ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ಮುಖ್ಯ ಪಾತ್ರದಲ್ಲಿರುವ ‘ಮೆಜೆಸ್ಟಿಕ್-2’ ಚಿತ್ರದ ಹೊಸ ಹಾಡು ಬಿಡುಗಡೆಗೊಂಡಿದೆ.
‘ನಾಯಕ ನಾನೇ..’ ಎಂಬ ಹಾಡನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಈಚೆಗೆ ಬಿಡುಗಡೆ ಮಾಡಿದರು.
ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಕೋಟೆನಾಡು ಚಿತ್ರದುರ್ಗದ ಹೆಚ್.ಆನಂದಪ್ಪ ನಿರ್ಮಿಸಿರುವ ‘ಮೆಜೆಸ್ಟಿಕ್-2’ ಚಿತ್ರವನ್ನು ರಾಮು ನಿರ್ದೇಶನ ಮಾಡಿದ್ದಾರೆ.
ಯುವನಟ ಭರತ್ ಕುಮಾರ್, ಸಂಹಿತಾ ವಿನ್ಯಾ ಮುಖ್ಯ ಪಾತ್ರದಲ್ಲಿರುವ ಚಿತ್ರವೀಗ ಬಿಡುಗಡೆಗೆ ಸಜ್ಜುಗೊಂಡಿದೆ.
ಚಿತ್ರವನ್ನು ಯಾವುದಕ್ಕೂ ಕೊರತೆಯಾಗದಂತೆ ದೊಡ್ಡ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಬೆಂಗಳೂರು, ಚಿತ್ರದುರ್ಗದ ಮರುಘಾ ಮಠ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅತ್ಯುತ್ತಮ ಮೂಡಿ ಬಂದಿದೆ ಎಂಬ ವಿವರ ಕೊಟ್ಟರು ನಿರ್ಮಾಪಕ ಹೆಚ್. ಆನಂದಪ್ಪ.
ಆನಂದಪ್ಪ ಅವರ ಧೈರ್ಯ ಮತ್ತು ಸಾಹಸಗಳ ಫಲವಾಗಿ ಚಿತ್ರವು ಉತ್ತಮವಾಗಿ ಮೂಡಿ ಬಂದಿದೆ ಎಂದವರು ನಿರ್ಮಾಪಕ ಶಿಲ್ಪ ಶ್ರೀನಿವಾಸ್.
ವಿನು ಮನಸು ಸಂಗೀತ ನೀಡಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ ಎಂಬ ಮಾಹಿತಿಗಳು ಬಂದವು. ನಟಿ ಶೃತಿ ತಾಯಿ ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರದ ಬಗ್ಗೆ ಪ್ರಶಂಸೆಗಳು ಬಂದವು.
ನಿರ್ದೇಶಕ ರಾಮು ಮತ್ತು ನಟ ಭರತ್ ಕುಮಾರ್ ಚಿತ್ರದ ಒಳಗಿನ ಮತ್ತು ಹೊರಗಿನ ಸಾಹಸಗಳ ಬಗ್ಗೆ ಹೇಳಿಕೊಂಡರು.
ಮೆಜೆಸ್ಟಿಕ್ ಪ್ರದೇಶದೊಳಗೆ ಏನೆಲ್ಲಾ ನಡೆಯುತ್ತವೆ ಎಂಬುದರ ವಿವರಣೆ ಜೊತೆಗೆ ಕುತೂಹಲ ಹುಟ್ಟಿಸುವ ಕಥೆ ಚಿತ್ರದ ಮುಖ್ಯಾಂಶವಾಗಲಿದೆ ಎಂದರು ನಿರ್ದೇಶಕ ರಾಮು.
ನನ್ನದು ಮಧ್ಯಮ ವರ್ಗದ ಹುಡುಗಿಯ ಪಾತ್ರ ಎಂಬುದು ನಟಿ ಸಂಹಿತ ವಿನ್ಯಾ ನೀಡಿದ ವಿವರಣೆ. ವೀನಸ್ ಮೂರ್ತಿ ಛಾಯಾಗ್ರಹಣ, ವಿಜಯಕುಮಾರ್ ಸಹಾಯಕ ನಿರ್ದೇಶನ, ಚಿನ್ನಯ್ಯ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಮೆಜೆಸ್ಟಿಕ್ ಅಲ್ಲದೆ ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ವಿಶೇಷವಾಗಿ ಕನಸಿನ ರಾಣಿ ಮಾಲಾಶ್ರೀ ಅಭಿನಯದ ಹಾಗೂ ಭರತ್ ಕುಮಾರ್ ಪರಿಚಯದ ಹಾಡನ್ನು ಆರ್.ಎಸ್. ಗೌಡ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ ಎಂಬ ವಿವರಣೆ ನೀಡಿತು ಚಿತ್ರತಂಡ.