ಇದು ಗಾಂಧೀಜಿಯವರ ಮೂರು ಕೋತಿಗಳ ಕಥೆ ಅಲ್ಲ; ಆದರೆ ಮೂವರ ಜೀವನಾನುಭವದ ಕಥೆ..
ಒಬ್ಬನಿಗೆ ಮಾತು ಬರಲ್ಲ. ಮತ್ತೊಬ್ಬನಿಗೆ ಕಿವಿ ಕೇಳುವುದಿಲ್ಲ; ಮುಖ್ಯ ಪಾತ್ರಧಾರಿಗೆ ಕಣ್ಣು ಕಾಣುವುದಿಲ್ಲ. ಇಂತಹ ಮೂರು ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.
ಅದೇ ಪರ್ಯಾಯ..!
ಬೆಳಗಾವಿ ಮೂಲದ ಕೆಲವು ಸ್ನೇಹಿತರು ಸೇರಿ ಮಾಡಿದ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದಿದ್ದು, ಚಿತ್ರದ ಟೀಸರ್ ಹಾಗೂ ಸಾಹಿತ್ಯವಿರುವ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿತ್ತು.
ಮಮತಾ ಕ್ರಿಯೇಷನ್ಸ್ ಮೂಲಕ ರಾಜಕುಮಾರ್ ಹಾಗೂ ಇಂದುಮತಿ ರಾಜಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಪತ್ರಕರ್ತ
ರಮಾನಂದ ಮಿತ್ರ ನಿರ್ದೇಶನ ಮಾಡಿದ್ದಾರೆ.
ಮೂವರು ಚೇತನರ ಕಥೆ ಇದಾಗಿದ್ದು, ಅಂಧ ವ್ಯಕ್ತಿಯ ಪಾತ್ರದಲ್ಲಿ ನಿರ್ಮಾಪಕ ರಾಜಕುಮಾರ್ ಅವರೇ ನಟಿಸಿದ್ದಾರೆ ಎಂದರು ನಿರ್ದೇಶಕ ರಮಾನಂದ್ ಮಿತ್ರ.
ಅಂಧ ಚೇತನರೇ ಆಗಿರುವ ಮೆಹಬೂಬ್ ಸಾಬ್ ತಾಯಿ ಕುರಿತು ಹಾಡಿರುವ ಮನ ಮಿಡಿಯುವ ಗೀತೆಯ (ಸಾಹಿತ್ಯವಿರುವ) ಹಾಡು ಈಗ ಬಿಡುಗಡೆಗೊಂಡಿದೆ ಎಂದರು.
ಪತ್ರಕರ್ತನಾಗಿರುವ ನನಗೆ ಚಿತ್ರ ನಿರ್ದೇಶನ ಎರಡನೇ ಪ್ರಯತ್ನ ಎಂದು ಹೇಳಿಕೊಂಡರು ರಮಾನಂದ ಮಿತ್ರ.
ಡಾ.ಪುನೀತ್ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿರುವ
ರಾಜಕುಮಾರ್, ಪುನೀತ್ ಅವರ ಸ್ಮರಣೆಯಲ್ಲೇ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿ, ಮುಂದೆ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನಾಂಕದ ಆಸುಪಾಸಿನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಪುನೀತ್ ರಾಜ್ಕುಮಾರ್ ಅವರ ಮೇಲಿರುವ ಪ್ರೀತಿಯೇ ಈ ಸಿನಿಮಾ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದು ರಾಜಕುಮಾರ್ ಹೇಳಿಕೊಂಡರು.
ಸಹ ನಿರ್ಮಾಪಕರಾಗಿರುವ ಮುರುಗೇಶ್ ಬಿ.ಶಿವಪೂಜಿ ಕಿವಿ ಕೇಳದ ವ್ಯಕ್ತಿ ಪಾತ್ರದಲ್ಲಿ ನಟಿಸಿದ್ದು, ರಂಜನ್ ಕುಮಾರ್ ಮಾತು ಬಾರದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡಿದ್ದು, ನಾಲ್ಕು ಹಾಡುಗಳಿವೆ. ಒಂದು ತಾಯಿಯ ಭಾವನಾತ್ಮಕ ಹಾಡು ಇದೆ. ಇದನ್ನು ಮೆಹಬೂಬ್ ಸಾಬ್ ಹಾಡಿದ್ದಾರೆ ಎಂಬ ಮಾಹಿತಿ ಕೊಟ್ಟರು ಎ.ಟಿ.ರವೀಶ್.
ಇದೇ ವೇಳೆ ಲಿಂಬೆಹಣ್ಣು ತಿನ್ನುವುದರಲ್ಲಿ ಲಿಮ್ಕಾ ದಾಖಲೆ ಮಾಡಿರುವ ಲೆಮನ್ ಪರಶುರಾಮ್
ಚಿತ್ರಕ್ಕೆ ಸಾಹಿತ್ಯ ರಚಿಸಿರುವುದಲ್ಲದೆ ಒಂದು ಹಾಡನ್ನು ಹಾಡಿರುವ ಮಾಹಿತಿ ಬಂತು.
ಲೆಮೆನ್ ಪರುಶುರಾಮ್ ಅವರು 5 ನಿಮಿಷದಲ್ಲಿ 25 ಲಿಂಬೆಹಣ್ಣ ತಿನ್ನುವ ಮೂಲಕ ಲಿಮ್ಕಾ ರೆಕಾರ್ಡ್ ದಾಖಲೆಯ ಸಾಧನೆಯಾಗಿದೆ ಎಂಬ ವಿವರವೂ ಬಂತು.