ನಗುವಿನ ಕಾರಂಜಿ ಈ ತಿನಿಸು
ಹುಡುಗಾಟವೇ ಬದುಕು ಎಂದುಕೊಂಡರೇ.. ಒಂದಲ್ಲ ಒಂದು ದಿನ ಅದು ಬೀದಿಗೆ ತಂದು ನಿಲ್ಲಿಸುತ್ತದೆ.. ಅಮಾಯಕತೆಯ ಅರಿವಿರದಿದ್ದರೆ ದುರುಪಯೋಗ ಪಡಿಸಿಕೊಳ್ಳುವವರು ಯಥೇಚ್ಛವಾಗಿ
ಸಿಗುತ್ತಾರೆ..
ಹುಡುಗಾಟ ಮತ್ತು ಅಮಾಯಕತೆ ಇರುವ ಹುಡುಗನೊಬ್ಬ ಸಾಂದರ್ಭಿಕ ವಾಗಿ ಅನುಭವಿಸುವ ಮಜಾ ಮತ್ತು ಯಾತನೆಯ ಕಥೆಯನ್ನು ಲವಲವಿಕೆಯಿಂದ ನಿರೂಪಿಸಲಾಗಿದೆ..
ಸಂತೋಷ್ ಹುಟ್ಟುತ್ತಲೇ ರಸಿಕತನ ಮೈಗೂಡಿಸಿಕೊಂಡವನು; ಅಪ್ಪ ಕೈಗೆ ಬರೆ ಹಾಕದಿದ್ದರೆ, ಏಳನೇ ತರಗತಿಗೆ ಹಸೆಮಣೆ ಏರಿ ಮದುವೆಯಾಗಿ ಬಿಡುತ್ತಿದ್ದವನು. ಅವನ ರಸಿಕತೆಯ ಓಟ ನಿಜವಾಗಿ ಆರಂಭವಾಗುವುದು ಆತನಿಗೆ ಮದುವೆ ಗೊತ್ತಾದ ಮೇಲೆ ಅದೂ ಬೇರೆ ಹುಡುಗಿಯ ಜೊತೆ..
ಐಟಿ ಉದ್ಯೋಗಿ ಸಂತೋಷ್ ಸ್ನೇಹಿತರ ಮೆಚ್ಚಿನ ಕಿಲಾಡಿ.. ಆದರೆ ಹೊರಗಿನ ಪ್ರಪಂಚದ ಅರಿವಿಲ್ಲ; ಹಾಗಾಗಿ ಅವನ ಅಮಾಯಕತೆಯು ಅಸಹಾಯಕ ಹುಡುಗಿಯೊಬ್ಬಳಿಂದ ದುರುಪಯೋಗವಾಗುತ್ತದೆ..
ವಿಶಾಲ ಹೃದಯಿ ಹುಡುಗ ಸುಮ್ ಸುಮ್ ನೇ ಸಿಕ್ಕಿ ಕೊಂಡು ಪೆಚ್ಚು ಪೇಚಾಗಿ ನಡೆದುಕೊಳ್ಳುತ್ತಾನೆ. ಅಪ್ಪ ಅಮ್ಮನೆದುರು ನಟಿಸುತ್ತಾನೆ. ಮದುವೆ ಗೊತ್ತಾದ ಹುಡುಗಿಯ ಬದಲಾವಣೆಗೆ ಸ್ಪಂದಿಸಿ ಖುಷಿಯ ದಿನಗಳನ್ನು ಕಳೆಯುವುದು ಅವನಿಂದ ಸಾಧ್ಯವಾಗುವುದಿಲ್ಲ;
ಹಾಗಿರುತ್ತದೆ ಸುತ್ತ ಹೆಣೆದ ಬಲೆ..
ಸಂತೋಷ್ ಮಾವ ಮಾತಿನಲ್ಲೇ ಊರು ಸುತ್ತಿಸುವವನು ಅವನ ಮಾತಿಗೆ ಪ್ರೇಕ್ಷಕ ಬಿದ್ದು ಬಿದ್ದು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಳ್ಳುತ್ತಾನೆ. ಉಳಿದ ಪಾತ್ರಗಳೂ ಅದಕ್ಕೆ ಸ್ಪಂದಿಸುವುದರಿಂದ ನಗೆಯ ಬುಗ್ಗೆಯೇ ಹರಿಯುತ್ತದೆ..
ಮಕ್ಕಳ ಚೆಲ್ಲಾಟ ಅಪ್ಪ ಅಮ್ಮನ ಮರ್ಯಾದೆ ತೆಗೆಯುತ್ತದೆ ಎಂಬುದು ಒಂದು ಕಡೆಗಾದರೆ; ಅಮಾಯಕ ಹುಡುಗ ಪ್ರೇಮದ ತೀವ್ರತೆಯಲ್ಲಿ ಬೇಯುವುದು ಇನ್ನೊಂದು ಕಡೆ..
ಆಧುನಿಕ ಬದುಕಿನ ಶೈಲಿಯಲ್ಲಿ ಇವೆಲ್ಲಾ ಹೇಗೆ ಗಂಟು ಹಾಕಿಕೊಳ್ಳುತ್ತವೆ ಎಂಬುದನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ ನಿರ್ದೇಶಕ ಶಿವ ತೇಜಸ್..
ಅಮಾಯಕ ಹುಡುಗನಾಗಿ ಡಾರ್ಲಿಂಗ್ ಕೃಷ್ಣ ಅವರದು ಅದ್ಭುತ ನಟನೆ. ಹಾಗೆಯೇ ಯಾಮಾರಿಸುವ ಹುಡುಗಿ ನಿಶ್ವಿಕಾ ನಾಯ್ಡು ಹಾಗೂ ಮದುವೆ ಗೊತ್ತಾದ ಹುಡುಗಿ ಮೇಘ ಶೆಟ್ಟಿ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ..
ಮಾತಿನಲ್ಲೇ ನಗುವಿನ ಬುಗ್ಗೆ ಹರಿಸುವ ಪಾತ್ರ ತಬಲಾ ನಾಣಿ ಅವರದು.. ಮಾವನ ಪಾತ್ರದಲ್ಲಿ ಅವರ ನಟನೆ ಅದ್ಭುತ. ಐಟಿ ಕಂಪನಿ ಬಾಸ್ ಆಗಿ ಸಾಧು ಕೋಗಿಲ ಪಾತ್ರ ಎಂದಿನಂತೆ.. ಇನ್ನೂ ಅಪ್ಪನ ಪಾತ್ರದಲ್ಲಿ ರಂಗಾಯಣ ರಘು ಮನೋಜ್ಞವಾಗಿ ನಟಿಸಿದ್ದಾರೆ.
ಶೇಖರ್ ಚಂದ್ರ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಜ್ಯೂಡೋಸ್ಯಾಂಡಿ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ.
ಮನರಂಜನಾ ಚಿತ್ರವಾಗಿ ‘ದಿಲ್ ಪಸಂದ್’ ಖಂಡಿತಾ ಎಲ್ಲರಿಗೂ ಇಷ್ಟ ವಾಗುತ್ತದೆ..