ಇದು ದೆವ್ವದ ಚಿತ್ರವೋ ಅಥವಾ ಮಾನವ ರೂಪದ ದೆವ್ವಗಳ ಕಥೆಯೋ ಎಂಬುದು ತಿಳಿದಿಲ್ಲ. ಆದರೆ ಚಿತ್ರದ ಹೆಸರು ‘ಘೋಸ್ಟ್’. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದಾರೆ..
ಸಂದೇಶ್ ನಾಗರಾಜ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀನಿ ನಿರ್ದೇಶನ ಮಾಡುತ್ತಿದ್ದಾರೆ.
ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ಬುಧವಾರ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮೊದಲ ಸನ್ನಿವೇಶಕ್ಕೆ ಗೀತಾ ಶಿವರಾಜಕುಮಾರ್ ಆರಂಭ ಫಲಕ ತೋರಿದರು. ಬೃಂದಾ ಜಯರಾಂ ಕ್ಯಾಮೆರಾ ಚಾಲನೆ ಮಾಡಿದರು.
ಚಿತ್ರಕ್ಕಾಗಿ ಮಿನರ್ವ ಮಿಲ್ ನಲ್ಲಿ 15 ರೀತಿಯ ಸೆಟ್ ಗಳನ್ನು ಹಾಗೂ ಮೈಸೂರಿನಲ್ಲಿ 4 ಸೆಟ್ ಗಳನ್ನು ಕಲಾ ನಿರ್ದೇಶಕ ಮೋಹನ್ ಬಿ ಕೆರೆ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಮಿನರ್ವ ಮಿಲ್ ನಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ಗಳ ನಿರ್ಮಾಣಕ್ಕೆ ಅಪಾರ ವೆಚ್ಚವಾಗಿದೆ ಎಂಬುದು ಮಾಹಿತಿ.
ನಿರ್ದೇಶಕ ಶ್ರೀನಿ ಅವರಿಗೆ ಈ ಹಿಂದೆ ‘ಓಲ್ಡ್ ಮಾಂಕ್’, ‘ಶ್ರೀನಿವಾಸ ಕಲ್ಯಾಣ’ ಮೊದಲಾದ ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವವಿದೆ. ಇದು ಅವರ ಐದನೇ ಚಿತ್ರ. ಮಾಸ್ತಿ, ಪ್ರಸನ್ನ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣವಿದೆ.
ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಇನ್ನಿತರ ತಾರಾಗಣದಲ್ಲಿದ್ದಾರೆ.