ರಮೇಶ್ ಅರವಿಂದ್ ಮುಖ್ಯ ಪಾತ್ರದಲ್ಲಿರುವ ‘ಶಿವಾಜಿ ಸುರತ್ಕಲ್ 2’ ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿರುವಂತೆ ಆ ಚಿತ್ರದ ಪ್ರಚಾರ ಕಾರ್ಯ ಬಿರುಸುಗೊಂಡಿದೆ.
ಈಚೆಗೆ ನಡೆದ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಇಡೀ ಚಿತ್ರ ತಂಡ ಉತ್ಸಾಹದಿಂದ ಪಾಲ್ಗೊಂಡು ಚಿತ್ರದ ಅನೇಕ ವಿಶೇಷತೆಗಳ ಬಗ್ಗೆ ತಿಳಿಸಿಕೊಟ್ಟಿತು.
ಮುಖ್ಯವಾಗಿ ನಿರ್ದೇಶಕ ಆಕಾಶ್ ಶ್ರಿವತ್ಸ ನಿರೂಪಣೆಯ ಜವಾಬ್ದಾರಿ ಹೊತ್ತು ಚಿತ್ರದ ಕಥೆ ಹುಟ್ಟಿದ ಪರಿ ಮತ್ತು ನಂತರದ ಬೆಳವಣಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಅದು ನಡುಕ ಹುಟ್ಟಿಸುವ ಕಾಲ. ಕೊವಿಡ್ ನೈಟ್ ಮೇರ್. ಆ ಕಾಲದಲ್ಲಿ ನಮ್ಮ ಈ ಕಥೆ ಹುಟ್ಟಿತು. ಪ್ರತಿ ದಿನವೂ ರಮೇಶ್ ಅರವಿಂದ್ ಸರ್ ಜೊತೆ ಫೋನ್ ನಲ್ಲಿ ಮಾತನಾಡುತ್ತಾ ಕಥೆ ವಿವಿಧ ರೂಪವನ್ನು ಪಡೆಯುತ್ತಾ ಹೋಯಿತು ಎಂದು ಹೇಳುತ್ತಾ ಹೋದರು ನಿರ್ದೇಶಕ ಆಕಾಶ್ ಶ್ರೀವತ್ಸ.
ಇದೊಂದು ಮಿಸ್ಟರಿ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮುಗಿದ ಬಳಿಕವೂ ಕಾಡುತ್ತದೆ. ಅದು ಮಾಯಾವಿ ಜಗತ್ತು. ಈ ಮಾಯಾವಿ ಯಾರು ಎಂಬುದೇ ನಿಗೂಢವಾದ ವಿಷಯ ಎಂದರು.
ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ಚಿತ್ರದ ನಿರ್ದೇಶಕರು. ಒಂದು ಪಾಸಿಟಿವ್ ಟೀಂ ಸೇರಿದ್ರೆ ಯಶಸ್ಸು ಎಂದರು ಅನೂಪ್ ಗೌಡ.
ಬೇಬಿ ಅರಾಧ್ಯ, ರಾಘು ರಾಮನಕೊಪ್ಪ, ವಿನಾಯಕ ಜೋಷಿ,
ವಿದ್ಯಾಮೂರ್ತಿ, ನಿಧಿ ಹೆಗಡೆ,
ಪುನೀತ್ ಬಿ.ಎ ಮೊದಲಾದ ಕಲಾವಿದರು ಚಿತ್ರದ ಬಗ್ಗೆ ವಿವರ ನೀಡಿದರು.
ಪ್ರಮುಖ ಪಾತ್ರದಲ್ಲಿ ನಟಿಸಿರುವ ಮೇಘನಾ ಗಾಂವ್ಕರ್, ರಾಧಿಕಾ ನಾರಾಯಣ್ ಹಾಗೂ ಸಂಗೀತ ಶೃಂಗೇರಿ ತಮ್ಮ ಪಾತ್ರಗಳ ವಿವರ ಕೊಟ್ಟರು.
ಅಪ್ಪ ಪೊಲೀಸ್ ಅಧಿಕಾರಿ. ನಾನು ಪೊಲೀಸ್ ಅಧಿಕಾರಿಯಾಗಬೇಕೆಂದು ಆಸೆ ಪಟ್ಟಿದ್ದರು. ಅದು ಸಿನಿಮಾದಲ್ಲಿ ಈಡೇರಿದೆ. ಏಕೆಂದರೆ ನಾನು ಐಪಿಎಸ್ ಅಧಿಕಾರಿ ಪಾತ್ರ ನಿರ್ವಹಿಸಿರುವೆ ಎಂದರು ಮೇಘನಾ ಗಾಂವ್ಕರ್.
ಈ ಚಿತ್ರ ಕೊರೊನಾ ಕಾಲದಲ್ಲಿ ಹುಟ್ಟಿದ್ದು, ಆಗಿನಿಂದ ಇಡೀ ಚಿತ್ರತಂಡ ಜೊತೆಗಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಉತ್ಸಾಹ ದೊಡ್ಡದು ಎಂದರು ರಮೇಶ್ ಅರವಿಂದ್.
ಶಿವಾಜಿ 1 ಶಿವಾಜಿ 2 ಮಾಯಾವಿ ಹುಡುಕಾಟ, ಒಬ್ಬ ವ್ಯಕ್ತಿ ಹತ್ತಾರು ಕೊಲೆ.. ಹೀಗೆ ಎಲ್ಲೆಲ್ಲಿಯೋ ಸಾಗುವ ಕಥೆ. ನಿಗೂಢ ಎಂಬುದನ್ನು ಹೇಳಲೇ ಬೇಕಿಲ್ಲ. ಪ್ರೇಕ್ಷಕನಿಗೆ ಇಲ್ಲಿ ಕದನ ಕುತೂಹಲ ಎಂದರು.