* ಭಾಗ-1 ತೆರೆಗೆ ಸಿದ್ಧ *
* ಅಶೋಕ್ ಕಡಬ ನಿರ್ದೇಶನ *
* ಮೇಘಮಾಲೆ ಸುನಾದ್ ರಾಜ್ *
ವರನಟ ಡಾ.ರಾಜ್ ಕುಮಾರ್ ಅವರ ಮತ್ತೊಬ್ಬ ಮೊಮ್ಮಗ ಕನ್ನಡದ ಬೆಳ್ಳಿ ತೆರೆಯ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಅವರ ಮಗ ಷಣ್ಮುಖ ಗೋವಿಂದ್ ರಾಜ್ ಈಗ ತೆರೆಯ ಮೇಲೆ ರಾರಾಜಿಸಲು ಸಂಪೂರ್ಣ ಸಜ್ಜುಗೊಂಡಿದ್ದಾರೆ.
ಏಕೆಂದರೆ ಷಣ್ಮುಖ ಅಭಿನಯದ ‘ನಿಂಬಿಯಾ ಬನಾದ ಮ್ಯಾಗ’ ಎಂಬ ಶೀರ್ಷಿಕೆ ಇರುವ ಚಿತ್ರದ ಮೊದಲ ಭಾಗ ಈಗ ಬಿಡುಗಡೆಗೆ ಸಜ್ಜಾಗಿದೆ.
ಅಶೋಕ್ ಕಡಬ ಈ ಚಿತ್ರದ ನಿರ್ದೇಶಕರು ಮತ್ತು ವಿ.ಮಾದೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ವಿಶೇಷ ಕಥಾವಸ್ತು ಹೊಂದಿರುವ ‘ಸತ್ಯಂ’ ಹಾಗೂ ಇತರ ಚಿತ್ರಗಳನ್ನು ನಿರ್ದೇಶನ ಮಾಡಿರುವ ಅಶೋಕ್ ಕಡಬ ನಿರ್ದೇಶನದ ‘ನಿಂಬಿಯಾ ಬನಾದ ಮ್ಯಾಗ’ ಎಂಬ ಫ್ಯಾಮಿಲಿ ಡ್ರಾಮ ಎರಡು ಭಾಗಗಳಾಗಿ ಸಿನಿ ರಸಿಕರನ್ನು ರಂಜಸಲಿದ್ದು, ಮೊದಲ ಭಾಗ ಈಗ ಬಿಡುಗಡೆಯ ಹಾದಿಯಲ್ಲಿದೆ.
ಎಂಜೀಪಿ ಎಕ್ಸ್. ಎಂಟರ್ ಪ್ರೈಸೆಸ್ ನ ಬ್ಯಾನರ್ ನಡಿ ವಿ ಮಾದೇಶ್ ಈ ಚಿತ್ರವನ್ನು ನಿರ್ಮಿಸಿದ್ದು, ಬಿಡುಗಡೆಗೆ ಮುನ್ನವೇ ಚಿತ್ರವು ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ.
ರಾಜ್ ಸುಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರ ‘ನಂಜುಂಡಿ ಕಲ್ಯಾಣ’ ಚಿತ್ರವು ಫ್ಯಾಮಿಲಿ ಡ್ರಾಮ ಕಥಾವಸ್ತು ಹೊಂದಿತ್ತು ಮಾತ್ರವಲ್ಲ ಹಲವು ದಾಖಲೆಗಳನ್ನು ನಿರ್ಮಿಸಿತ್ತು.
ಈಗ ಪ್ರೇಕ್ಷಕರನ್ನು ನಕ್ಕು ನಗಿಸಲು ಬರುತ್ತಿರುವ ಈ ಚಿತ್ರದ ಬಗ್ಗೆ ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಹಾಗೂ ಕುಟುಂಬ ಅಪಾರ ಭರವಸೆಗಳನ್ನು ಹೊಂದಿದೆ.
ನಿಂಬಿಯಾ ಬನಾದ ಮ್ಯಾಗ.. ಎಂಬ ಶೀರ್ಷಿಕೆಗೆ ಜಾನಪದ ಗೀತೆಯ ಸೊಗಡಿದೆ. ಅದೇ ರೀತಿ ಈ ಚಿತ್ರದ ಕಥೆಯೂ ಮನುಷ್ಯ ಸಂಬಂಧಗಳ ನೆಲೆ ಬೆಲೆಯನ್ನು ಅಭಿವ್ಯಕ್ತಗೊಳಿಸುತ್ತದೆ.
ಹಾಗಾಗಿ ಕನ್ನಡದ ಪ್ರೇಕ್ಷಕರಿಗೆ ಮನರಂಜನಾತ್ಮಕ ಕೌಟುಂಬಿಕ ಚಿತ್ರವೊಂದು ಎರಡು ಭಾಗಗಳ ರೂಪದಲ್ಲಿ ಮೇಲಿಂದ ಮೇಲೆ ಸಿಗಲಿದೆ.
ಈ ಹಿನ್ನೆಲೆಯಲ್ಲಿ ಈಗ ತಾನೆ ಬೆಳ್ಳಿ ತೆರೆಯ ಮೇಲೆ ಅದೃಷ್ಟ ಪರೀಕ್ಷೆಗೆ ನಿಂತಿರುವ ಷಣ್ಮುಖ ಗೋವಿಂದ ರಾಜು ತಮ್ಮ ಪಾತ್ರದ ಬಗ್ಗೆ ಖುಷಿಯ ಭಾವಗಳನ್ನು ಹೊಂದಿದ್ದಾರೆ ಹಾಗೂ ಮೊದಲ ಭಾಗವೇ ತಮಗೆ ಅಪಾರ ಯಶಸ್ಸು ತಂದು ಕೊಡುತ್ತದೆ ಎಂದು ನಂಬಿದ್ದಾರೆ.
ಮುಖ್ಯವಾಗಿ ಈ ಚಿತ್ರದಲ್ಲಿ ರಾಜ್ ಸಂಬಂಧಿ ‘ಮೇಘಮಾಲೆ’ ಖ್ಯಾತಿಯ ಸುನಾದ್ ರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುಮಾರ್ 25 ವರ್ಷಗಳ ಬಳಿಕ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ.
ನಿರ್ಮಾಪಕ ವಿ.ಮಾದೇಶ್ ಅವರಿಗೂ ಈ ಚಿತ್ರ ಹೆಮ್ಮೆಯ ಭಾವಗಳನ್ನು ಮೂಡಿಸಿದ್ದು, ರಾಜ್ ವಂಶದ ಕುಡಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.