ಇಲ್ಲಿ ಕಿರಿಯ ತಮ್ಮ ಚಿತ್ರ ನಿರ್ದೇಶನ ಮಾಡಿದ್ದರೆ; ಅವರ ಇಬ್ಬರು ಅಣ್ಣಂದಿರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..
ಅದೇ ಸಪ್ಲೇಯರ್ ಶಂಕರ..!
ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಾಪಕರು ಹಾಗೂ ಅವರ ಸಹೋದರ
ರಂಜಿತ್ ಸಿಂಗ್ ರಜಪೂತ್ ನಿರ್ದೇಶಕ. ‘ಗಂಟು ಮೂಟೆ’ ಹಾಗೂ ಟಾಮ್ ಅಂಡ್ ಜೆರ್ರಿ’ ಖ್ಯಾತಿಯ ನಿಶ್ಚಿತ್ ಕರೋಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಶುಕ್ರವಾರ ಆನಂದ್ ಆಡಿಯೋ ಮೂಲಕ ಚಿತ್ರದ ಟೀಸರ್ ಬಿಡುಗಡೆ ಕಂಡಿತು. ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಅದನ್ನು ಬಿಡುಗಡೆ ಮಾಡಿದರು.
ತಮ್ಮನಿಗೆ ಚಿತ್ರ ನಿರ್ದೇಶಕ ಆಗುವ ಆಸೆ. ಅದನ್ನು ಅಣ್ಣಂದಿರು ಪೂರೈಸಿದ್ದಾರೆ. ಹಾಗಾಗಿ ಈ ಚಿತ್ರ ನಿರ್ಮಾಣಗೊಂಡಿದೆ ಎಂಬುದಾಗಿ ನಿರ್ಮಾಪಕರಿಬ್ಬರೂ ಮಾಹಿತಿ ನೀಡಿದರು.
ಅಮಾಯಕನೊಬ್ಬ ಪೊಲೀಸರ ಕೈಗೆ ಸಿಕ್ಕು ಅನುಭವಿಸುವ ಹಿಂಸೆ ಮತ್ತು ಯಾತನಾಮಯ ಚಿತ್ರಣ ಇದರಲ್ಲಿದೆ. ಆದರೆ ಇದು ನಿಜ ಜೀವನದ ಕಥೆ ಅಲ್ಲ; ಕಾಲ್ಪನಿಕವಾಗಿ ಕಥೆ ಹೆಣೆಯಲಾಗಿದೆ ಎಂಬ ವಿವರ ಕೊಟ್ಟರು ನಿರ್ದೇಶಕ ರಂಜಿತ್ ಸಿಂಗ್.
ಚಿತ್ರದ ಸಲುವಾಗಿ ನಿಶ್ಚಿತ್ ಕರೋಡಿ ಬಹಳವೇ ಶ್ರಮಪಟ್ಟಿದ್ದಾರೆ. ಇಲ್ಲಿ
ಹೊಸತಂಡ ಕಾರ್ಯ ನಿರ್ವಹಿಸಿದೆ. ತಂತ್ರಜ್ಞರು ಹೊಸಬರಾದರೂ ವಿನೂತನ ನೆಲೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರೀಕರಣ ಹೆಚ್ಚು ದಿನ ಮಾಡಿದ್ದರಿಂದ ಬಜೆಟ್ ಕೂಡ ಹೆಚ್ಚಾಗಿದೆ ಎಂದರು ನಿರ್ದೇಶಕರು.
ಇದರಲ್ಲಿ ಬಾರ್ ಸಪ್ಲೇಯರ್ ಪಾತ್ರ ನನ್ನದು. ಒಳಗೆ ಬೇರೆ ಬೇರೆ ವಿಷಯಗಳೂ ಇವೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಸದ್ಯದಲ್ಲಿಯೇ ಚಿತ್ರಮಂದಿರಗಳಿಗೆ ಬರಲಿದೆ ಎಂದರು ನಟ ನಿಶ್ಚಿತ್ ಕರೋಡಿ.
ಅವರ ಎದುರು ನಟಿಸಿರುವ ದೀಪಿಕಾ ಆರಾಧ್ಯ ಚಿತ್ರದಲ್ಲಿ ಶಿಕ್ಷಕಿ ಪಾತ್ರವನ್ನು ನಿರ್ವಹಿಸಿರುವೆ; ಪಾತ್ರದ ಬಗ್ಗೆ ಹೆಚ್ಚು ಹೇಳುವುದಿಲ್ಲ ತೆರೆಯ ಮೇಲೆ ನೋಡಿರಿ ಎಂಬ ಉತ್ತರ ಬಂತು ಅವರಿಂದ.
ಸಂಗೀತ ನಿರ್ದೇಶಕ ಆರ್ ಬಿ ಭರತ್ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ರವಿ ಬಸ್ರೂರ್ ನನ್ನ ಗುರು ಎಂದು ಹೇಳಿಕೊಂಡರು. ಛಾಯಾಗ್ರಾಹಕ ಸತೀಶ್ ಕುಮಾರ್, ಸಂಕಲನಕಾರ ಸತೀಶ್ ಚಂದ್ರಯ್ಯ ಮಾತನಾಡಿದರು.