ನಿರ್ಮಾಪಕ ಎಂ.ಎನ್.ಕುಮಾರ್ ಹಾಗೂ ನಟ ಸುದೀಪ್ ಅವರ ನಡುವಿನ ಸಿನಿಮಾ ಬದ್ಧತೆ ವಿಷಯದಲ್ಲಿ ನಡೆಯುತ್ತಿರುವ ಜಟಾಪಟಿ ಈಗ ತಣ್ಣಗಾಗುವ ಲಕ್ಷಣ ಕಾಣುತ್ತಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯುವ ಸಮಾಲೋಚನೆ ನಡೆದಿದೆ.
ಸ್ಟಾರ್ ನಟ ಕಿಚ್ಚ ಸುದೀಪ್ ನ್ಯಾಯಾಲಯದ ಮೊರೆ ಹೋದ ಬಳಿಕ ನಿರ್ಮಾಪಕ ಎಂ.ಎನ್.ಕುಮಾರ್ ಬೇರೆ ದಾರಿ ಹುಡುಕಿಕೊಂಡು ವಾಣಿಜ್ಯ ಮಂಡಳಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿದ್ದರು.
ಸುದೀಪ್ ಜೊತೆ ಸಿನಿಮಾ ಮಾಡುವ ಬದ್ಧತೆ ವಿಷಯದಲ್ಲಿ ಅಸಹಕಾರ ತೋರುತ್ತಿದ್ದಾರೆ. ಸಿನಿಮಾ ಬದ್ಧತೆಯನ್ನು ಗೌರವಿಸಿ ಎಂದು ಎಂ.ಎನ್.ಕುಮಾರ್ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದ್ದರು.
ಹಾಗೆಯೇ ವಾಣಿಜ್ಯ ಮಂಡಳಿಗೂ ಪತ್ರ ಬರೆದಿದ್ದರು. ಈ ವಿಷಯ ಬೆಳೆದು ಬೆಳೆದು ದೊಡ್ಡದಾಗುವ ಹೊತ್ತಿಗೆ ವಿಷಯದೊಳಕ್ಕೆ ಜಾಕ್ ಮಂಜು, ರೆಹಮಾನ್ ಇತರರು ಪ್ರವೇಶ ಪಡೆದಿದ್ದರು.
ವಿಷಯ ಜಟಾಪಟಿ ಹಂತಕ್ಕೂ ತಲುಪಿತು. ಸುದೀಪ್ ಸಹ ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದರು ಮಾತ್ರವಲ್ಲ; ಎಂ.ಎನ್.ಕುಮಾರ್ ವಿರುದ್ಧ ನ್ಯಾಯಾಲಯದ ಮೊರೆ ಹೋದರು.
ಆಗ ಕುಮಾರ್ ಅವರು ವಾಣಿಜ್ಯ ಮಂಡಳಿ ಆವರಣದಲ್ಲಿ ಪ್ರತಿಭಟನಾ ಧರಣಿ ಕುಳಿತರು. ಇದಕ್ಕೆ ನಿರ್ಮಾಪಕರ ಹಾಗೂ ಚಿತ್ರರಂಗದ ಇತರ ವಲಯಗಳಿಂದ ಬೆಂಬಲ ವ್ಯಕ್ತವಾಯಿತು.
ಇದೇ ವೇಳೆ ಚಿತ್ರರಂಗದಲ್ಲಿ ಹಿರಿಯರಾದ ವಿ.ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಅವರಿಗೆ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಸಂಧಾನ ನಡೆಸುವಂತೆ ಮಾಡಿದ ಮನವಿಗೆ ಈ ಇಬ್ಬರು ಸ್ಟಾರ್ ನಟರು ಮಾತುಕತೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಈಗ ವಾತಾವರಣ ತಿಳಿಯಾಗಿದ್ದು, ಎಂ.ಎನ್.ಕುಮಾರ್ ಪ್ರತಿಭಟನೆಯಿಂದ ಹಿಂದೆ ಸರಿಯುವ ಆಲೋಚನೆ ಮಾಡಿದ್ದಾರೆ.