* ಮೈಸೂರಿನಲ್ಲಿ 18ರಂದು ಅದ್ದೂರಿ ಮೆರವಣಿಗೆ
* ಸಲ್ಮಾನ್-ಶಿವಣ್ಣ ಅಪರೂಪದ ಕ್ಷಣ
* ಸಂದೇಶ ಪ್ರೊಡಕ್ಷನ್ ಚಿತ್ರ ಘೋಸ್ಟ್
ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಪ್ಯಾನ್ ಇಂಡಿಯಾ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ.
ಅದೇ ಘೋಸ್ಟ್..!
ಸಂದೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸಿರುವ ಚಿತ್ರ ಘೋಸ್ಟ್ ಇದೇ ಅಕ್ಟೋಬರ್ 19ರಂದು ಬಿಡುಗಡೆ ಕಾಣುತ್ತಿದೆ.
ಹಾಗಾಗಿ ಶಿವಣ್ಣ ಮುಂಬೈ ಯಾತ್ರೆ ಕೈಗೊಂಡಿದ್ದು, ಶನಿವಾರ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭಾರತ-ಪಾಕ್ ಕ್ರಿಕೆಟ್ ವಿಷಯದಲ್ಲಿ ಇಬ್ಬರೂ ಕುತೂಹಲಿಗಳಾಗಿ ಮಾತನಾಡಿದ್ದಾರೆ.
ಈ ಚಿತ್ರಕ್ಕೆ ಶುಭಕೋರಿ ಅಕ್ಟೋಬರ್ 18ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ದೂರಿ ಮೆರವಣಿಗೆ ನಡೆಯಲಿದೆ.
ಜ್ವಾಲಾಮುಖಿ ಡಾ.ರಾಜಕುಮಾರ್ ಅಭಿಮಾನಿಗಳ ಬಳಗ ಈ ಅದ್ದೂರಿ ಮೆರವಣಿಗೆ ಆಯೋಜಿಸಿದೆ. ಡೋಲು, ನಗಾರಿ, ಕೇರಳದ ಚಂಡೆ, ತಮಟೆ ಮೊದಲಾದ ವಾದ್ಯಗಳು, ಜಾನಪದ ಕಲಾ ತಂಡಗಳು, ನೂರೈವತ್ತಕ್ಕೂ ಹೆಚ್ಚು ಆಟೋಗಳಲ್ಲಿ ನಕ್ಷತ್ರಗಳು ಈ ಮೆರವಣಿಗೆಯ ಪ್ರಮುಖ ಆಕರ್ಷಣೆ. ಸಾವಿರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೈಸೂರಿನ ಇಟ್ಟಿಗೆಗೂಡಿನಿಂದ ಆರಂಭವಾಗುವ ಮೆರವಣಿಗೆ ಡಿಸಿ ಕಛೇರಿ ಮೂಲಕ ಸಾಗಿ ವುಡ್ ಲ್ಯಾಂಡ್ಸ್ ಚಿತ್ರಮಂದಿರ ತಲುಪಲಿದೆ. ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್, ನಿರ್ಮಾಪಕರಾದ ಸಂದೇಶ್ ಹಾಗೂ ಇತರರು ಈ ಅದ್ದೂರಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಮೈಸೂರಿನಲ್ಲಿ ಈಗ ದಸರಾ ಸಡಗರ. ಅದರೊಂದಿಗೆ ‘ಘೋಸ್ಟ್’ ಚಿತ್ರ ಸಹ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.