ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಎಂದು ಹಾಡಿ ಕನ್ನಡಿಗರ ಹೃನ್ಮನಗಳಲ್ಲಿ ಹಾಗೂ ಅಸಂಖ್ಯಾತ ಭಾರತೀಯರ ಮನಗಳನ್ನು ಗಾಯನದ ಮೂಲಕ ಆವರಿಸಿಕೊಂಡಿದ್ದ ಭಾರತೀಯ ಗಾಯನ ರತ್ನ ಹಾಡುವುದನ್ನು ನಿಲ್ಲಿಸಿತು.
ಸಿಂಗರ್ ಆಫ್ ಪ್ಲೇಬ್ಯಾಕ್ ಎಸ್ಪಿಬಿ ಎಂಬ ಅನ್ವರ್ಥನಾಮವನ್ನೇ ಹೆಸರು ಮತ್ತು ಗಾಯನವನ್ನೇ ಉಸಿರಾಗಿಸಿಕೊಂಡ ಚಿತ್ರರಂಗದ ತಾರಾ ನಕ್ಷತ್ರದ ಕೊಂಡಿ ಕಳಚಿ ಬಿದ್ದಿತು. ಆ ಮೂಲಕ ಅಸಂಖ್ಯಾತ ಭಾರತೀಯರನ್ನು ದುಃಖದ ಕಡಲಲ್ಲಿ ಮುಳುಗಿಸಿತು.
ಅದು 1964ರ ಸಂದರ್ಭ. ಮದ್ರಾಸ್ ಮೂಲದ ಸಾಂಸ್ಕøತಿಕ ಸಂಘವೊಂದು ರಾಜ್ಯ ಮಟ್ಟದ ಗಾಯನ ಸ್ಪರ್ಧೆಯನ್ನು ಏರ್ಪಡಿಸಿತ್ತು. ಅಲ್ಲಿ ತೀರ್ಪುಗಾರರಾಗಿದ್ದವರು ದಕ್ಷಿಣ ಭಾರತ ಚಿತ್ರರಂಗದ ಹೆಸರಾಂತ ಗಾಯಕ ಘಂಟಸಾಲ. ಆ ವೇದಿಕೆಯಲ್ಲಿ ಹಾಡಿ ಎಲ್ಲರನ್ನೂ ಸಮ್ಮೋಹನಗೊಳಿಸಿದ ಯುವಕ ಗಮನ ಸೆಳೆದ. ಆ ಯುವಕ ಮುಂದೆ ಎಂದಿಗೂ ಹಾಡುವುದನ್ನು ನಿಲ್ಲಿಸಲೇ ಇಲ್ಲ. ಆ ಗಾನಪ್ರತಿಭೆ ಇಡೀ ಭಾರತೀಯ ಚಿತ್ರರಂಗದ ಅನಿವಾರ್ಯ ಧ್ವನಿಯಾಗಿತ್ತು. ಅದು ಗಂಧರ್ವ ಲೋಕದ ಧ್ವನಿ. ಆ ಧ್ವನಿಯೇ ಸಿಂಗರ್ ಆಫ್ ಪ್ಲೇಬ್ಯಾಕ್ ಎಸ್ಪಿಬಿ.
ಎಸ್.ಪಿ.ಬಾಲಸುಬ್ರವ್ಮಣ್ಯಂ ದಕ್ಷಿಣ ಭಾರತದ ಅನಿವಾರ್ಯ ಗಾಯಕ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಹೆಚ್ಚು ಕಡಿಮೆ ಎಲ್ಲಾ ನಾಯಕರಿಗೂ ಹಾಡಿದ ಸ್ಟಾರ್ ಮೇಕರ್. ಅಲ್ಲದೆ ರಜನಿಕಾಂತ್, ಕಮಲ್ಹಾಸನ್, ವಿಷ್ಣುವರ್ಧನ್, ಜಮಿನಿ ಗಣೇಶನ್ ಮೊದಲಾದವರಿಗೆ ಡಬ್ಬಿಂಗ್ ಮಾಡಿ ಧ್ವನಿಯಾಗಿದ್ದ ಅಪರೂಪದ ಪ್ರತಿಭೆ.
ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಮಣ್ಯಂ (ಎಸ್ಪಿಬಿ) 1946ರ ಜೂನ್ 4ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೊಂಟೆಮ್ಮಪೇಟ ಎಂಬಲ್ಲಿ ಹರಿಕಥಾ ವಿದ್ವಾಂಸರಾಗಿದ್ದ ಎಸ್.ಪಿ.ಸಾಂಬಮೂರ್ತಿ ಹಾಗೂ ಶಕುಂತಲಮ್ಮ ಅವರ ಪುತ್ರನಾಗಿ ಜನನ. ಈ ದಂಪತಿಗಳಿಗೆ ಮೂವರು ಪುತ್ರರು ಹಾಗೂ ಐವರು ಪುತ್ರಿಯರು. ಪುತ್ರಿಯರ ಪೈಕಿ ಎಸ್.ಪಿ.ಶೈಲಜಾ ಪ್ರಖ್ಯಾತ ಗಾಯಕಿ.
ಎಸ್ಪಿಬಿ ಬಾಲ್ಯದಲ್ಲಿಯೇ ಸಂಗೀತ ಕಲಿತರು. ಜೊತೆಗೆ ಎಂಜಿಯರಿಂಗ್ ಓದಲು ಅನಂತಪುರದ ಜೆಎನ್ಟಿಯು ಕಾಲೇಜು ಸೇರಿ ಅಧ್ಯಯನ ಮಾಡಿದರು. ಆದರೆ ಅದರಲ್ಲಿ ಅವರಿ ಯಶಸ್ವಿಯಾಗಲಿಲ್ಲ. 1966ರ ಡಿಸೆಂಬರ್ 15ರಂದು ತೆಲುಗಿನ `ಮರ್ಯಾದೆ ರಾಮಣ್ಣ’ ಎಂಬ ಚಿತ್ರಕ್ಕೆ ಮೊದಲು ಹಿನ್ನೆಲೆ ಗಾಯಕರಾಗಿ ಹಾಡಿದರು. ಬಳಿಕ ಅವರ ಎರಡನೇ ಚಿತ್ರ ಕನ್ನಡದ ನಕ್ಕರೇ ಅದೇ ಸ್ವರ್ಗ ಆಗಿತ್ತು. ಆ ಚಿತ್ರದ ನಾಯಕ ನಟರಾಗಿದ್ದವರು ಹಾಸ್ಯ ಚಕ್ರವರ್ತಿ ನರಸಿಂಹರಾಜು. `ಕನಸಿದೋ ನನಸಿದೋ..’ ಎಂಬ ಹಾಡು ಪಿ.ಸುಶೀಲ ಅವರೊಂದಿಗೆ ಡುಯೇಟ್ ಹಾಡಾಗಿತ್ತು. ಗುರುರಾಜಲು ನಾಯ್ಡು ಅವರ ಮೇಲೆ ಚಿತ್ರಿತವಾಗಿತ್ತು.
ಅವರು ಹಾಡಿದ ಮೊದಲ ತಮಿಳು ಚಿತ್ರ ಹೊಟೇಲ್ ರಂಭ. `ಅತ್ತ ನೋಡು ಇಪ್ಪಡಿ ಎತ್ತತ್ತನೇ ನಾಲಾಚು..’ ಎಂಬ ಡುಯೆಟ್ ಹಾಡನ್ನು ಎಲ್.ಆರ್.ಈಶ್ವರಿ ಅವರ ಜೊತೆ ಹಾಡಿದ್ದರು. ಎಂಎಸ್.ವಿಶ್ವನಾಥನ್ ಆ ಚಿತ್ರದ ಸಂಗೀತ ನಿರ್ದೇಶಕ. ಆದರೆ ಆ ಚಿತ್ರ ಬಿಡುಗಡೆ ಕಾಣಲಿಲ್ಲ. ಮುಂದೆ 1969ರಲ್ಲಿ ಜಮಿನಿ ಗಣೇಶನ್ ಅವರ ಶಾಂತಿ ನಿಲಯಂ ಚಿತ್ರಕ್ಕೆ ಪಿ.ಸುಶೀಲ ಅವರೊಂದಿಗೆ ಡುಯೆಟ್ ಹಾಡು ಹಾಡಿದರು. ಹಾಗೇಯೇ ಎಂ.ಜಿ.ರಾಮಚಂದ್ರನ್ ಅವರ ಅಡಿಮೈ ಪೆಣ್ ಚಿತ್ರದಲ್ಲಿ `ಆಯಿರಂ ನಿಲವೇವಾ..’ ಎಂಬ ಹಾಡನ್ನು ಹಾಡಿದರು. ನಂತರ ಎಸ್.ಜಾನಕಿ ಅವರೊಂದಿಗೆ ಹಾಡಿದ್ದು ಕಣಿಪೆಣ್ ಎಂಬ ಚಿತ್ರದಲ್ಲಿ. ಕದಳಪಳು ಎಂಬ ಚಿತ್ರದಲ್ಲಿ ಹಾಡುವ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಎಸ್ಪಿಬಿ ಪ್ರವೇಶ ಪಡೆದರು.
