ಸಂತೋಷ್ ಕುಮಾರ್ ನಿರ್ದೇಶನದ ‘ಕ್ಯಾಂಪಸ್ ಕ್ರಾಂತಿ’ ಟ್ರೈಲರ್ ಬಿಡುಗಡೆಗೊಂಡಿದ್ದು, ಚಿತ್ರವು ಈ ತಿಂಗಳ 24ರಂದು ಬಿಡುಗಡೆ ಕಾಣುತ್ತಿದೆ.
ಈ ಹಿಂದೆ ‘ಸ್ಟೂಡೆಂಟ್ಸ್’ ಹಾಗೂ ‘ಬಿಂದಾಸ್ ಗೂಗ್ಲಿ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಸಂತೋಷ್ಕುಮಾರ್ ಈಗ ‘ಕ್ಯಾಂಪಸ್ ಕ್ರಾಂತಿ’ ಮಾಡಲು ಹೊರಟಿದ್ದಾರೆ.
ಕಾಲೇಜು ಆವರಣದಲ್ಲಿ ನಡೆಯುವ ಘಟನಾವಳಿಗಳ ಸುತ್ತ ಕಥೆ ಇರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಎರಡು ಜೋಡಿಗಳಿವೆ. ಒಂದು ಆರ್ಯ ಹಾಗೂ ಆರತಿ ಮತ್ತು ಇನ್ನೊಂದು ಅಲಂಕಾರ್ ಮತ್ತು ಇಶಾನ..
ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಟ್ರೈಲರ್ ಹಾಗೂ ಎರಡು ಹಾಡುಗಳನ್ನು ಬಿಡುಗಡೆಗೊಳಿಸಿದರು.
ನಿರ್ದೇಶಕ ಸಂತೋಷ್ ನನ್ನ ಸಹೋದರಿಯ ಪುತ್ರ. ಚಿತ್ರ ನೋಡಿದ್ದೇನೆ. ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ. ಹೊಸ ಕಲಾವಿದರೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು ಚಿನ್ನೇಗೌಡರು.
ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ಬೆಳೆಯಲು ನಮ್ಮ ಮಾವ ಅವರೇ ಕಾರಣ ಎಂದು ಕೃತಜ್ಞತೆ ಅರ್ಪಿಸಿದರು ಸಂತೋಷ್ ಕುಮಾರ್. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯ ಅಗ್ನಿರಾಂಪುರ ಎಂಬ ಕಾಲ್ಪನಿಕ ಊರೊಂದರಲ್ಲಿ ನಡೆಯುವ ಕಥೆ ಇದು. ಕಾಲೇಜು ಹುಡುಗರು ಮಾಡುವ ಕ್ರಾಂತಿಯ ಸುತ್ತ ಇರುತ್ತದೆ ಎಂದರು.
ಇಲ್ಲಿ ಗಡಿ ಮತ್ತು ಸಮಸ್ಯೆಗಳಿಗೆ ಪರಿಹಾರವಿದೆ. ಸೌಹಾರ್ದ ಬದುಕಿನ ಚಿತ್ರಣವಿದೆ. ಇದೊಂದು ಯುವ ಜನರಿಗೆ ಇಷ್ಟವಾಗುವ ಮತ್ತು ಯುವ ಜನರಿಂದ ಸಂದೇಶ ಹೇಳಿಸುವ ಕಥೆ ಎಂದು ವಿವರಿಸಿದರು ಸಂತೋಷ್ ಕುಮಾರ್.
ಕಲಾವಿದರಾದ ಆರ್ಯ, ಆರತಿ,
ಇಶಾನಾ, ಅಲಂಕಾರ್ ಮಾತನಾಡಿ ಪಾತ್ರಗಳ ಬಗ್ಗೆ ವಿವರಿಸಿದರು. ನಾಲ್ಕು ಹಾಡುಗಳಿಗೆ ವಿ.ಮನೋಹರ್ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ.
ಪಿ ಕೆ ಹೆಚ್ ದಾಸ್ ಛಾಯಾಗ್ರಹಣ, ಕುಂಗ್ ಫು ಚಂದ್ರು ಸಾಹಸವಿದ್ದು, ಹಿರಿಯ ನಟ ಕೀರ್ತಿರಾಜ್, ಹನುಮಂತೇಗೌಡ, ಭವಾನಿ ಪ್ರಕಾಶ್, ಧನಂಜಯ್ ಇತರೆ ಪಾತ್ರಗಳಲ್ಲಿದ್ದಾರೆ ಎಂಬ ವಿವರಗಳು ಬಂದವು.