ಈಚೆಗೆ ಹೊಸಬರ ಚಿತ್ರಗಳು ಆದ್ಯತೆ ಮೇರೆಗೆ ಸೆಟ್ಟೇರುತ್ತಿವೆ. ಈ ಸಾಲಿಗೆ ಸೇರುವ ‘ಗೌರಿ ಶಂಕರ’ ಚಿತ್ರವು ಈಚೆಗೆ ಮುಹೂರ್ತ ಆಚರಿಸಿಕೊಂಡಿದೆ.
ಬೆಂಗಳೂರಿನ ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯದಲ್ಲಿ ಚಿತ್ರದ ಅದ್ದೂರಿ ಮುಹೂರ್ತ ನೆರವೇರಿದ್ದು, ಹಿರಿಯ ನಿರ್ಮಾಪಕ ರಾಜಣ್ಣ ಕ್ಯಾಮೆರಾ ಆನ್ ಮಾಡಿದರೆ, ಶಿವಲಿಂಗ (ಗಾಜನೂರ್) ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.
ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಹೇಶ್ ಚಿನ್ಮಯಿ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಶುಭ ಫಿಲಂ ಫ್ಯಾಕ್ಟರಿ ತಂಡ ನಿರ್ಮಾಣ ಮಾಡುತ್ತಿದೆ.
ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾವಂತನಾಗಿ ಗೋಲ್ಡ್ ಮೆಡಲ್ ಪಡೆದ ಹುಡುಗನೊಬ್ಬ ಉದ್ಯೋಗ ಸಿಗದೆ ತಾತ್ಸಾರಕ್ಕೆ ಒಳಗಾದಾಗ ಹೇಗೆ ಸವಾಲುಗಳನ್ನು ಸ್ವೀಕರಿಸಿ ಜೀವನದಲ್ಲಿ ಏಳಿಗೆ ಕಾಣುತ್ತಾನೆ ಮತ್ತು ಆ ಮೂಲಕ ಇತರರಿಗೆ ಮಾದರಿಯಾಗುತ್ತಾನೆ ಎಂಬುದು ಚಿತ್ರದ ಕಥೆಯ ಸಾರಾಂಶ.
ಹೊಸ ಕಲಾವಿದರಾದ ಸುನಿಲ್ಭಂಗಿ, ಅಭಿಷೇಕ್, ಕುಸುಮ, ಪ್ರಿಯಾನಾಗಣ್ಣ ಅವರೊಂದಿಗೆ ಹಿರಿಯ ಕಲಾವಿದರಾದ ಬಿರಾದಾರ್, ಗುರುರಾಜ ಹೊಸಕೋಟೆ, ಕಿಲ್ಲರ್ ವೆಂಕಟೇಶ್, ಭವ್ಯಾ ನಟಿಸುತ್ತಿದ್ದಾರೆ.
ಜೊತೆಗೆ ಎನ್.ಎಸ್.ದೇವರಾಜ್ (ನಿಟ್ಟೂರು), ಮನೋಜ್, ಹರೀಶ್, ಸುಬ್ರಮಣಿ ಮಲ್ಲಸಂದ್ರ, ಪ್ರಕಾಶ್ ರಾಜ್ಕುಮಾರ್, ಚಂದ್ರಮೂರ್ತಿ, ಮಂಜುನಾಥ.ಬಿ, ಮೋಹನ್ ಚಿತ್ರದುರ್ಗ ಮೊದಲಾದ ಕಲಾವಿದರ ಸಂಗಮವಿದೆ.
ರವಿ ಟಿ.ಗೌಡ ಛಾಯಾಗ್ರಹಣ, ಮಹಾರಾಜ್ ಸಂಗೀತ, ರವಿತೇಜ್ ಸಿ.ಎಚ್ ಸಂಕಲನ, ಥ್ರಿಲ್ಲರ್ ಮಂಜು, ವಿನೋದ್ ಸಾಹಸ ಹಾಗೂ ಕರಿಯಾನಂದ ನೃತ್ಯ ನಿರ್ದೇಶನವಿದೆ.
ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಜೋಗ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.