ಹೊಸ ಮಾಯಾಲೋಕ
ಕಣ ಕಣವೂ ಆಧುನಿಕ
ಕಣ್ಣ ರೆಪ್ಪೆ ಮಿಟುಕಿಸದೇ ನೋಡುವ ಹಾತುರದಲ್ಲಿ ವಿಚಿತ್ರ ಜಗತ್ತು ತೆರೆದುಕೊಳ್ಳುತ್ತದೆ.. ಕೊಂಚ ಕಣ್ಣು ಮಿಟುಕಿಸಿದರೂ ಕ್ಯಾಮೆರಾ ಕಣ್ಣಿನ ವೈಭವ ಮಿಸ್ ಆಗುವ ನಿರಾಸೆ ಕಾಡುತ್ತದೆ..
ಅದು ಡೇವಿಡ್..!
ಬೆಂಗಳೂರೆಂಬ ಮಾಯಾಲೋಕ; ವ್ಯಾಪಾರ ಜಗತ್ತಿನ ಕೌತುಕ; ಹೊಸತನದ ನೆಲೆಯ ಆಕಸ್ಮಿಕ; ಎಲ್ಲವೂ ಆಡಂಬರ ಮತ್ತು ಆಧುನಿಕ.
ಶರ್ಮಾ ಗ್ರೂಪ್ ಆಫ್ ಕಂಪನಿಯ ಮಾಲೀಕ ಜಾಗತಿಕ ಮಟ್ಟದ ಶ್ರೀಮಂತ. ಆತನ ಮಗಳು ಸ್ನಿಗ್ಧ ಸುಂದರಿ. ಶರ್ಮಾ ಕೊಲೆಯಾಗುತ್ತದೆ ಮಗಳು ಅಪಹರಿಸಲ್ಪಡುತ್ತಾಳೆ.
ಈ ಎರಡು ಘಟನೆ ಕೇಂದ್ರೀತ ಕಥೆಯಲ್ಲಿ ಕಾಣುವುದೆಲ್ಲಾ ಅಚ್ಚರಿಯ ಸ್ವರೂಪ. ಪೂರ್ವಾರ್ಧದಲ್ಲಿ ಹುಡುಗರ ಆಟ ಬೊಂಬಾಟ; ಉತ್ತರಾರ್ಧದಲ್ಲಿ ಕೊಲೆಗಾರನ ಬೇಟೆಯಾಡುವ ಕದನ ಕೌತುಕ.
ಆಧುನಿಕತೆಯನ್ನು ಮೈದುಂಬಿಕೊಂಡ ರ್ಯಾಪ್ ಹುಡುಗರ ತಮಾಷೆಯ ಗುಂಪು ಜಾಲಿ ಮಾಡುವ ಹುಚ್ಚಾಟದಲ್ಲಿ ಅಪಾಯ ಕಟ್ಟಿಕೊಳ್ಳುತ್ತದೆ. ಮತ್ತೊಂದು ಜಾಲಿಯಾಟವನ್ನೇ ಮೈದುಂಬಿಕೊಂಡ ಗುಂಪು ಹಣದ ಸಲುವಾಗಿ ಕಿಡ್ನ್ಯಾಪ್ ನಂತಹ ಅಪಾಯಕ್ಕೆ ಕೈ ಹಾಕುತ್ತದೆ.
ಆಗ ಪ್ರವೇಶ ಪಡೆಯುವುದು ಗೌತಮ..! ಬುದ್ಧಿಶಕ್ತಿಯ ಜೊತೆಗೆ ದೇಹವನ್ನೂ ಹುರಿಗೊಳಿಸಿಕೊಂಡ ವ್ಯಕ್ತಿತ್ವ. ಗೌತಮನು ಶರ್ಮಾ ಕೊಲೆ ಮತ್ತು ಅವರ ಮಗಳ ಅಪಹರಣ ಒಟ್ಟಿಗೆ ಹೇಗೆ ಭೇದಿಸುತ್ತಾನೆ ಎಂಬುದೇ ಕಥಾವಸ್ತು.
ಪೂರ್ವಾರ್ಧ ಹೇಗೋ ತಮಾಷೆಯಾಗಿ ಕಳೆದು ಹೋದರೆ.. ಉತ್ತರಾರ್ಧದಲ್ಲಿ ಕ್ಷಣ ಕ್ಷಣವೂ ಕುತೂಹಲ. ಜೊತೆಗೆ ಕಣ್ಣಿಗೆ ಕೆಲಸ ಕೊಡುವ ಕಸೂರಿ ಕೆಲಸದ ಕ್ಯಾಮೆರಾ ಮತ್ತು ಮನಸ್ಸಿಗೆ ಮುದ ನೀಡುವ ಅಬ್ಬರದ ಸಂಗೀತವೇ ಚಿತ್ರದ ಮುಖ್ಯಾಂಶಗಳು. ಹಾಗಾಗಿ ಚಿತ್ರ ಮುಗಿಯುವುದೇ ಗೊತ್ತಾಗದ ಆವೇಗ..!
ಶ್ರೇಯಸ್ ಚಿಂಗಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ನಿರ್ದೇಶನವೂ ಅವರದೇ. ಅದರಲ್ಲಿ ಭಾರ್ಗವ ಜೊತೆಗೂಡಿದ್ದಾರೆ. ಅವಿನಾಶ್, ದಿವಂಗತ ಬುಲೆಟ್ ಪ್ರಕಾಶ್, ಪ್ರತಾಪ್ ನಾರಾಯಣ್, ರಾಕೇಶ್ ಅಡಿಗ, ಸಾರಾ ಹರೀಶ್, ಕಾವ್ಯ ಶಾ ಮೊದಲಾದವರು ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಹಾಲಿವುಡ್ ಛಾಯಾಗ್ರಾಹಕ ಸ್ಟೀವ್ ರೈಸ್ ಹಾಗೂ ದೇವೇಂದ್ರ ನಾಯ್ಡು ಕ್ಯಾಮೆರಾ ಕರಾಮತ್ತು ಎದ್ದು ಕಾಣುತ್ತದೆ. ಹಾಗೆಯೇ ಸತೀಶ್ ಬಾಬು ಹಿನ್ನೆಲೆ ಸಂಗೀತವೂ ಚಿತ್ರದ ಅಬ್ಬರವನ್ನೇ ಹೆಚ್ಚಿಸಿದೆ.
ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಾಪಕ. ಕೊರೊನಾ ಪೂರ್ವದ ಈ ಚಿತ್ರ ಮತ್ತೆ ಮರುಜೀವ ಪಡೆಯಲು ಸಹಕಾರ ದೊರೆತಿರುವುದು ಶಾಸಕ ಬಿ.ವೈ.ವಿಜಯೇಂದ್ರ ಹಾಗೂ ಉದ್ಯಮಿ ಧನರಾಜ ಬಾಬು ಅವರ ಸಹಕಾರದಿಂದ. ಜೊತೆಗೆ ಧನರಾಜ ಬಾಬು ಚಿತ್ರದ ತಾಂತ್ರಿಕ ವಿಷಯದಲ್ಲಿ ಪ್ರತಿ ಹಂತದಲ್ಲಿಯೂ ಸಹಕಾರ ನೀಡಿರುವುದೂ ಕಾಣುತ್ತದೆ.
ಒಂದು ವಿಶೇಷ ಅನುಭಾವಕ್ಕಾಗಿ ‘ಡೇವಿಡ್’ ನೋಡಬಹುದು..