* ಡಾ.ರಾಜ್ ಗೆ ಬಾಲಿವುಡ್ ಎಂದಿಗೂ ಪ್ರೇರಣೆಯಾಗಿರಲಿಲ್ಲ..*
*ಅಮಿತಾಬ್ ‘ಮಹಾನ್’ ಯಾಕೆ ಸೂಪರ್ ಹಿಟ್ ಆಗಲಿಲ್ಲ..*
* ಕೂಲಿ ಚಿತ್ರದಲ್ಲಿ ಅಭಿನಯಿಸಲು ರಾಜ್ ಗೆ ದುಂಬಾಲು ಬಿದ್ದಿದೇಕೆ..*
ಇದು ಹುಚ್ಚುತನದ ಪರಮಾಧಿ ಎಂದರು ತಪ್ಪಲ್ಲ; ಅಜ್ಞಾನದ ಪ್ರದರ್ಶನ ಎಂದರೂ ತಪ್ಪಲ್ಲ. ಏಕೆಂದರೆ ಇತಿಹಾಸದ ಅರಿವೇ ಇಲ್ಲದ ನಿರ್ದೇಶಕನೊಬ್ಬ ಮತ್ತಿನಲ್ಲಿ ಮಾತನಾಡಿದಂತಿದೆ.
ಅದು ರಾಮ್ ಗೋಪಾಲ್ ವರ್ಮ ಎಂಬ ಸೆಕ್ಸ್ ಮತ್ತು ಕ್ರೈಮ್ ಆಧಾರಿತ ಚಿತ್ರಗಳನ್ನೇ ಹೆಚ್ಚಾಗಿ ಮಾಡಿ ಜನಪ್ರಿಯವಾದ ದಕ್ಷಿಣ ಭಾರತದ ನಿರ್ದೇಶಕ. ತನ್ನ ನೆಲದ ಬಗ್ಗೆಯೇ ಕೆಟ್ಟದ್ದಾಗಿ ಮಾತನಾಡಿ ಅಪಹಾಸ್ಯಕ್ಕೆ ಈಡಾಗಿದ್ದಾರೆ.
ದಕ್ಷಿಣ ಭಾರತದ ಎನ್.ಟಿ.ರಾಮರಾವ್, ರಾ.ರಾಜ್ ಕುಮಾರ್, ಚಿರಂಜೀವಿ, ರಜನಿಕಾಂತ್ ಅವರು ಅಮಿತಾಬ್ ಚಿತ್ರಗಳನ್ನು ರೀಮೇಕ್ ಮಾಡಿ ಅಥವಾ ಪ್ರೇರಣೆ ಪಡೆದು ಯಶಸ್ವಿಯಾದರು ಎಂಬುದು ಅವರ ಮಾತಿನ ಸಾರ.
ಆದರೆ ಡಾ.ರಾಜ್ ಎಂದಿಗೂ ಅಮಿತಾಬ್ ಚಿತ್ರಗಳನ್ನು ರೀಮೇಕ್ ಮಾಡಲಿಲ್ಲ. ಜೊತೆಗೆ ಅಮಿತಾಬ್ ಬಚ್ಚನ್ ಅವರು ಡಾ.ರಾಜ್ ಕುಮಾರ್ ಅವರ ಬಗ್ಗೆ ಭಕ್ತಿಯ ಭಾವಗಳನ್ನು ಹೊಂದಿದ್ದರು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ.
ಅದು 80ರ ದಶಕ. ಬೆಂಗಳೂರಿನಲ್ಲಿ ಅಮಿತಾಬ್ ಬಚ್ಚನ್ ಅವರ ‘ಕೂಲಿ’ ಚಿತ್ರದ ಶೂಟಿಂಗ್ ನಡೆಯುತ್ತಿರುತ್ತದೆ. ಬೆಂಗಳೂರಿನ ಎಂ.ಎ.ಡೆಲ್ವಿ ಆ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್. ಅವರ ಮೂಲಕ ಅಮಿತಾಬ್ ಒಂದು ಆಸೆ ಈಡೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.
ಅದು ‘ಕೂಲಿ’ ಚಿತ್ರದ ಒಂದು ದೃಶ್ಯದಲ್ಲಿ ವರನಟ ಡಾ.ರಾಜ್ ಕುಮಾರ್ ಅಭಿನಯಿಸಬೇಕು. ಅಂದರೆ ರಾಜ್ ರೈಲಿನಿಂದ ಇಳಿದು ಬರುವಾಗ ಅಮಿತಾಬ್ ಕೂಲಿಯಾಗಿ ಕೆಲಸ ಮಾಡಬೇಕು ಎಂಬುದು ಆಶಯ.