ಅಂತಾರಾಷ್ಟ್ರೀಯ ಕೀರ್ತಿ : 1980ರಲ್ಲಿ ತೆರೆಕಂಡ ಆ ಒಂದು ಚಿತ್ರ ಎಸ್ಪಿಬಿ ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿಬಿಟ್ಟಿತು. ಸಂಪೂರ್ಣ ಕರ್ನಾಟಕ ಸಂಗೀತ ಆಧಾರದಲ್ಲಿ ಹಾಡಿದ ಗಾಯನವದು. ಕೆ.ವಿಶ್ವನಾಥ್ ನಿರ್ದೇಶನ ಮಾಡಿದ `ಶಂಕರಾಭರಣಂ’ ಎಂಬ ಚಿತ್ರ ಭಾರತೀಯರ ಹೃನ್ಮನಗಳಲ್ಲಿ ಸಂಗೀತದ ಅಲೆಯನ್ನೇ ಎಬ್ಬಿಸಿತು. ಕೆ.ವಿ.ಮಹಾದೇವನ್ ಆ ಚಿತ್ರದ ಸಂಗೀತ ನಿರ್ದೇಶಕ.
ಹಿಂದಿ ಚಿತ್ರರಂಗಕ್ಕೆ ಪ್ರವೇಶ : 1981ರಲ್ಲಿ ಕಮಲ್ಹಾಸನ್ ಅವರ `ಏಕ್ ದ್ವಜೇ ಕೇಲಿಯೇ..’ ಎಂಬ ಚಿತ್ರಕ್ಕೆ ಹಾಡುವ ಮೂಲಕ ಬಾಲಿವುಡ್ ಪ್ರವೇಶ ಪಡೆದರು ಎಸ್ಪಿಬಿ. ಈ ಚಿತ್ರಕ್ಕೆ ಅತ್ಯುತ್ತಮ ಗಾಯಕ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಚಿತ್ರಕ್ಕೆ ಸಂಗೀತ ನೀಡಿದವರು ಇಳೆಯರಾಜ.
ಸಂಗೀತ ಮಾಂತ್ರಿಕ ಇಳೆಯರಾಜ ಅವರ ಜೊತೆಗೂಡಿ ಅತಿ ಹೆಚ್ಚು ಚಿತ್ರಗಳಲ್ಲಿ ಎಸ್ಪಿಬಿ ಹಾಡಿದರು. ಎಸ್.ಜಾನಕಿ ಅವರೊಂದಿಗೆ ಡುಯೆಟ್ ಹಾಡುಗಳಿಗೆ ಧ್ವನಿಯಾಗಿದ್ದೂ ಕೂಡ ದಾಖಲೆಯೇ. ಇಳೆಯರಾಜ ಹಾಗೂ ಎಸ್ಪಿಬಿ ಜೊತೆ ಜೊತೆಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಅದು 1983ರಲ್ಲಿ ಸಾಗರ ಸಂಗಂ ಚಿತ್ರಕ್ಕೆ ಇಬ್ಬರೂ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. 1986ರಲ್ಲಿ ಸ್ವಾತಿಮುತ್ಯುಂ ಚಿತ್ರಕ್ಕೆ ಮತ್ತೆ 1988ರಲ್ಲಿ ರುದ್ರವಿಲ್ಲಾ ಎಂಬ ಚಿತ್ರಗಳಿಗೆ ಇಬ್ಬರೂ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಸಲ್ಮಾನ್ಖಾನ್ಗೆ ಹಾಡು : 1989ರಲ್ಲಿ ಸಲ್ಮಾನ್ಖಾನ್ ಮೊದಲ ಚಿತ್ರ `ಮೇನೆ ಫ್ಯಾರ್ಕಿಯಾ’ ಚಿತ್ರದಲ್ಲಿ ಹಾಡುವ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದರು. ಈ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ ಕೂಡ ಸಿಕ್ಕಿತು. ಮುಂದೆ `ಹಮ್ ಆಪ್ ಕಿಯೇ ಕೌನ್’ ಚಿತ್ರದ ಮೂಲಕ ಮತ್ತೆ ಗಮನ ಸೆಳೆದರು. ಆ ಚಿತ್ರದಲ್ಲಿ ಗಾನಕೋಗಿಲೆ ಲತಾಮಂಗೇಶ್ಕರ್ ಅವರ ಜೊತೆ ಹಾಡುವ ಅವಕಾಶ ಸಿಕ್ಕಿತು ಎಸ್ಪಿಬಿ ಅವರಿಗೆ.. `ದಿದ್ದಿ ತೇರಾ ದೇವರ್ ದಿವಾನ..’ ಎಂಬ ಹಾಡು ಅತ್ಯಂತ ಜನಪ್ರಿಯವಾಯಿತು ಕೂಡ. 90ರ ದಶಕದಲ್ಲಿ ಸಲ್ಮಾನ್ಖಾನ್ ಅವರ ಎಲ್ಲಾ ಹಾಡುಗಳನ್ನು ಎಸ್ಪಿಬಿ ಹಾಡುತ್ತಿದ್ದರು. ಅದು 70-80ರ ದಶಕದಲ್ಲಿ ರಾಜೇಶ್ ಖನ್ನಾ ಹಾಗೂ ಕಿಶೋರ್ಕುಮಾರ್ಗೆ ಹೋಲಿಕೆಯಾಗಿತ್ತು.
90ರ ದಶಕದಲ್ಲಿ ಎಸ್ಪಿಬಿ ಚಿತ್ರಸಂಗೀತ ಲೋಕವನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟರು. ಸಂಗೀತ ನಿರ್ದೇಶಕರಾದ ವಿದ್ಯಾಸಾಗರ್, ಎಂ.ಎಂ.ಕೀರವಾಣಿ, ಎಸ್.ಎ.ರಾಜ್ಕುಮಾರ್, ದೇವಾ ಹಾಗೂ ಎ.ಆರ್.ರೆಹಮಾನ್ ಅವರಿಗೆ ಅನಿವಾರ್ಯ ಗಾಯಕರಾಗಿದ್ದರು. ಇಳೆಯರಾಜ ಅವರಿಗಂತೂ ಎಸ್ಪಿಬಿಯೇ ಎಲ್ಲಾ ಆಗಿತ್ತು.
ಕನ್ನಡದಲ್ಲಿ ಪ್ರೇಮಲೋಕ ಚಿತ್ರದ ಮೂಲಕ ಹಂಸಲೇಖ ಹಾಗೂ ಎಸ್ಪಿಬಿ ಜೋಡಿ ಕಮಾಲ್ ಮಾಡಿತ್ತು. 1995ರಲ್ಲಿ ಹಿಂದುಸ್ತಾನಿ ಸಂಗೀತವನ್ನು ಆಧರಿಸಿದ `ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕೆ ಶ್ರೇಷ್ಠ ಗಾಯಕ ರಾಷ್ಟ್ರ ಪ್ರಶಸ್ತಿ ಎಸ್ಪಿಬಿ ಅವರಿಗೆ ದಕ್ಕಿತು. ಇಳೆಯರಾಜ ಅವರಂತೆ ಹಂಸಲೇಖ ಅವರಿಗೂ ಎಸ್ಪಿಬಿ ಅನಿವಾರ್ಯ ಗಾಯಕರಾಗಿದ್ದರು.
ಅದೇಕೋ ಬಹಳ ಸಮಯ ಎಸ್ಪಿಬಿ ಹಿಂದಿ ಚಿತ್ರಗಳಿಗೆ ಹಾಡಲಿಲ್ಲ. ಸುಮಾರು 15 ವರ್ಷಗಳ ಬಳಿಕ ಕೆಲವು ವರ್ಷಗಳ ಹಿಂದೆ ಶಾರುಕ್ಖಾನ್ ಅವರ ಚೆನ್ನೈ ಎಕ್ಸ್ಪ್ರೆಸ್ ಚಿತ್ರದ ಶೀರ್ಷಿಕೆ ಗೀತೆಯನ್ನು ಹಾಡಿದ್ದರು. 2020ರಲ್ಲಿ ಇಳೆಯರಾಜ ಸಂಗೀತ ನಿರ್ದೇಶನದಲ್ಲಿ `ಭರತಭೂಮಿ’ ಸಂಚಿಕೆಗೆ ಹಾಡಿದರು. ಅದು ಕೊರೊನಾ ವಾರಿಯರ್ಗೆ ಅರ್ಪಣೆ ಮಾಡಲಾಗಿದ್ದ ಹಾಡು.