* ಎಳ್ಳು ಬೆಲ್ಲ ಹಂಚಿದ ತಂಡ *
* ಹಾಲಿವುಡ್ ತಂತ್ರಜ್ಞರು *
* ಮೈ ನವಿರೇಳಿಸುವ ಸಾಹಸ *
ಕನ್ನಡದ ಅದ್ದೂರಿ ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡಿರುವ ಬಹು ತಾರಾಗಣ ಹಾಗೂ ಬಹುಕೋಟಿ ವೆಚ್ಚದ ’45’ ಬಿಡುಗಡೆಗೆ ದಿನಾಂಕ ಘೋಷಣೆ ಮಾಡಲಾಗಿದೆ.
ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ’45’ ಚಿತ್ರವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ ಮಾಡಿರುವುದು ವಿಶೇಷ.
ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಸಿಹಿ ಹಂಚುವ ಕಾರ್ಯಕ್ರಮದ ಜೊತೆಗೆ ಅರೈವಲ್ ಎಂಬ ವಿಡಿಯೋ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿತು.
ಬರುವ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಚಿತ್ರ ತೆರೆ ಕಾಣಲಿದೆ. ಇನ್ನು ಏಳು ತಿಂಗಳು ಇರುವಾಗಲೇ ಬಿಡುಗಡೆಯ ಘೋಷಣೆ ಮಾಡಿದ್ದರ ಹಿಂದೆ ಚಿತ್ರದ ತಂತ್ರಜ್ಞಾನದ ಬಳಕೆಯ ಶ್ರಮದ ವಿಷಯಗಳು ಬಿಚ್ಚಿಕೊಂಡವು.
ಅಮೆರಿಕದಲ್ಲಿ ಚಿಕಿತ್ಸೆ ಪಡೆದಿರುವ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಮೊದಲು ವಿಡಿಯೋ ಮೂಲಕ ತಂಡಕ್ಕೆ ಶುಭ ಹಾರೈಸಿದರು. ಬಳಿಕ ಈ ಚಿತ್ರದಲ್ಲಿ ವಿಶೇಷವಾಗಿ ಹಾಲಿವುಡ್ ತಂತ್ರಜ್ಞರು ಭಾಗಿಯಾಗುವ ವಿಷಯ ವಿಡಿಯೋ ಮೂಲಕವೇ ಬಿಚ್ಚಿಟ್ಟಿತು ಚಿತ್ರತಂಡ.
ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ.ಶೆಟ್ಟಿ, ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಚಿತ್ರದ ಬಗ್ಗೆ ವಿವರಗಳನ್ನು ನೀಡಿದರು.
ಇದಕ್ಕೂ ಮುಂಚೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆ.ವಿ.ಎನ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ನಾರಾಯಣ್, ಮಾಜಿ ಶಾಸಕ ರಾಮಚಂದ್ರಗೌಡ, ನಿರ್ಮಾಪಕ ಕೆ.ಮಂಜು, ಅವರ ಪುತ್ರ ಶ್ರೇಯಸ್ ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಹುಟ್ಟುಹಬ್ಬ ಆಚರಿಸಿಕೊಂಡ ರಮೇಶ್ ರೆಡ್ಡಿ ಅವರ ಪುತ್ರ ಸೂರಜ್, ಬಿಡುಗಡೆ ದಿನಾಂಕ ಘೋಷಣೆಯ ವಿಡಿಯೋ ಬಿಡುಗಡೆ ಮಾಡಿದರು.
ಡಾ. ಸಂಜಯ್ ಗೌಡ, ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಛಾಬ್ರಿಯಾ, ಆನಂದ್ ಛಾಬ್ರಿಯಾ, ಇಂದ್ರಜಿತ್ ಲಂಕೇಶ್, ಕಿರಣ್ ಭರ್ತೂರ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.
ಸಾಹಸ ನಿರ್ದೇಶಕರಾದ ಡಾ.ರವಿವರ್ಮ, ಡಿಫರೆಂಟ್ ಡ್ಯಾನಿ, ಛಾಯಾಗ್ರಾಹಕ ಸತ್ಯ ಹಗ್ಡೆ ಸೇರಿದಂತೆ ಚಿತ್ರತಂಡದ ಸದಸ್ಯರು ಮತ್ತು ಗಣ್ಯರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೂ ವಿಶೇಷವಾಗಿತ್ತು.
ಚಿತ್ರ ಅದ್ದೂರಿಯಾಗಿದೆ. ಬಜೆಟ್ ಚಿತ್ರದಲ್ಲಿಯೇ ಕಾಣುತ್ತದೆ. ಚಿತ್ರ ಎಷ್ಟು ಗಳಿಕೆ ಮಾಡುತ್ತದೆ ಎಂಬುದನ್ನು ಈಗಲೇ ಚರ್ಚೆ ಮಾಡುವುದು ಬೇಡ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.
ಈ ಚಿತ್ರಕ್ಕಾಗಿ ಕೆನಡಾದ ತಂತ್ರಜ್ಞರು ಸಿಜಿ ಮತ್ತಿತರ ಕೆಲಸಗಳನ್ನು ಮಾಡುವ ಕುರಿತು ವಿವರಗಳನ್ನು ನಿರ್ದೇಶಕ ಅರ್ಜುನ್ ಜನ್ಯ ನೀಡಿದರು.
ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಕಾಂಬಿನೇಷನ್ ಅದ್ಭುತ. ಈ ಸಮಾರಂಭ ನೋಡಿದರೆ ಚಿತ್ರದ ದಿನಾಂಕ ಪ್ರಕಟಣೆ ಮಾಡುವ ಸಮಾರಂಭದಂತ್ತಿಲ್ಲ. ಬದಲಿಗೆ ಚಿತ್ರದ ಯಶಸ್ಸಿನ ಮಿಲನದಂತಿದೆ ಎಂದರು ರಿಯಲ್ ಸ್ಟಾರ್ ಉಪೇಂದ್ರ.
ಈ ಚಿತ್ರದಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿರುವುದು ಪುಣ್ಯ. ಉಪೇಂದ್ರ ಅವರನ್ನು ನೋಡುತ್ತಾ ಬೆಳೆದ ನನಗೆ ಅವರ ಜೊತೆ ಕೆಲಸ ಮಾಡುವ ಅವಕಾಶ ಕೂಡ ಪುಣ್ಯದ್ದಾಗಿದೆ ಎಂದರು ರಾಜ್ ಬಿ.ಶೆಟ್ಟಿ.