ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ನಟನೆಯ ಯೋಗರಾಜ್ ಭಟ್ ನಿರ್ದೇಶನ ಹಾಗೂ ಧೀರ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರವೀಗ ಚಿತ್ರೀಕರಣ ಮುಗಿಸುವ ಹಂತದಲ್ಲಿದೆ.
ಅದೇ ಕರಟಕ ದಮನಕ..!
ಇದು ಎರಡು ಬುದ್ಧಿವಂತ ನರಿಗಳು ಅಥವಾ ಕುತಂತ್ರಿ ನರಿಗಳ ಹೆಸರು. ಚಿತ್ರದಲ್ಲಿ ಶಿವಣ್ಣ ಪ್ರಭುದೇವ ಹೂಡುವ ಆಟಗಳು ಈ ನರಿಗಳ ಹೆಸರನ್ನು ನೆನಪಿಸುತ್ತವೆ ಎಂಬುದು ಭಟ್ಟರ ಸ್ಪಷ್ಟನೆ.
ಹೇಳಿ ಕೇಳಿ ಇದು ರಾಕ್ ಲೈನ್ ವೆಂಕಟೇಶ್ ಅವರ ಬ್ಯಾನರ್. ಹಾಗಾಗಿ ಅದ್ದೂರಿತನಕ್ಕೆ ಕೊರತೆಯೇ ಇಲ್ಲ. ಒಂದು ಅತ್ಯುತ್ತಮ ಮನರಂಜನಾ ಚಿತ್ರವಾಗಿ ಕರಟಕ ದಮನಕ ನಿಲ್ಲುತ್ತದೆ ಎಂಬ ಆತ್ಮವಿಶ್ವಾಸದಲ್ಲಿತ್ತು ಚಿತ್ರತಂಡ.
ಕಳೆದ ಮಂಗಳವಾರ ರಾಕ್ ಲೈನ್ ಸ್ಟುಡಿಯೋ ಆವರಣದಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯುವಾಗಲೇ ಮಾಧ್ಯಮಗಳನ್ನು ಬರಮಾಡಿಕೊಂಡು ಮಾತಿಗೆ ಕುಳಿತಿತ್ತು ಚಿತ್ರತಂಡ.
ಸಾಮಾನ್ಯವಾಗಿ ಇಬ್ಬರು ಹೆಚ್ಚಿನ ಸಮಯ ಜೊತೆಗೆ ಕಳೆಯುವವರನ್ನು ಕರಟಕ ದಮನಕ ಎಂದು ಕರೆಯುವುದುಂಟು. ಇದು ಪಂಚತಂತ್ರದಲ್ಲಿ ಸಿಗುವ ನರಿಗಳ ಹೆಸರು ಎಂದು ಸ್ಪಷ್ಟನೆ ಕೊಟ್ಟರು ಯೋಗರಾಜ್ ಭಟ್.
ಚಿತ್ರ ಆರಂಭವಾಗಿ ಒಂದು ವರ್ಷವಾಯಿತು. ಚಿತ್ರೀಕರಣ ಇನ್ನೇನು ಮುಗಿಯುತ್ತದೆ. ಈ ಸಂದರ್ಭದಲ್ಲಿ ಶಿವಣ್ಣ ಮತ್ತು ಪ್ರಭುದೇವ ಅವರ ಸಹಕಾರ ಮರೆಯುವಂತಿಲ್ಲ. ಅವರಿಬ್ಬರ ಎನರ್ಜಿ ನೋಡಿ ನಾನು ಬೆರಗಾಗಿರುವೆ ಎಂದರು.
ರಾಕ್ ಲೈನ್ ವೆಂಕಟೇಶ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಕೇಳಿದ್ದನ್ನು ಕೊಟ್ಟಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿವೆ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ ಎಂದು ಹೇಳುತ್ತಾ ಹೋದರು ಭಟ್ಟರು.
ಶಿವಣ್ಣ ಮತ್ತು ಪ್ರಭುದೇವ ಅವರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು ಹಾಗೂ ತನಿಕೆಲ್ಲಾ ಭರಣಿ ಅವರಂತಹ ಹಿರಿಯ ನಟರು ಚಿತ್ರದಲ್ಲಿರುವುದು ವಿಶೇಷ ಎಂಬ ಮಾಹಿತಿಗಳು ಬಂದವು.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಬಣ್ಣ ಹಚ್ಚಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಶಿವಣ್ಣ ಅವರ ಚಿತ್ರ ಮಾಡಿ ಬಹಳ ವರ್ಷಗಳಾಗಿತ್ತು. ಜೊತೆಗೆ ಪ್ರಭುದೇವ ಅವರಿಗೆ ಚಿತ್ರ ಮಾಡಬೇಕು ಎಂಬುದು ಕನಸಾಗಿತ್ತು. ಅದೆಲ್ಲವೂ ಭಟ್ಟರ ಮೂಲಕ ಕೂಡಿ ಬಂತು ಎಂದರು ರಾಕ್ ಲೈನ್ ವೆಂಕಟೇಶ್
ರಾಕ್ ಲೈನ್ ಪ್ರೊಡಕ್ಷನ್ಸ್ ನನ್ನ ಕುಟುಂಬವಿದಂತೆ. ಯೋಗರಾಜ್ ಭಟ್ ಚಿತ್ರಗಳು ಇಷ್ಟ. ಗೆಳೆಯ ಪ್ರಭುದೇವ ಹಾಗೂ ನಾನು ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದೇವೆ ಎಂಬುದು ಖುಷಿಯ ವಿಷಯ ಎಂದರು ಶಿವರಾಜ್ ಕುಮಾರ್.
ಶಿವರಾಜ್ ಕುಮಾರ್ ಅವರ ಎನರ್ಜಿ ನೋಡಿದರೆ ಖುಷಿಯಾಗುತ್ತದೆ. ಅವರ ಜೊತೆ ನಟಿಸುತ್ತಿರುವುದು ಹೆಚ್ಚಿನ ಸಂತಸ ತಂದಿದೆ ಎಂದರು ಪ್ರಭುದೇವ.
ಹಳೆಯದು ಹಾಗೂ ಹೊಸದನ್ನು ಬೆಸೆದು ಮಾತನಾಡಿ ಖುಷಿ ಪಡಿಸಿದರು ಮುಖ್ಯಮಂತ್ರಿ ಚಂದ್ರು.