‘ಚಿನ್ನದಂಥ ನಾಡಿಗೆ..
ರನ್ನದಂಥ ರಾಜ..
ರನ್ನದಂಥ ರಾಜನಿಗೆ
ಮುತ್ತಿನಂಥ ರಾಣಿ..
ಮುತ್ತಿನಂಥ ರಾಣಿ
ಹೆತ್ತ ಮಕ್ಕಳು ಏಳು..
ಏಳರಲ್ಲಿ ಯಾವುದೂ
ಏಳಿಗೆ ಇಲ್ಲ..’
ಈ ಹಾಡು ಗುನುಗುವಾಗಲೇ ಕನ್ನಡ ಚಿತ್ರಗಳ ಪರಿಸ್ಥಿತಿ ಕೂಡ ನೆನಪಾಗತೊಡಗಿತು..
ಈಗೇನಿದ್ದರೂ ವಾರಕ್ಕೆ ಏಳಕ್ಕಿಂತ ಹೆಚ್ಚು ಸಿನಿಮಾ ಬಿಡುಗಡೆ ಕಾಣುತ್ತವೆ..
ಎಲ್ಲರಿಗೂ ಗೊತ್ತು ವರ್ಷದ ಕೊನೆ ಬಿಡುಗಡೆಯ ಪ್ರಸವ ವೇದನೆ ಎಲ್ಲವೂ ಇರುತ್ತದೆ..
ಆದರೆ ಚಿತ್ರಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿತೆಂಬುದೇ ಪುಣ್ಯ.. ಬಂಧು ಬಾಂಧವರು, ಸ್ನೇಹಿತರು ಸಿನಿಮಾ ನೋಡಿ ಹರಸಿ ಹಾರೈಸುತ್ತಾರೆ. ಅದು ಎರಡನೇ ಭಾಗ್ಯ..
ಆದರೆ ಪ್ರೇಕ್ಷಕ ಪ್ರಭು ಆಶೀರ್ವಾದ ಸಿಗುವುದಿಲ್ಲ.. ಸಿಕ್ಕರೂ ಅತ್ಯಲ್ಪ..
‘ಈ ಸುಖಕ್ಕೆ ಸಿನಿಮಾ ಏಕೆ ಮಾಡಬೇಕಿತ್ತು..’ ಎಂಬುದು ಅತಿ ದೊಡ್ಡ ಪ್ರಶ್ನೆ.. ಆದರೆ ಸಿನಿಮಾ ನಿಂತ ನೀರಲ್ಲ.. ಅದು ಹರಿಯುತ್ತಲೇ ಇರುತ್ತದೆ.. ಅದರಲ್ಲೂ ಡಿಜಿಟಲ್ ಯುಗದಲ್ಲಿ ಸಿನಿಮಾ ಮಾಡುವುದು ಅತಿ ಸುಲಭ..
ಯಾರೋ ಹಣ ಹಾಕುತ್ತಾರೆ.. ಪಾಪ ಅವರ ಭರವಸೆಗಳು ದೊಡ್ಡವು.. ಸಿನಿಮಾ ಭ್ರಮೆಯಲ್ಲಿ ತೇಲಿದವರು.. ಇತ್ತ ಕ್ರಿಯಾಶೀಲ ನಡೆಯಲ್ಲಿ ಅಥವಾ ಕಾಯಕದ ನಿಷ್ಠೆಯಲ್ಲಿ ಸಿನಿಮಾ ಮಾಡುತ್ತಾರೆ.. ಪಾಪ ಅವರಲ್ಲಿ ಕೆಲವರದು ಕಿಚ್ಚು, ಸಂಕಲ್ಪ; ಮತ್ತೆ ಕೆಲವರದು ಭ್ರಮೆ; ಇನ್ನೂ ಕೆಲವರದು ತೆವಲು..
ಪ್ರೇಕ್ಷಕನಿಲ್ಲದೆ ನರಳುತ್ತವೆ ಚಿತ್ರಗಳು.. ಕೊನೆಗೆ ಬಂದಷ್ಟೇ ವೇಗವಾಗಿ ಮರೆಯಾಗುತ್ತವೆ. ಇತ್ತ ನಿರ್ಮಾಪಕ ಅಸಹಾಯಕ. ದೊಡ್ಡ ಪ್ರಯತ್ನದ ಕನಸು ಕಂಡ ನಿರ್ದೇಶಕರಿಗೆ ಭ್ರಮನಿರಸನ..
ಈ ವರ್ಷದಲ್ಲಿ ಕೇವಲ ಎರಡು ಮೂರು ಅಥವಾ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಗೆಲುವಿನ ಮಾತಾಡಿದವು.. ಇನ್ನು ಕೆಲವು ಚಿತ್ರಗಳಿಗೆ ಗೆಲುವಿದ್ದರೂ ತುತ್ತು ಬಾಯಿಗೆ ಬರಲಿಲ್ಲ..
