ಅಪ್ಪನ ಹುಟ್ಟುಹಬ್ಬದ ದಿನ ಮಗನ ಚಿತ್ರದ ಟ್ರೈಲರ್ ಬಿಡುಗಡೆ.. ಆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರ ದಂಡು..
ಸೋಮವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ.ಮಾಲ್ ನ ಎಂಎಂಬಿ ಲೆಗೆಸ್ಸಿ ಸಭಾಂಗಣ ಗಣ್ಯರು ಅಭಿಮಾನಿಗಳಿಂದ ತುಂಬಿ ಹೋಗಿತ್ತು.
ಅದು ಗಂಡುಗಲಿ ನಿರ್ಮಾಪಕ ಕೆ.ಮಂಜು ಹುಟ್ಟುಹಬ್ಬದ ಸಂಭ್ರಮ ಮತ್ತು ಅವರ ಪುತ್ರ ಶ್ರೇಯಸ್ ಮಂಜು ಚಿತ್ರ ‘ವಿಷ್ಣು ಪ್ರಿಯಾ’ ಟ್ರೈಲರ್ ಬಿಡುಗಡೆ ಸಮಾರಂಭ.
ನಟ ಕಿಚ್ಚ ಸುದೀಪ್, ನಿರ್ದೇಶಕ ಎಸ್. ನಾರಾಯಣ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಿರ್ದೇಶಕ ಗುರು ದೇಶಪಾಂಡೆ ಹಾಗೂ ಇತರ ಗಣ್ಯರು ಹಾಜರಿದ್ದರು.
ಕೆ.ಮಂಜು ಮಾತನಾಡುವಾಗ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ನೆನೆದು ಭಾವುಕರಾದರು.. ಒರಟ, ಹುಂಬ ಎಂದು ಪ್ರೀತಿಯಿಂದಲೇ ಬೈಯುತ್ತಾ ಅವರು ಬೆಳೆಸಿದ ರೀತಿ ದೊಡ್ಡದು. ಅವರಿಂದಲೇ ನಾನು ಈ ಮಟ್ಟದಲ್ಲಿ ಬೆಳೆದಿದ್ದೇನೆ ಎನ್ನುತ್ತಾ ಅವರ ಸ್ಮರಣೆ ಮಾಡಿದರು.
ಕಿಚ್ಚ ಸುದೀಪ್ ತಡವಾಗಿ ಬಂದರೂ ಆನಂತರ ಇಡೀ ವೇದಿಕೆ ಆವರಿಸಿಕೊಂಡರು. ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ಎಸ್.ನಾರಾಯಣ್ ಕೆ.ಮಂಜು ಅವರ ದಿಟ್ಟತನದ ಗುಣಗಾನ ಮಾಡಿದರು. ಭಾರತಿ ವಿಷ್ಣುವರ್ಧನ್ ಹಾಗೂ ನಾಗತ್ತಿಹಳ್ಳಿ ಚಂದ್ರಶೇಖರ್ ಚಿತ್ರಕ್ಕೆ ಹಾಗೂ ಕೆ.ಮಂಜು ಅವರಿಗೆ ಶುಭ ಹಾರೈಸಿದರು.
ಕೆ.ಮಂಜು ನಿರ್ಮಾಣದ, ಅವರ ಪುತ್ರ ಶ್ರೇಯಸ್ ಕೆ.ಮಂಜು, ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ನಟಿಸಿರುವ ‘ವಿಷ್ಣು ಪ್ರಿಯಾ’ ಒಂದು ಕ್ಯೂಟ್ ಲವ್ ಸ್ಟೋರಿ ಎಂಬುದು ಬಿಂಬಿತವಾಯಿತು.
ಪ್ರೀತಿ ಪ್ರೇಮದ ಕಥೆಗಳನ್ನು ಯಾರು ಮಾಡಿದರೂ ಅವರ ನಿರೂಪಣಾ ಶೈಲಿ ಚಿತ್ರದ ಗೆಲುವಿಗೆ ಕಾರಣವಾಗುತ್ತದೆ ಎಂದರು ಕಿಚ್ಚ ಸುದೀಪ್. ಒಬ್ಬ ವ್ಯಕ್ತಿ 50 ಚಿತ್ರಗಳನ್ನು ಮಾಡುವುದು ಸಾಮಾನ್ಯ ವಿಷಯವಲ್ಲ; ಕೆ.ಮಂಜು ಅವರ ಶ್ರದ್ಧೆ ಮಗನಲ್ಲೂ ಕಾಣುತ್ತಿದೆ ಎಂದರು.
ವಿಷ್ಣು ಎಂಬ ಹೆಸರಿನಲ್ಲಿಯೇ ಒಂದು ಶಕ್ತಿ ಇದೆ. ಅದು ಪ್ರೀತಿಯ ಭಾವವೂ ಹೌದು. ಸುಂದರ ಪರಿಸರ ಮತ್ತು ಪ್ರೇಮಿಗಳ ಆಹ್ಲಾದ ಪ್ರೇಮ್ ಗಳಲ್ಲಿ ಎದ್ದು ಕಾಣುತ್ತಿದೆ ಎಂದವರು ನಿರ್ದೇಶಕ ಎಸ್.ನಾರಾಯಣ್.
ಈ ಸಂದರ್ಭದಲ್ಲಿ ನಮ್ಮೆಜಮಾನ್ರು ಇದ್ದಿದ್ರೆ ಬಹಳವೇ ಖುಷಿ ಪಡುತ್ತಿದ್ದರು ಎಂದವರು ಡಾ.ಭಾರತಿ ವಿಷ್ಣುವರ್ಧನ್. ಆ ದೇವರು ಎಲ್ಲರಿಗೂ ಒಂದು ಅದೃಷ್ಟ ಅಂತಾ ಕೊಟ್ಟಿರ್ತಾನೆ. ಅದು ಶ್ರೇಯಸ್ ಗೆ ಬೇಗನೆ ಸಿಗಲಿ ಎಂದು ಹಾರೈಸಿದರು.
ನಿರ್ದೇಶಕರಾದ ಇಂದ್ರಜಿತ್ ಲಂಕೇಶ್, ಗುರು ದೇಶಪಾಂಡೆ, ನಟಿ ನಿಶ್ವಿಕಾ ನಾಯ್ಡು, ಚಿತ್ರದ ನಿರ್ದೇಶಕ ವಿ.ಕೆ. ಪ್ರಕಾಶ್ ಎಲ್ಲರೂ ತಂದೆ, ಮಗ ಇಬ್ಬರಿಗೂ ಶುಭಾಶಯ ಕೋರಿದರು.
ಫೆಬ್ರವರಿ 21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿರುವ ‘ವಿಷ್ಣುಪ್ರಿಯಾ’ ತೊಂಭತ್ತರ ದಶಕದಲ್ಲಿ ನಡೆಯುವ ಅಪರೂಪದ ಪ್ರೇಮ ಕಥೆ. ಈಗಾಗಲೇ ‘ಸುಮ್ಮನೆ ಸುಮ್ಮನೆ’ ಸೇರಿ ಮೂರೂ ಹಾಡುಗಳು ಹಿಟ್ ಆಗಿವೆ.
ಮಲಯಾಳಂ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕ ವಿ.ಕೆ.ಪ್ರಕಾಶ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
ವಿನೋದ್ ಭಾರತಿ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ ಎಂಬ ಮಾಹಿತಿಗಳು ಬಂದವು.