ಇದು ಸಿನಿಮಾದೊಳಗಿನ ಕಥೆ.. ಸಿನಿಮಾ ಮಾಡುವವರ ಕಥೆ ಮತ್ತು ನಿರ್ದೇಶಕರಾಗುವ ಹಂಬಲದಲ್ಲಿ ಪಡಬಾರದ ಪಾಡು ಅನುಭವಿಸುವವರ ಕಥೆ.. ಆದರೆ ಇದು ‘ಹರಿಕಥೆ ಅಲ್ಲ ಗಿರಿಕಥೆ’.
ಗಿರಿ ಎಂದ ತಕ್ಷಣ ಇದು ಪರ್ವತವೆಂದು ಭಾವಿಸಬೇಕಿಲ್ಲ; ಇದು ಕಥೆ ಬರೆದವರ ಮತ್ತು ಕಥಾ ನಾಯಕನ ಹೆಸರು..
ಸಂದೇಶ್ ಫಿಲ್ಸ್ಂ ಲಾಛನದಲ್ಲಿ ಎನ್.ಸಂದೇಶ್ ನಿರ್ಮಿಸಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಬಿಡುಗಡೆಯ ಹಾದಿಯಲ್ಲಿದೆ. ಜೂನ್ 23ರಂದು ಬಿಡುಗಡೆ ಕಾಣುತ್ತಿರುವ ಈ ಚಿತ್ರ ಮಾರಾಟದ ವಿಷಯದಲ್ಲಿ ಸೇಫ್ ಜೋನ್ ನಲ್ಲಿದೆ.
ಮಂಗಳವಾರ ಟ್ರೈಲರ್ ಜೊತೆಗೆ ಮಾಧ್ಯಮಗಳ ಮುಂದೆ ಬಂದಿದ್ದ ತಂಡ ಚಿತ್ರದ ಆಶಯಗಳನ್ನು ವಿವರಿಸಿತು. ರಿಷಬ್ ಶೆಟ್ಟಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರವನ್ನು ಕರಣ್ ಆನಂದ್ ಹಾಗೂ ಅನಿರುದ್ದ್ ಮಹೇಶ್ ನಿರ್ದೇಶನ ಮಾಡಿದ್ದಾರೆ.
ರಿಷಬ್ ಶೆಟ್ಟಿ ಇದ್ದಾರೆ ಎಂಬ ಕಾರಣದಿಂದಲೇ ಓಟಿಟಿ, ಡಬ್ಬಿಂಗ್ ಹಕ್ಕುಗಳು ಎಲ್ಲವೂ ಸುಲಭವಾಗಿ ಮಾರಾಟವಾಗಿವೆ. ನಿರ್ಮಾಪಕರು ಲಾಭದಲ್ಲಿಯೇ ಇದ್ದಾರೆ ಎಂಬ ವಿವರಗಳು ಬಂದವು.
ರಿಷಬ್ ಅವರ ಜೊತೆ ರಚನಾ ಇಂದರ್ ಹಾಗೂ ತಪಸ್ವಿನಿ ಪೂಣಚ್ಚ ನಟಿಸಿದ್ದಾರೆ. ತಪಸ್ವಿನಿ ಅವರಿಗೆ ರಿಷಬ್ ಪತ್ನಿಯ ಪಾತ್ರವಾದರೆ, ರಚನಾಗೆ ನಟಿಯಾಗಬೇಕೆಂಬ ಹಂಬಲದಲ್ಲಿರುವ ಹುಡುಗಿಯ ಪಾತ್ರ..
ದಿನೇಶ್ ಮಂಗಳೂರು ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಗಿರಿ ಕಥೆ ಬರೆದಿರುವ ಈ ಚಿತ್ರ ಸಂಪೂರ್ಣ ಮನರಂಜನೆ ತುಂಬಿಕೊಡುತ್ತದೆ ಎಂಬ ಮಾಹಿತಿಗಳು ಬಂದವು..
ಇಲ್ಲಿಯವರೆಗೆ ಅಪ್ಪ (ಸಂದೇಶ್ ನಾಗರಾಜ್) ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ. ಈ ಚಿತ್ರ ಲಾಕ್ ಡೌನ್ ಸಂದರ್ಭದಲ್ಲಿ ಆಗಿದ್ದು, ಉತ್ತಮವಾಗಿ ಮೂಡಿ ಬಂದಿದೆ ಮತ್ತು ನಮಗೆ ಗೆಲ್ಲುವ ಭರವಸೆ ಇದೆ ಎಂದರು ನಿರ್ಮಾಪಕ ಎನ್.ಸಂದೇಶ್.