ಬಾಲಿವುಡ್ ಮತ್ತು ಕನ್ನಡದ ಸಾಮರ್ಥ್ಯದ ಅರಿವಾಗುವುದು ಇಲ್ಲಿಯೇ.. ಆಗ ಡಾ.ರಾಜ್ ಚಿತ್ರಗಳು ಬಾಲಿವುಡ್ ಮತ್ತು ದಕ್ಷಿಣದ ಚಿತ್ರಗಳಿಗೆ ಮಾದರಿಯಾಗಿ ಹೋಗಿದ್ದವು.
ಮುಖ್ಯವಾಗಿ ‘ಕಸ್ತೂರಿ ನಿವಾಸ’ ಕಥೆ ಮತ್ತು ಡಾ.ರಾಜ್ ಮನ ಕಲಕುವ ಅಭಿನಯ. ಯಾರಿಂದಲೂ ಸಾಟಿಯಾಗದ ಯೋಚನೆಯಾಗಿತ್ತು.
ಮುಂದೆ ಡಾ.ರಾಜ್ ಕುಮಾರ್ ಬ್ಯಾನರ್ ಮೊದಲನೇ ಬಾರಿಗೆ ನಿರ್ಮಾಣ ಮಾಡಿದ್ದ ವಿ.ಸೋಮಶೇಖರ್ ನಿರ್ದೇಶನದ ‘ಶಂಕರ್ ಗುರು’ ಚಿತ್ರ ಬಾಲಿವುಡ್ ಪಂಡಿತರ ತಲೆ ಕೆಡಿಸಿತ್ತು.
ಶಂಕರ್ ಗುರು ಚಿತ್ರದಲ್ಲಿ ಡಾ.ರಾಜ್
ತ್ರಿಪಾತ್ರ ಮಾಡಿ ಅತ್ಯಂತ ಯಶಸ್ವಿಯಾಗಿದ್ದರು. ಆ ಚಿತ್ರ ತಮಿಳು ಹಾಗೂ ಹಿಂದಿಯಲ್ಲಿ ಮಾಡಲಾಯಿತು. ಸ್ವತಃ ಅಮಿತಾಬ್ ಬಚ್ಚನ್ ಅಭಿನಯಿಸಿದರು. ಆ ಚಿತ್ರದ ಹೆಸರು ಮಹಾನ್.
ಆದರೆ ಕನ್ನಡದಲ್ಲಿ ಯಶಸ್ವಿಯಾದ ರೀತಿ ಎಲ್ಲಿಯೂ ಆಗಲಿಲ್ಲ. ‘ಶಂಕರ್ ಗುರು’ ಚಿತ್ರ ಕನ್ನಡದ ಮಟ್ಟಿಗೆ ಇವತ್ತಿಗೂ ಫ್ರೆಶ್ ಆಗಿರುವ ಕಥೆ ಹೊಂದಿರುವ ಚಿತ್ರ.
ದಕ್ಷಿಣದ ನಟರು ಬಾಲಿವುಡ್ ಚಿತ್ರಗಳಿಂದ ಅದರಲ್ಲಿಯೂ ಅಮಿತಾಬ್ ಚಿತ್ರಗಳಿಂದ ಪ್ರೇರಣೆ ಹೊಂದಿದ್ದರು ಎಂಬ ರಾಮ್ ಗೋಪಾಲ್ ವರ್ಮ ಅವರಿಗೆ ಇತಿಹಾಸವೇ ತಿಳಿದಂತಿಲ್ಲ.
ಏಕೆಂದರೆ ಡಾ.ರಾಜ್ ಕುಮಾರ್ ಸಾಮಾಜಿಕ ಕಥೆಯುಳ್ಳ ಚಿತ್ರಗಳ ಜೊತೆಗೆ ಅವರ ಮೊದಲ ಚಿತ್ರ ‘ಬೇಡರ ಕಣಪ್ಪ’ದಿಂದ ಹಿಡಿದು ಭಕ್ತಿಸಾರವುಳ್ಳ ‘ಭಕ್ತ ಕನಕದಾಸ’ ‘ಸಂತ ಕಬೀರ’, ‘ಭಕ್ತ ಕುಂಬಾರ’ ಹಾಗೂ ಇಂತಹ ಅನೇಕ ಚಿತ್ರಗಳಲ್ಲಿ ತನ್ಮಯತೆಯಿಂದ ಅಭಿನಯಿಸಿ ಹೆಸರಾಗಿದ್ದರು. ‘ಬಬ್ರುವಾಹನ’, ‘ಕವಿರತ್ನ ಕಾಳಿದಾಸ’, ‘ಭಕ್ತ ಪ್ರಹ್ಲಾದ’ ಹಾಗೂ ಇನ್ನಿತರ ಐತಿಹಾಸಿಕ ಹಾಗೂ ಪೌರಾಣಿಕ ಚಿತ್ರಗಳಲ್ಲಿ ಸವಾಲೊಡ್ಡುವ ಅಭಿನಯ ನೀಡಿ ಮನೆ ಮಾತಾಗಿದ್ದರು.
