಶಕ ಹರಿಕೃಷ್ಣ.
ಕನ್ನಡ ಭಾಷೆ ಟ್ರೈ ಮಾಡ್ತಿನಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಅಪ್ಪ ಮಾತನಾಡುತ್ತಿದ್ದರು. ಈಗ ಇಂತಹ ಬಳಗ ಇರುವುದರಿಂದ ಅತ್ಯಂತ ವಿಶ್ವಾಸಾರ್ಹ ಕಾರ್ಯಕ್ರಮ ನಿರೀಕ್ಷೆ ಮಾಡಬಹುದು ಎಂದರು ಚರಣ್. ಕಾರ್ಯಕ್ರಮವನ್ನು ಈ ಬಾರಿ ಅಂಕಿತ ನಿರೂಪಣೆ ಮಾಡುವರು ಎಂಬ ವಿವರ ಕೊಟ್ಟರು ಗುಂತ್ಕಲ್. ಅಂದ ಹಾಗೆ ‘ಎದೆ ತುಂಬಿ ಹಾಡುವೆನು’ ಹೊಸ ಕಾರ್ಯಕ್ರಮ ಇದೇ ಆಗಸ್ಟ್ 14ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತದೆ.