ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆದು ಹಾಕಲು ಬಿಜೆಪಿಯ ಕೆಲ ಶಾಸಕರು ಒತ್ತಡ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಪ್ರೋತ್ಸಾಹಿಸುವ ಸಲುವಾಗಿ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ತೆರವುಗೊಳಿಸುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಜೇಮ್ಸ್ ಚಿತ್ರದ ನಿರ್ಮಾಪಕರಿಂದ ತಮಗೆ ದೂರು ಬಂದಿರುವುದಾಗಿ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.
ಜೇಮ್ಸ್ ಚಿತ್ರವು ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರವಾಗಿದ್ದು, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಆದರೆ ಬಿಜೆಪಿಯ ಕೆಲ ಶಾಸಕರು ಜೇಮ್ಸ್ ಚಿತ್ರ ತೆಗೆದು ಕಾಶ್ಮೀರಿ ಫೈಲ್ಸ್ ಚಿತ್ರ ಹಾಕಬೇಕೆಂದು ಒತ್ತಡ ಹಾಕಿರುವುದು ಅಕ್ಷಮ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಕೊಪ್ಪಳದಲ್ಲಿ ಮಾತನಾಡಿರುವ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪಾತಿಕೊಂಡ ಅವರು ಜೇಮ್ಸ್ ಚಿತ್ರಕ್ಕೆ ತಡೆಯೊಡ್ಡುವ ಆತಂಕ ಎದುರಾಗಿರುವುದು ನಿಜ ಎಂದು ತಿಳಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಚಿಕ್ಕಬಳ್ಳಾಪುರದಲ್ಲಿ ನಡೆದ ತ್ರಿಬಲ್ ಆರ್ ಚಿತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು.. ಪುನೀತ್ ಅವರ ಬಗ್ಗೆ ಭಾವುಕವಾಗಿ ಮಾತನಾಡಿ ‘ನನ್ನ ಅಪ್ಪು..’ ಎಂದು ಹೊಗಳಿದ್ದರು. ಈಗ ಅಪ್ಪು ಚಿತ್ರ ಪ್ರದರ್ಶನಕ್ಕೆ ಆತಂಕ ಎದುರಾಗಿರುವುದನ್ನು ಅವರೇ ದೂರ ಮಾಡಬೇಕಿದೆ..
ಈ ಮಧ್ಯೆ ದೆಹಲಿಯಲ್ಲೂ ಕಾಶ್ಮೀರಿ ಫೈಲ್ಸ್ ನ ಸಲುವಾಗಿ ಈಚೆಗೆ ಬಿಡುಗಡೆ ಕಂಡ ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ಚಿತ್ರದ ಪ್ರದರ್ಶನ ತಡೆಯೊಡ್ಡಿ ಚಿತ್ರವನ್ನು ಚಿತ್ರಮಂದಿರದಿಂದ ತೆರವುಗೊಳಿಸಲಾಗಿದೆ ಎಂಬ ಆರೋಪ ಬಂದಿರುವುದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.