ವಿಭಿನ್ನ ನೆಲೆಯ ಕಥೆಗಳನ್ನು ಹುಡುಕುತ್ತಿದ್ದ ಡಾ.ರಾಜ್ ಕುಮಾರ್ ಅವರಿಗೆ ಅವರೇ ಸಾಟಿಯಾಗಿದ್ದರು. 90ರ ದಶಕದಲ್ಲಿ ಬಂದ ಅವರ ಮತ್ತೊಂದು ಚಿತ್ರ ‘ಅನುರಾಗ ಅರಳಿತು’ ಚಿತ್ರದ ಕಥೆ ಎಲ್ಲಾ ಭಾಷೆಗಳಲ್ಲಿಯೂ ನಿರ್ಮಾಣವಾಗಿ ಸೂಪರ್ ಡೂಪರ್ ಹಿಟ್ ಆಗಿತ್ತು.
ಮಾತ್ರವಲ್ಲ; ‘ಮನ್ನನ್’ ಮೂಲಕ ರಜನಿಕಾಂತ್ ಅವರಿಗೆ ‘ಘರಾನಾ ಮೊಗಡು’ ಮೂಲಕ ಚಿರಂಜೀವಿ ಅವರಿಗೆ ಬ್ರೇಕ್ ಕೊಟ್ಟಿತ್ತು. ಹಿಂದಿಯಲ್ಲಿ ಅನಿಲ್ ಕಪೂರ್ ಆ ಪಾತ್ರವನ್ನು ನಿರ್ವಹಿಸಿದ್ದರು.
ಬಾಲಿವುಡ್ ಗೆ ಪೌರಾಣಿಕ ಚಿತ್ರಗಳನ್ನು ನಿರ್ಮಾಣ ಮಾಡುವುದೇ ಸವಾಲಾದ ಸನ್ನಿವೇಶ ಎದುರಿಸುವುದೇ ಕಷ್ಟಕರವಾಗಿತ್ತು. ಇನ್ನು ರಾಜ್ ಅವರು ಮಸಾಲೆ ಚಿತ್ರಗಳನ್ನು ಮಾಡುವುದರಿಂದ ದೂರವಿದ್ದರು.
ಆರಂಭಿಕ 19 ಚಿತ್ರಗಳನ್ನು ಹೊರತು ಪಡಿಸಿದರೆ ರಾಜ್ ರೀಮೇಕ್ ಚಿತ್ರಗಳಲ್ಲಿ ಹೆಚ್ಚು ಅಭಿನಯಿಸಲಿಲ್ಲ; ಶಂಕರ್ ನಾಗ್ ಅವರ ಜೊತೆ ಅಭಿನಯಿಸಿದ ‘ಅಪೂರ್ವ ಸಂಗಮ’ ಒಂದೇ ಬಾಲಿವುಡ್ ರೀಮೇಕ್ ಚಿತ್ರವಾಗಿತ್ತು. ಅದು ದೇವಾನಂದ್ ಅವರ ‘ಜಾನಿ ಮೇರಾ ನಾಮ್’ ಚಿತ್ರದ ರೀಮೇಕ್.
ಡಾ.ರಾಜ್ ಕುಮಾರ್ ಕನ್ನಡ ಮಣ್ಣಿನ ಶಕ್ತಿಯಾಗಿದ್ದರು. ಆಯಾ ಕಾಲ ಘಟ್ಟ ದಲ್ಲಿ ಜನರ ಧನಿಯಾಗಿದ್ದ ಅವರ ಚಿತ್ರಗಳು ಅದಕ್ಕೆ ಕಾರಣವಾಗಿದ್ದವು. ರಾಜ್ ಬಗ್ಗೆ ಎಂದಿಗೂ ವಿನಮ್ರ ಭಾವಗಳನ್ನು ಹೊಂದಿರುವ ಅಮಿತಾಬ್ ಬಚ್ಚನ್ ಎಂದಿಗೂ ಅವರ ಬಗ್ಗೆ ಮಾತನಾಡಲಿಲ್ಲ.
ಆದರೆ ಏನಾದರೂ ಮಾತನಾಡಿ ಸದಾ ಸುದ್ದಿಯಲ್ಲಿರುವ ಆರ್ ಜಿ ವಿ ಎಂಬ ನಿರ್ದೇಶಕ ವಿವೇಚನೆ ಇಲ್ಲದೆ ಮಾತನಾಡಿ ಕನ್ನಡಿಗರನ್ನು ಕೆಣಕಿರುವುದು ವಿಪರ್ಯಾಸ..