ಸಿನಿಮಾ ಜಗತ್ತು ತನ್ನ ವಿಶಾಲ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿಕೊಂಡಿದೆ. ಹಾಗಾಗಿ ಮಕ್ಕಳ ಚಿತ್ರವೂ ಐದು ಭಾಷೆಗಳಲ್ಲಿ ಮೂಡಿ ಬರುತ್ತಿದೆ.
ಅದು ಲಿಲ್ಲಿ..!
ಶಿವಂ ನಿರ್ದೇಶನದ ಈ ಚಿತ್ರ ಮೊದಲ ಪ್ಯಾನ್ ಇಂಡಿಯಾ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.
ಮೂಲವಾಗಿ ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಕಾಣುತ್ತಿದೆ.
ಸದ್ಯದಲ್ಲಿಯೇ ಬಿಡುಗಡೆಯ ಆಶಯ ಹೊಂದಿರುವ ಚಿತ್ರತಂಡವು ಚಿತ್ರದ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಿತು. ಇದೇ ವೇಳೆ ಚಿತ್ರದ ಟೀಸರ್ ಹಾಗೂ ಪೋಸ್ಟರ್ ನ್ನು ಬಿಡುಗಡೆಗೊಳಿಸಲಾಯಿತು. ಕನ್ನಡದ ಹೆಸರಾಂತ ನಟಿ ರಾಗಿಣಿ ದ್ವಿವೇದಿ ಚಿತ್ರ ತಂಡಕ್ಕೆ ಆಸರೆಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಚಿತ್ರವು ಮಕ್ಕಳ ಚಿತ್ರ ಎಂಬುದಕ್ಕಿಂತ ಭಾವನಾತ್ಮಕ ಸನ್ನಿವೇಶಗಳ ಮೂಲಕ ನೋಡುಗರ ಹೃದಯವನ್ನು ಕದಡುತ್ತದೆ. ಹಾಗಾಗಿ ಇದು ಮಣಿರತ್ನಂ ಅವರ ‘ಅಂಜಲಿ’ಯನ್ನು ನೆನಪಿಸುತ್ತದೆ ಎಂಬ ವಿವರಣೆಯನ್ನು ಹಿರಿಯರು ನೀಡಿದ್ದಾರೆ ಎಂದರು ನಿರ್ದೇಶಕ ಶಿವಂ.
ಎಲ್ಲದಕ್ಕಿಂತ ಮಾನವೀಯತೆ ದೊಡ್ಡದು. ಈ ಚಿತ್ರದಲ್ಲಿ ಮಾನವೀಯ ಗುಣಗಳ ಅಂಶಗಳಿವೆ. ಹಾಗಾಗಿ ನನಗೆ ಇಷ್ಟವಾಗಿದೆ ಎಂದರು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ.
ತೆಲುಗಿನಲ್ಲಿ ನಿರ್ಮಾಪಕರಾಗಿರುವ ಶಿವಕೃಷ್ಣ, ಚಿತ್ರದ ಬಗ್ಗೆ ವಿವರ ನೀಡುತ್ತಲೇ ವರನಟ ಡಾ.ರಾಜ್ ಕುಮಾರ್ ಅವರನ್ನು ಕೊಂಡಾಡಿದರು. ಪುನೀತ್ ಅವರದು ದೊಡ್ಡ ವ್ಯಕ್ತಿತ್ವ ಎಂದರು.
ಹಿಂದುಸ್ತಾನ್ ಗೋಲ್ಡ್ ಕಂಪನಿಯ ಮಾಲೀಕರಾದ ಮೌಲಾನ ಷರೀಪ್ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸಹ ಮಕ್ಕಳ ಚಿತ್ರದ ಅನಿವಾರ್ಯತೆಗಳ ಕುರಿತು ಮಾತನಾಡಿದರು.
ನಿರ್ಮಾಪಕ ಕೆ.ಬಾಬುರೆಡ್ಡಿ, ನಟ ರಾಜ್ ವೀರ್, ಪುಟಾಣಿಗಳಾದ ನೇಹಾ, ವೇದಾಂತ ವರ್ಮಾ ಹಾಗೂ ಪ್ರಣತಿ ರೆಡ್ಡಿ ಮುಗ್ಧ ನಗೆ ಬೀರಿ ತಮ್ಮ ಪಾತ್ರಗಳ ವಿವರ ಕೊಟ್ಟರು.
ಛಾಯಾಗ್ರಾಹಕ ಎಸ್.ರಾಜ್ ಕುಮಾರ್ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.