ನಿರ್ಮಾಪಕರು : ಪುರುಷೋತ್ತಮ್ ಗುಜ್ಜಾಲ್
ಸಮಾಜ ಘಾತುಕರನ್ನು ಮಟಾಸ್
ಮಾಡುವ ಕೆಚ್ಚೆದೆಯ ಯುವಕನ ಕಥೆ
ಪೊಲೀಸ್ ಅಧಿಕಾರಿಯಾಗಬೇಕೆಂಬ ಆಕಾಂಕ್ಷೆಯಲ್ಲಿ ತರಬೇತಿ ಪಡೆಯುವ ಯುವಕನಿಗೆ ಸಮಾಜ ಕಂಟಕವಾಗಿದ್ದ ರೌಡಿ ಪಡೆಯನ್ನು ಧ್ವಂಸ ಮಾಡುವ ಅವಕಾಶ ಒದಗಿ ಬರುತ್ತದೆ.. ಆದರೆ ಅದು ಜೀವ ಪಣಕ್ಕಿಟ್ಟು ಮಾಡಬಹುದಾದ ಅಪಾಯಕಾರಿ ಕೆಲಸ..
ಸಮಾಜದಲ್ಲಿ ರೌಡಿಯೊಬ್ಬ ಅವಾಂತರಕಾರಿಯಾಗಿ ಪರಿಣಮಿಸಿದರೆ ಅದರ ಸ್ವಾಸ್ಥ್ಯ ಕೆಡುತ್ತದೆ. ಕುಟುಂಬಗಳು ಸರ್ವನಾಶವಾಗುತ್ತವೆ. ಆದರೆ ಇದಕ್ಕೆಲ್ಲಾ ಪರಿಹಾರ ನೀಡುವ ಒಬ್ಬ ವೀರ ಹುಟ್ಟಿಯೇ ಹುಟ್ಟುತ್ತಾನೆ ಆತನೇ ರಾಣ..
ಪೊಲೀಸ್ ಅಧಿಕಾರಿಯ ಕನಸು ಕಾಣುತ್ತಾ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ರಾಣ ಕೆಚ್ಚೆದೆಯ ಯುವಕ. ಆತನಿಗೆ ಮದುವೆಯಾಗುವ ಹುಡುಗಿಯೂ ಇರುತ್ತಾಳೆ. ಪ್ರಾಣ ಕೊಡುವ ಸ್ನೇಹಿತರೂ ಇರುತ್ತಾರೆ.
ಇಂತಹ ಸಂದರ್ಭದಲ್ಲಿ ಕಪಾಲಿ ಎಂಬ ರೌಡಿಯ ಉಪದ್ರವದ ಸದ್ದು ಕೇಳುತ್ತಿರುತ್ತದೆ. ಬಾಲ್ಯದ ಸ್ನೇಹಿತೆ ಮತ್ತು ಆಕೆಯ ಪತಿ ಸುಳಿಗೆ ಸಿಲುಕಿದಾಗ ರಾಣ ಬಚಾವ್ ಮಾಡುತ್ತಾನೆ. ಬಳಿಕ ಈತನ ಸುತ್ತಲೂ ಚಕ್ರವ್ಯೂಹ ಸಿದ್ಧವಾಗುತ್ತದೆ. ಅದನ್ನು ಮೆಟ್ಟಿ ಹೇಗೆ ಎಲ್ಲದರಿಂದ ಪಾರಾಗಬಲ್ಲ ಎಂಬುದು ಕಥೆಯ ಸಾರಾಂಶ.
ಸಾಮಾಜಿಕ ನೆಲೆಯಲ್ಲಿ ಚಿಂತಿಸುವ ಯುವಕರಿಗೆ ರೌಡಿ ಪಡೆಗಳು ಸದಾ ಕಂಟಕಪ್ರಾಯವಾಗಿರುತ್ತವೆ.. ಒಂದು ಗೌರವದ ಕೆಲಸ ಪಡೆಯುವ ಮಾರ್ಗದಲ್ಲಿ ಅನೇಕ ಅಡೆತಡೆಗಳೂ ಇರುತ್ತವೆ. ಅಂತಹ ಪ್ರಸಂಗಗಳು ಇಲ್ಲಿ ಪರಿಣಾಮಕಾರಿಯಾಗಿ ನಿರೂಪಿತವಾಗಿವೆ.
ಪ್ರೇಮಿಯ ಜೊತೆ ಆರಾಮವಾಗಿ ವಿಹರಿಸಬೇಕೆಂಬ ಕನಸಿಗೆ ಕೊಳ್ಳಿ ಇಟ್ವವರನ್ನು ಉಪಾಯವಾಗಿ ಮುಗಿಸುವ ರಾಣ ಸಂಚಾರದಲ್ಲಿ ಅತಿವೇಗ ಕಂಡು ಕೊಂಡವನು.. ಹಾಡುತ್ತಾ ಕುಣಿಯುತ್ತಾ ನಲಿಯುವ ಆತ ಸಾಹಸದ ವಿಷಯಕ್ಕೆ ಬಂದರೆ ಅಸಾಮಾನ್ಯ.
ಕೆ.ಮಂಜು ಪುತ್ರ ಶ್ರೇಯಸ್ ಹಾಡು, ಫೈಟ್ ಹಾಗೂ ಅಭಿನಯದಲ್ಲಿ ಸೈ ಎನಿಸಿಕೊಳ್ಳಲು ಸಿಕ್ಕಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ನಾಯಕ ನಟನ ಪ್ರವೇಶವಾಗಿದೆ.
ನಂದ ಕಿಶೋರ್ ಅನುಭವಿ ನಿರ್ದೇಶಕ ರಾಗಿ ಎಲ್ಲವನ್ನೂ ನಿಭಾಯಿಸಿದ್ದರೂ ಕಥೆಯ ವಿಚಾರದಲ್ಲಿ ಇನ್ನೊಂದಿಷ್ಟು ತಲೆ ಕೆಡಿಸಿಕೊಳ್ಳಬಹುದಿತ್ತು ಎಂಬ ಅಭಿಪ್ರಾಯ ಸುಳಿಯುತ್ತದೆ.
ಚೆಂದನ್ ಶೆಟ್ಟಿ ಸಂಗೀತದಲ್ಲಿ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿದೆ.. ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.