ಸಿನಿಮಾ ಕ್ಷೇತ್ರ ಸಾಮಾನ್ಯವಲ್ಲ; ಸಿನಿಮಾ ನಿರ್ಮಾಣ ಸುಲಭವೂ ಅಲ್ಲ.. ಗೊತ್ತಿದ್ದೂ ಭ್ರಮೆಯಲ್ಲಿ ತೇಲುತ್ತಾ ಕಷ್ಟ ಎದುರು ಹಾಕಿಕೊಳ್ಳುವವರಿಗೆ ಏನು ಹೇಳುವುದು..
ಇಂತಹ ಸಿನಿಮಾ ಗೆಲ್ಲುತ್ತದೆ ಎಂದು ಯಾರೂ ಭವಿಷ್ಯ ನುಡಿಯುವುದು ಸಾಧ್ಯವಿಲ್ಲ.. ಅತಿರಥ ಮಹಾರಥರೇ ಸೋತು ಸುಣ್ಣವಾಗಿದ್ದಾರೆ. ಸೋಲು ನಿಶ್ಚಿತವೂ ಅಲ್ಲ.. ರಾತ್ರೋ ರಾತ್ರಿ ಸ್ಟಾರ್ ಆದವರೂ ಇದ್ದಾರೆ..
ಹಾಗಾಗಿ ಪ್ರಯತ್ನಗಳು ಸೋಲುವುದಿಲ್ಲ.. ಅದು ನಿರಂತರ.. ಆದರೆ ಆ ನೆಪದಲ್ಲಿ ‘ಅನ್ನದಾತ’ ಎನಿಸಿಕೊಂಡ ನಿರ್ಮಾಪಕ ಅಮಾಯಕ, ಅಸಹಾಯಕ ಆಗಿ ನರಳುವುದು ಮಾತ್ರ ಬೇಡ..
ಈ ದಿಕ್ಕಿನಲ್ಲಿ ಯೋಚಿಸಿದರೆ; ಮನಸ್ಸು ಚಿಂತೆಗೆ ದೂಡಲ್ಪಡುತ್ತದೆ. ಮೊನ್ನೆ ಯಾರೋ ಒಬ್ಬ ಅಮಾಯಕ ಮಹಿಳೆಯೊಬ್ಬರಿಂದ 18 ಲಕ್ಷ ಖರ್ಚು ಮಾಡಿಸಿ, ಇತ್ತ ಚಿತ್ರವನ್ನೂ ಮುಗಿಸದೇ ಆಕೆ ಸಾಲ ಮತ್ತು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ್ದು ಸುದ್ದಿಯಾಗಿದೆ..
ಇಂತಹ ಎಷ್ಟೋ ಪ್ರಕರಣಗಳು ಚಿತ್ರರಂಗದಲ್ಲಿ ನಿರಂತರವಾಗಿವೆ..
ಇಂತಹ ವಂಚನೆಗಳು ನಿಲ್ಲ ಬೇಕಾಗಿದೆ; ಆದರೆ ಬದುಕಿಗೆ ವಂಚನೆಯೇ ಆಧಾರ ಎಂದು ಕೊಂಡವರು ವಂಚಿಸುತ್ತಲೇ ಇರುತ್ತಾರೆ..
ಬದಲಾದ ಕಾಲಮಾನದಲ್ಲಿ ಒಳ್ಳೆಯ ವಿಷಯಗಳೂ ಇವೆ. ಉತ್ತಮ ರೀತಿಯಲ್ಲಿ ಸಿನಿಮಾ ಮಾಡಿ ‘ನಾವು ಸೇಫ್’ ಎಂದವರೂ ಇದ್ದಾರೆ.
ಈಗ ಸಿನಿಮಾ ಏನಿದ್ದರೂ ದಕ್ಷಿಣ ಭಾರತಕ್ಕೆ ತಲುಪುತ್ತದೆ.. ಚೆನ್ನಾಗಿದ್ದರೆ ಪ್ಯಾನ್ ಇಂಡಿಯಾ ಆಗುತ್ತದೆ.. ನಿರ್ಮಾಪಕ ಕೈ ಸುಟ್ಟುಕೊಳ್ಳದಂತೆ ಓಟಿಟಿಗೆ, ಡಬ್ಬಿಂಗ್ ಮಾರಾಟದ ಅವಕಾಶಗಳೂ ಇವೆ..
ಹಾಗಾಗಿ ಈ ವರ್ಷದಲ್ಲಿ ಕೆಲವು ನಿರ್ಮಾಪಕರು ಮಾತ್ರ ನಾವು ಸೇಫ್ ಎಂದರು.. ಓಟಿಟಿ ಮತ್ತು ಇತರ ಅನುಕೂಲಗಳು ಅವರಿಗೆ ಹಾಕಿದ ಬಂಡವಾಳ ಮತ್ತು ಕೊಂಚ ಲಾಭ ತಂದು ಕೊಟ್ಟಿರಬಹುದು ಅಷ್ಟೇ..
ಆದರೆ ಪ್ರಯತ್ನದಲ್ಲಿ ಹೊಸತನ ಇರಬೇಕು.. ಕೆಲವೊಮ್ಮೆ ಅದೂ ಕಷ್ಟ.. ಹೊಸತನ ಇದ್ದರೂ ಅದೃಷ್ಟ ಕೈ ಹಿಡಿಯಬೇಕು..